ಸರ್ವ ರೋಗಗಳಿಗೆ ಯೋಗ ರಾಮಬಾಣ ; ಚಂದ್ರಮೌಳಿಗೌಡ
ರಿಪ್ಪನ್ಪೇಟೆ: ಮನುಷ್ಯರು ಇಂದಿನ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಸಿಕ್ಕು ನಲುಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ವ ರೋಗಕ್ಕೂ ಯೋಗ ರಾಮಬಾಣವಾಗಿದೆ ಎಂದು ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿಗೌಡ ಹೇಳಿದರು.
ಸಮೀಪದ ಕೋಡೂರು ಗ್ರಾಮದ ಬ್ಲಾಸಂ ಆಂಗ್ಲ ಮಾಧ್ಯಮ ಸ್ಕೂಲ್ನಲ್ಲಿ ಆಯೋಜಿಸಲಾದ 9ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರಿಕರಿಸುತ್ತದೆ. ನಿತ್ಯ ಮುಂಜಾನೆ ಎಲ್ಲರೂ ಒಂದಿಷ್ಟು ಸಮಯವನ್ನು ಯೋಗಾಭ್ಯಾಸಕ್ಕೆ ಮೀಸಲಿಡುವುದರೊಂದಿಗೆ ಉತ್ತಮ ಆರೋಗ್ಯವಂತರಾಗಲು ಸಾಧ್ಯವಾಗುವುದೆಂದರು.
ಯೋಗ ತರಬೇತುದಾರ ಸುಬ್ರಹ್ಮಣ್ಯ ಭಟ್ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಸುಧಾಕರ್, ಶಿಕ್ಷಕರು ಹಾಜರಿದ್ದರು.
ಕಡೆಗೂ ಮಾನ್ಸೂನ್ ಪ್ರಾರಂಭ, ಕೃಷಿಕರಲ್ಲಿ ಮಂದಹಾಸ
ರಿಪ್ಪನ್ಪೇಟೆ : ಮಲೆನಾಡಿನಲ್ಲಿ ಜೂನ್ 10 ಕ್ಕೆ ಆರಂಭಗೊಳ್ಳಬೇಕಾದ ಮಳೆ ಜೂನ್ ಅಂತ್ಯ ಬಂದರೂ ಸುಳಿವಿಲ್ಲದಂತಾಗಿ ಕೃಷಿಕರು ಮುಗಿಲು ನೋಡುವ ಸ್ಥಿತಿ ಎದುರಾಗಿದ್ದು ಇಂದು ಮಧ್ಯಾಹ್ನ ಸಮಯದಲ್ಲಿ ಮಾನ್ಸೂನ್ ಮಳೆ ದಿಢೀರ್ ಆರಂಭಗೊಂಡ ಪರಿಣಾಮದಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಹೊಸನಗರ ಹಾಗೂ ರಿಪ್ಪನ್ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 45 ನಿಮಿಷಗಳಿಗೂ ಅಧಿಕ ಕಾಲ ಸುರಿದ ಭಾರಿ ಮಳೆಯಿಂದಾಗಿ ರೈತರು ಕಡೆಗೂ ಮುನಿಸಿಕೊಂಡ ಮಳೆ ಇಳೆಗೆ ಬಂದಳು ಎಂದು ತಮ್ಮ ಮಂದಹಾಸವನ್ನು ವ್ಯಕ್ತಪಡಿಸಿ ನಿಟ್ಟುಸಿರು ಬಿಟ್ಟರು.