ಚಂದ್ರಗುತ್ತಿಯಲ್ಲಿ ಜರುಗಿದ ಪರಿವಾರ ದೇವರುಗಳಿಗೆ ಕರೆ ನೀಡುವ ಪದ್ಧತಿ
ಸೊರಬ : ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ಮಾ.15 ರಿಂದ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ಪರಿವಾರ ದೇವರುಗಳನ್ನು ಕರೆ ಮಾಡುವ ಪದ್ಧತಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ದೇವಾಲಯದ ಗುಡ್ಡದ ಮೇಲಿರುವ ಪರಿವಾರ ದೇವರಾದ ಶ್ರೀ ಕೋಟೆ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದಂತೆ ಜಾತ್ರೆಗೆ ಕರೆ ನೀಡುವ ಪದ್ಧತಿ ನಡೆಯಿತು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಗ್ರಾಮದ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ದೇವಿಯ ದೇಗುಲದವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ಅರವಿಂದ್ ಭಟ್ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಮಾತನಾಡಿ, ಜಾತ್ರಾ ಮಹೋತ್ಸವದ ಹಿನ್ನೆಲೆ ಧಾರ್ಮಿಕ ಕಾರ್ಯಗಳು ಚಾಲನೆಗೊಂಡಿವೆ . ಶ್ರೀ ದೇವಿಯ ಪರಿವಾರ ದೇವರುಗಳಿಗೆ ಜಾತ್ರೆಗೆ ಕರೆ ನೀಡುವ ಪದ್ಧತಿಗಳನ್ನು ನಡೆಸಲಾಗುತ್ತಿದೆ. ಗುರುವಾರ ಪರಿವಾರ ದೇವರಾದ ಶ್ರೀ ಬನಶಂಕರಿ ದೇವಾಲಯಕ್ಕೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ತೆರಳಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.