ಬಿಎಸ್‌ಎನ್‌ಎಲ್ ಸಂಸ್ಥೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ; ಬಿ.ವೈ. ರಾಘವೇಂದ್ರ

0 153

ಹೊಸನಗರ : ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಬಿಎಸ್‌ಎನ್‌ಎಲ್ ಸಂಸ್ಥೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಇಲ್ಲಿನ ಗಾಯತ್ರಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಬಿಎಸ್‌ಎನ್‌ಎಲ್‌ ಟವರ್ ನಿರ್ಮಾಣ ಕುರಿತು ಸಾರ್ವಜನಿಕರೊಂದಿಗಿನ ಸಂವಾದ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 45 ಹೊಸ ಬಿಎಸ್‌ಎನ್‌ಎಲ್ ಟವರ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಹೊಸನಗರ ತಾಲೂಕಿನಲ್ಲಿ ಈಗಾಗಲೇ 18 ಟವರ್‌ಗಳಿಗೆ ಜಾಗ ಗುರುತಿಸುವ ಕಾರ‍್ಯ ಮುಕ್ತಾಯಗೊಂಡಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ. ಡಿಜಿಟಲ್‌ ತಂತ್ರಜ್ಞಾನದ ಅನಿವಾರ‍್ಯವಾಗಿರುವ ಇಂದಿನ ದಿನಮಾನಗಳನ್ನು ಗಮನದಲ್ಲಿ ಇರಿಸಿಕೊಂಡು ಜನಪರ ಕಾಳಜಿಯಿಂದ ಕಾರ‍್ಯ ನಿರ್ವಹಿಸಲಾಗುತ್ತಿದೆ ಎಂದರು.


ಕೆಲ ವರ್ಷಗಳ ಹಿಂದೆ ಬಿಎಸ್‌ಎನ್‌ಎಲ್ ಸಂಸ್ಥೆ ನಷ್ಟದಲ್ಲಿದೆ. ಖಾಸಗಿ ಸಂಸ್ಥೆಗಳ ಜೊತೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಆದರೆ ಕೇಂದ್ರ ಸರಕಾರ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದು, ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಬಿಎಸ್‌ಎನ್‌ಎಲ್‌ ತಂತ್ರಜ್ಞಾನ ಉನ್ನತೀಕರಣ, ನೂತನ ಟವರ್‌ಗಳ ನಿರ್ಮಾಣಕರ‍್ಯ ನಡೆಯುತ್ತಿದೆ. ಮೊದಲ ಹಂತದಲ್ಲಿ ಕುಗ್ರಾಮಗಳಿಗೆ ಪ್ರಾಧ್ಯಾನ್ಯತೆ ನೀಡಲಾಗಿದೆ ಎಂದರು.

ಸ್ವಾತಂತ್ರ್ಯ ಬಂದ ಬಳಿಕ ಒಂದೇ ಬಾರಿಗೆ ಇಷ್ಟು ಟವರ್‌ಗಳ ನಿರ್ಮಾಣಕ್ಕೆ ಮುಂದಾಗಿರುವುದುಇದೇ ಮೊದಲು. ಉನ್ನತತಂತ್ರಜ್ಞಾನದ ಬ್ಯಾಟರಿಗಳ ಅಳವಡಿಕೆ ಕಾರ‍್ಯ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ಲಭ್ಯವಾಗಿದೆ ಎಂದರು.
ಬಿಎಸ್‌ಎಲ್‌ಎಲ್‌ ಗ್ರಾಹಕರು ಅನುಭವಿಸುತ್ತಿರುವ ಸಮಸ್ಯೆಯ ಅರಿವು ಇರುವ ಕಾರಣಕ್ಕಾಗಿಯೇ ತಾವು ಅಧಿಕಾರಿಗಳ ಜೊತೆ ಜಿಲ್ಲೆಯ ಹಲವು ಕಡೆ ಪ್ರವಾಸ ಕೈಗೊಂಡು ಸಭೆ ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸುಗಮವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.


