ಶ್ರೀ ವೇದ ವ್ಯಾಸ ಗುರು ಪುರಸ್ಕಾರಕ್ಕೆ ಶಿಕ್ಷಕ ಪ್ರಕಾಶ್ ಆಯ್ಕೆ
ಹೊಸನಗರ : ಇಲ್ಲಿನ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದ 2024ನೇ ಸಾಲಿನ ಶ್ರೀ ವೇದ ವ್ಯಾಸ ಗುರು ಪುರಸ್ಕಾರಕ್ಕೆ ತಾಲ್ಲೂಕಿನ ಮಾರುತಿಪುರ ಪಂಚಾಯಿತಿ ವ್ಯಾಪ್ತಿಯ ನಿಂಬೇಸರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಆರ್ ಆಯ್ಕೆಯಾಗಿದ್ದಾರೆ.
ಪ್ರಸಕ್ತ ಸಾಲಿನ ಗುರುಕುಲ ಸಾಮಾಜಿಕ ಸೇವಾ ಸಮ್ಮಾನಕ್ಕೆ ಭದ್ರಾವತಿ ತಾಲ್ಲೂಕು ಆಸ್ಪತ್ರೆ ಚರ್ಮ ರೋಗ ತಜ್ಞ ಡಾ. ಜಯರಾಮ್ ಹೆಚ್. ಆರ್ ಆಯ್ಕೆಯಾಗಿದ್ದಾರೆ.
ಏಪ್ರಿಲ್ 9 ಮತ್ತು 10ರಂದು ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಆವರಣದಲ್ಲಿ ನಡೆಯುವ ಚತುರ್ದಶ ಸಂವತ್ಸರ ಪ್ರದರ್ಶಿನಿ ಸಂಭ್ರಮ 2024ರಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.
ಅಂದು ಸಂಜೆ 5.30ಕ್ಕೆ ಕರ್ನಾಟಕ ನಗರ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಿವೃತ್ತ ಸೇನಾನಿ ಕೆ. ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ ಹಾಗೂ ಸಂಜೆ 5.30ಕ್ಕೆ ಶ್ರೀ ರಾಮ ವೈಭವ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 10 ಬುಧವಾರ ಸಂಜೆ 5.30ಕ್ಕೆ ಇತ್ತೀಚಿಗೆ ನಿಧನರಾದ ಖ್ಯಾತ ಚಿತ್ರ ನಟ, ರಂಗ ಕರ್ಮಿ, ಸಾಮಾಜಿಕ ಹೋರಾಟಗಾರ ಯೇಸು ಪ್ರಕಾಶ್ ಭಾವ ನಮನ ಕಾರ್ಯಕ್ರಮ ನಡೆಯಲಿದ್ದು, ಭಾವ ನಮನದ ಅಂಗವಾಗಿ ಯಕ್ಷ ಕುಟೀರದ ಮಕ್ಕಳಿಂದ ಲವ – ಕುಶ ಯಕ್ಷಗಾನ ಪ್ರದರ್ಶನ ನಡೆದ ನಡೆಯಲಿದೆ. ಹಿರಿಯ ರಂಗ ಕರ್ಮಿ ಹಾಗೂ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ತಲವಾಟ ನುಡಿ ನಮನದ ಮಾತುಗಳನ್ನಾಡಲಿದ್ದಾರೆ.