ಅಪಾರ ಬೆಂಬಲಿಗರೊಂದಿಗೆ ಎಂ. ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ

0 80

ಶಿವಮೊಗ್ಗ : ಕೇಂದ್ರ ಬಿಜೆಪಿ ಸರ್ಕರದ ದುರಾಡಳಿತದಿಂದ ಜನ ಬೇಸತ್ತಿದ್ದು, ರಾಜ್ಯದ ಎಲ್ಲಾ ಪಕ್ಷಗಳ ಮಾಜಿ ಮತ್ತು ಹಾಲಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದು, ದಿನೇದಿನೇ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಯುತವಾಗಿ ಬೆಳೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದ್ದಾರೆ.

ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಎಂ. ಶ್ರೀಕಾಂತ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಿ ಮಾತನಾಡಿ, ರಾಜ್ಯದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಾ ಕೋಮು ಗಲಭೆಗಳಿಗೆ ಕಾರಣವಾದ ಬಿಜೆಪಿಯನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ನಾಶದತ್ತ ಸಾಗಿದೆ. ಮೋದಿ ಸುಳ್ಳಿನ ಕಂತೆಯನ್ನು ಜನ ಅರಿತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಎಂ.
ಶ್ರೀಕಾಂತ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಸಾವಿರಾರು ಭಾಷೆ ಮತ್ತು ಸಂಸ್ಕೃತಿ, ಧರ್ಮ ಉಳ್ಳ ಈ ದೇಶವನ್ನು ಕಾಂಗ್ರೆಸ್ ಪಕ್ಷವು ಒಟ್ಟಾಗಿ ತೆಗೆದುಕೊಂಡು ಬಂದಿದೆ. ಬಡವರು ಹಿಂದುಳಿದ ವರ್ಗಗಳ ಆಶೋತ್ತರಗಳನ್ನುಈಡೇರಿಸಿದೆ. ನಾವು ಸುಮ್ಮನೆ ಭಾಷಣ ಮಾಡುತ್ತಾ ಕುಳಿತರೆ ಆಗುವುದಿಲ್ಲ. ಪ್ರತಿಯೊಬ್ಬ ಮತದಾರನ ಮನೆ, ಮನ ತಲುಪಬೇಕು. ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಬೇಕು ಎಂದ ಅವರು, ನಮ್ಮ ಪಕ್ಷದ ಸಿದ್ದಾಂತ ಮತ್ತು ಧ್ಯೇಯಗಳನ್ನು ಮನವರಿಕೆ ಮಾಡಬೇಕು. ಆಗ ನಮ್ಮ ಮುಂದಿನ ಗೆಲುವಿಗೆ ಸುಲಭವಾಗುತ್ತದೆ. ಅನೇಕ ಪಕ್ಷದ ಮುಖಂಡರು ಸಾಗರೋಪಾದಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್, ಆರ್. ಪ್ರಸನ್ನ ಕುಮಾರ್, ಇಸ್ಮಾಯಿಲ್ ಖಾನ್, ಹೆಚ್.ಸಿ. ಯೋಗೇಶ್, ಆರ್. ಎಂ. ಮಂಜುನಾಥ ಗೌಡ, ಶಿವಕುಮಾರ್, ವೈ.ಹೆಚ್. ನಾಗರಾಜ್, ಎನ್.ರಮೇಶ್, ದೇವೇಂದ್ರಪ್ಪ, ಗಿರೀಶ್, ಕಲಿಂಪಾಶಾ, ವಿಶ್ವನಾಥ್‌ಕಾಶಿ,‌ ರಂಗನಾಥ್, ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆಗೊಂಡ ನಾಗರಾಜ್ ಕಂಕಾರಿ, ಪಾಲಾಕ್ಷಿ, ಮಹೇಶ್ ಸೇರಿದಂತೆ ನೂರಾರು ಬೆಂಬಲಿಗರು ಇದ್ದರು.

Leave A Reply

Your email address will not be published.

error: Content is protected !!