ಸಾರ್ವಜನಿಕರ ಆಕ್ರೋಶ:
ಬಳಿಕ ನಡೆದ ಸಂವಾದ ಕಾರ‍್ಯಕ್ರಮದಲ್ಲಿ ಸಾರ್ವಜನಿಕರು ಬಿಎಸ್‌ಎನ್‌ಎಲ್ ಅಧಿಕಾರಿಗಳ ಕಾರ‍್ಯ ವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸಕಾಲದಲ್ಲಿ ದುರಸ್ತಿ ಕಾರ‍್ಯ ಕೈಗೊಳ್ಳುತ್ತಿಲ್ಲ. ವಿದ್ಯುತ್ ಸಮಸ್ಯೆಯಿಂದ ನೆಟ್‌ವರ್ಕ್ ಸಮಸ್ಯೆ, ಫೈಬರ್ ಕೇಬಲ್ ಸಮಸ್ಯೆ ಕುರಿತು ಹೆಚ್ಚಿನ ಚರ್ಚೆ ನಡೆಯಿತು. ಸಮಸ್ಯೆ ಆಲಿಸಿದ ಬಿ.ವೈ.ರಾಘವೇಂದ್ರ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುವಂತೆ ಬಿಎಸ್‌ಎನ್‌ಎಲ್‌ ಇಂಜಿನಿಯರ್ ಹರೀಶ್‌ ಅವರಿಗೆ ಸೂಚಿಸಿದರು.

ಹೊಸನಗರ ಬಿಎಸ್ಎನ್ಎಲ್ ಕಚೇರಿ


ಸಭೆಯಲ್ಲಿ ಶಾಸಕ ಆರಗಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಎಸ್‌ಎನ್‌ಎಲ್‌ ಡೆಪ್ಯುಟಿ ಜನರಲ್ ಮ್ಯಾನೇಜರ್ ವೆಂಕಟೇಶ್, ತಾಲೂಕು ಪಂಚಾಯಿತಿ ಕಾರ‍್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಪವನ್‌ಕುಮಾರ್ ತಾಲ್ಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ಎನ್.ಆರ್. ದೇವಾನಂದ್ ಮತ್ತಿತರರು ಇದ್ದರು.


ಸಂಸದರು ಬರೀ ಟವರ್ ಬಗ್ಗೆ ಗಮನ ಹರಿಸುವುದರ ಜೊತೆಗೆ ಆಫೀಸ್ ಬಗ್ಗೆ ಕಾಳಜಿವಹಿಸಿ:
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ ಸಂಸದರಿಗೆ ಈಗ ಜ್ಞಾನೋದಯವಾಗಿದೆ. ತಾಲ್ಲೂಕಿನ ಜನರ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಗೊತ್ತಾಗುತ್ತಿದೆ. ಸರಿ ಈಗಲಾದರೂ ಜ್ಞಾನೋದಯವಾಗಿರುವುದಕ್ಕೆ ಸಂತೋಷದ ವಿಷಯ. ಹೊಸನಗರ ತಾಲ್ಲೂಕಿನಲ್ಲಿ 46 ಟವರ್ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ. ಇದರ ಜೊತೆಗೆ ಹೊಸನಗರ ಹೃದಯ ಭಾಗದಲ್ಲಿರುವ ಬಿಎಸ್‌ಎನ್ಎಲ್ ಕಛೇರಿಗೆ ಒಮ್ಮೆ ಭೇಟಿ ನೀಡಿದರೆ ಒಳ್ಳೆಯದು. ಹೊಸನಗರದ ಬಿಎಸ್‌ಎನ್‌ಎಲ್ ಕಛೇರಿಯ ಪರಿಸ್ಥಿತಿ ಅರ್ಥವಾಗುತ್ತದೆ. ದನದ ದೊಡ್ಡಿಗಿಂತ ಕಡೆಯಾಗಿದೆ. ಕಛೇರಿಯ ಕಿಟಕಿ, ಬಾಗಿಲುಗಳು ಮುರಿದು ಬಿದ್ದಿವೆ‌. ವರ್ಷಕ್ಕೊಮ್ಮೆ ಬಾಗಿಲು ತೆಗೆಯುವುದು ಕಂಡು ಬರುತ್ತಿದೆ. ಯಾರೇ ಯಾವುದೇ ವಿಷಯಕ್ಕೆ ಹೋದರೂ ಬಾಗಿಲು ಹಾಕಿರುವುದನ್ನು ನೋಡಿಕೊಂಡು ವಾಪಾಸ್ ಬರಬೇಕು. ಅಧಿಕಾರಿಗಳಿಗೆ ಫೋನ್ ಮಾಡಿದರೆ ಉತ್ತರವಿಲ್ಲ ಮೊದಲು ಕಛೇರಿ ಸರಿ ಮಾಡಿ ಆನಂತರ ಟವರ್ ಬಗ್ಗೆ ಗಮನ ಹರಿಸಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ‌.

Leave A Reply

Your email address will not be published.

error: Content is protected !!