ಭೂಮಿ ಇಲ್ಲದಿದ್ದರೂ ಹಕ್ಕುಪತ್ರ ವಿತರಣೆ ಆರೋಪ, ಗ್ರಾಮಸ್ಥರಿಂದ ಹಕ್ಕುಪತ್ರ ವಜಾಕ್ಕೆ ಆಗ್ರಹ
ಹೊಸನಗರ: ತಾಲ್ಲೂಕಿನ ಅರಮನೆಕೊಪ್ಪ ಗ್ರಾಮದ ಸರ್ವೆನಂಬರ್ 119ರಲ್ಲಿ ಸಾಗುವಳಿ ಮಾಡಿದ್ದಾಗಲಿ, ಬೇಲಿ ಹಾಕಿಕೊಂಡಿರುವ ಜಮೀನಾಗಲಿ ಇಲ್ಲದೇ ಇದ್ದರೂ ನಕಲಿ ನಕ್ಷೆ ಸೃಷ್ಠಿ ಮಾಡಿಕೊಂಡು ಹೆಚ್.ಎಸ್ ಕೃಷ್ಣಮೂರ್ತಿಗೆ ಸೇರಿದ ಜಮೀನಿನ ಸಾಗುವಳಿಯನ್ನು ತೋರಿಸಿ 4 ಎಕರೆ ಭೂಮಿ ಮಂಜೂರಾತಿ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಡಿ.ಟಿ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಆ ಗ್ರಾಮದ ಗ್ರಾಮಸ್ಥರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ಹಾಗೂ ಧರಣಿ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಡಿ.ಟಿ ಕೃಷ್ಣಮೂರ್ತಿ, ಸುಮಾರು ನಾಲ್ಕು ವರ್ಷದ ಹಿಂದೆ ಇದೇ ಗ್ರಾಮದ ಪಕ್ಕದಲ್ಲಿರುವ ಹೆಚ್.ಎಸ್. ಕೃಷ್ಣಮೂರ್ತಿಯವರ ಜಮೀನು ತೋರಿಸಿ 4 ಎಕರೆ ಜಮೀನು ಮಂಜೂರಾತಿ ಮಾಡಿರುವುದು ಈಗ ನಮಗೆ ಗೊತ್ತಾಗಿದ್ದು 4 ಎಕರೆ ಭೂಮಿ ಮಂಜೂರಾತಿ ಮಾಡಿಸಿ ಸಾಗುವಳಿ ಚೀಟಿಯನ್ನು ಕೊಟ್ಟಿರುವ ಕ್ರಮದ ಬಗ್ಗೆ ಪ್ರಶ್ನಿಸಿ ಸಾಗುವಳಿಯಿಲ್ಲದ ನಕ್ಷೆಯ ಪ್ರಕಾರ ಭೂಮಿಯೇ ಇಲ್ಲದೇ ಇರುವ ಸ್ಥಳವನ್ನು ಮರು ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಮಂಜೂರು ಮಾಡುವ ಮೊದಲು ಸ್ಥಳವನ್ನು ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯನಾದ ನಾನು ಜಮೀನು ಮಂಜೂರಾತಿ ಮಾಡುವ ಮೊದಲು ಹಾಗೂ ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಹೆಚ್.ಎಸ್. ರಾಘವೇಂದ್ರರವರಿಗೆ ಜಮೀನು ಮಂಜೂರಾತಿ ಮಾಡಿರುವ ಬಗ್ಗೆ ಅನುಮಾನವಿದೆ. ನಮ್ಮ ಅರ್ಜಿಗೆ ಇಲ್ಲಿಯವರೆಗೆ ನ್ಯಾಯ ಸಿಕ್ಕಿಲ್ಲದಿರುವುದರಿಂದ ನ್ಯಾಯ ಸಿಗುವವರೆಗೆ ನ್ಯಾಯಾಕ್ಕಾಗಿ ಹೋರಾಟ ಅನಿವಾರ್ಯವಾಗಿದ್ದು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪ್ರಕರಣದ ವಿವರ:
