ಜ. 26 ರಿಂದ ಸಂವಿಧಾನ ಜಾಗೃತಿ ಜಾಥಾ ; ಸಚಿವ ಮಧು ಬಂಗಾರಪ್ಪ

0 257

ಶಿವಮೊಗ್ಗ : ಸಮಾಜ ಕಲ್ಯಾಣ ಇಲಾಖೆಯು ಭಾರತರತ್ನ, ಮಹಾಮಾನವತಾವಾದಿ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರಚಿತ ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಮಹತ್ವದ್ದಾಗಿದ್ದು ಇದನ್ನು ಅಂಗೀಕರಿಸಿಕೊಂಡು 75 ವರ್ಷಗಳಾಗಿರುವುದರಿಂದ ಕರ್ನಾಟಕ ಸರ್ಕಾರವು ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸ್ತಬ್ಧ ಚಿತ್ರವನ್ನು ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ, ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ‘ಸಂವಿಧಾನ ಜಾಗೃತಿ ಜಾಥ’ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಎಲ್ಲರೂ ಅಗತ್ಯ ಸಹಕಾರ ನೀಡುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.

ಅವರು ಭಾನುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನದ ಜಾಗೃತಿ ಜಾಥಾದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡುತ್ತಿದ್ದರು. ಅದರಂತೆ ಈ ಜಾಥವು ಜನವರಿ 26ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆಗೊಂಡು 28 ದಿನಗಳ ಕಾಲ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಅಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಅಂತಿಮವಾಗಿ ಜಾಥವು ಫೆಬ್ರವರಿ 23ರಂದು ಮುಕ್ತಾಯಗೊಂಡು 24ರಂದು ಬೆಂಗಳೂರನ್ನು ಪ್ರವೇಶಿಸಿ, ಅರಮನೆ ಮೈದಾನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಸಮಾವೇಶಗೊಳ್ಳಲಿದೆ ಎಂದರು.

ಈ ಜಾಥಾಕ್ಕಾಗಿ ಎರಡು ವಾಹನಗಳನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಈ ವಾಹನದಲ್ಲಿ ವಿಶೇಷವಾಗಿ ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮಗಾಂಧೀಜಿ ಸೇರಿದಂತೆ ಜಿಲ್ಲೆಯ ಐತಿಹಾಸಿ ಮಹತ್ವ ಸಾರುವ 12ನೇ ಶತಮಾನದ ಶರಣ, ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭು, ಅಕ್ಕಮಹಾದೇವಿ, ರಾಷ್ಟ್ರಕವಿ ಕುವೆಂಪು, ಕೆಳದಿ ಶಿವಪ್ಪ ನಾಯಕ ಹಾಗೂ ಜಿಲ್ಲೆಯ ವಿಶೇಷತೆಗಳನ್ನು ಚಿತ್ರಿಸಲಾಗುವುದು ಎಂದವರು ತಿಳಿಸಿದರು.

ಈ ಜಾಥಾ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳನ್ನು ಒಳಗೊಂಡು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನದ ಮಹತ್ವ ಸಾರುವ ಜಾಥಾಕ್ಕೆ ಜನವರಿ 256ರಂದು ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಧ್ವಜಾರೋಹಣ ನೆರವೇರಿಸಿದ ನಂತರ ಚಾಲನೆ ನೀಡುವರು.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 262 ಗ್ರಾಮ ಪಂಚಾಯತಿ ಮತ್ತು ಒಟ್ಟು 11 ನಗರ ಸ್ಥಳಿಯ ಸಂಸ್ಥೆಗಳಿದ್ದು ಜಾಥವು ಈ ಎಲ್ಲಾ ಸ್ಥಳಗಳಿಗೆ ಪೂರ್ವ ನಿರ್ಧರಿತ ಮಾರ್ಗ ಸೂಚಿಯನುಸಾರ ಸಂಚರಿಸಲಿದೆ. ‘ಸಂವಿಧಾನ ಜಾಗೃತಿ eಥಾ’ವು ತಾಲ್ಲೂಕು ಗಡಿಯನ್ನು ಪ್ರವೇಶಿಸಿದಾಗ ಸಂಬಂಧಪಟ್ಟ ಕ್ಷೇತ್ರಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಶಾಸಕರುಗಳು ಮತು ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಸ್ವಾಗತಿಸುವರು. ಮೆರವಣಿಗೆಯಲ್ಲಿ ಸ್ಥಳೀಯ ಎಲ್ಲಾ ಸಂಘಟನೆಯ ಮುಖಂಡರುಗಳು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸರ್ಕಾರಿ ಅಧಿಕಾರಿ, ನೌಕರರು ಮತ್ತು ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಲಿದ್ದಾರೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!