ಸರ್ಕಾರಿ ಆದೇಶದಂತೆ ಸಾಗುವಳಿ ಮಾಡಿರುವ ಜಮೀನನ್ನು ಪರಿಶೀಲನೆ ಮಾಡಿ ಮಂಜೂರು ಮಾಡುವುದು ನಿಯಮ. ಆದರೆ ಅರಮನೆಕೊಪ್ಪ ಗ್ರಾಮದ ಸರ್ವೆನಂಬರ್ 119ರಲ್ಲಿ ಹೆಚ್.ಎಸ್.ರಾಘವೇಂದ್ರರವರು ಸಾಗುವಳಿ ಮಾಡಿದ್ದಾಗಲಿ ಬೇಲಿ ಹಾಕಿಕೊಂಡಿದ್ದಾಗಲಿ ಯಾವುದೇ ಕುರುಹು ಇಲ್ಲದೇ ಜಮೀನು ಇಲ್ಲದೆ 4 ಎಕರೆ ಜಮೀನು ಸಾಗುವಳಿ ಇದೆಯೆಂದು ದಾಖಲೆ ಸೃಷ್ಠಿ ಮಾಡಿ ಸ್ಥಳ ಪರಿಶೀಲನೆ ನಡೆಸದೆ 4 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ಕೊಡಲಾಗಿದ್ದು ಸರಿಯೇ? ಅದು ಅಲ್ಲದೇ ರಾಘವೇಂದ್ರರವರಿಗೆ ಕೆಲವು ಕಡೇ ಜಮೀನು ಇರುವ ಬಗ್ಗೆ ಮಾಹಿತಿಯಿದೆ ಎಂದು ಆರೋಪಿಸಿ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ತಕ್ಷಣ ನಡೆಸಬೇಕು ಜಾಗವಿಲ್ಲದೇ ಮಾಡಿಕೊಂಡ ಹಕ್ಕುಪತ್ರವನ್ನು ವಜಾ ಮಾಡುವ ಉದ್ದೇಶದಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ನಮಗೆ ತಕ್ಷಣ ನ್ಯಾಯ ನೀಡಬೇಕು ಇಲ್ಲವಾದರೇ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರು.
ಹಕ್ಕುಪತ್ರ ವಜಾ ಮಾಡುವಂತೆ ಉಪವಿಭಾಗಾಧಿಕಾರಿಗೆ ಪತ್ರ:
ಅರೆಮನೆಕೊಪ್ಪ ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ, ನಿಮ್ಮ ಮನವಿಯನ್ನು ಸ್ವೀಕರಿಸಿ ಅರಮನೆಕೊಪ್ಪ ಸರ್ವೆನಂಬರ್119ರಲ್ಲಿ ಈ ರೀತಿ ಹೆಚ್.ಎಸ್.ರಾಘವೇಂದ್ರರವರಿಗೆ ಸಾಗುವಳಿ ಇಲ್ಲದೇ ಭೂಮಿಯು ಇಲ್ಲದೇ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿದ್ದಲ್ಲಿ ಸಾಗರ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು ಜಮೀನು ಮಂಜೂರಾತಿ ಹಕ್ಕುಪತ್ರವನ್ನು ವಜಾ ಮಾಡಿಸುತ್ತೇವೆ ಎಂದು ತಿಳಿಸಿದರು. ತಹಶೀಲ್ದಾರ್ರವರ ಹೇಳಿಕೆಗೆ ಗೌರವಿಸಿ ಪ್ರತಿಭಟನೆ ಧರಣಿಯನ್ನು ಗ್ರಾಮಸ್ಥರು ಕೈ ಬಿಟ್ಟರು.
ಈ ಪ್ರತಿಭಟನೆ ಹಾಗೂ ಧರಣಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಾಜಶೇಖರ ಜೆ.ಕೆ, ರಮೇಶ್, ಸಾವಿತ್ರಿ, ಪಾರ್ವತಿ, ಸಿಂಗಾರಿ, ನಾರಾಯಣ ಪೂಜಾರಿ, ದುರ್ಗಾಪ್ರಜಾರಿ, ರಾಜು ಪೂಜಾರಿ ವಿನೋದ ಇನ್ನೂ ಮುಂತಾದವರು ಬಾಗವಹಿಸಿದ್ದರು.