ಮನೆ, ನೀರಿನ ಕರ ಕಡ್ಡಾಯ ವಸೂಲಿಗೆ ಸಿಇಓ ಸೂಚನೆ
ರಿಪ್ಪನ್ಪೇಟೆ: ನೀರಿನ ಮತ್ತು ಮನೆ ಕಂದಾಯ ಬಾಕಿ ವಸೂಲಾತಿಯಲ್ಲಿ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ. ಏಕ ಕಂತಿನಲ್ಲಿ ಕಂದಾಯ ಸಂದಾಯ ಮಾಡುವುದು ಕಷ್ಟವಾಗಿರುವ ಕಾರಣ ಕಂತಿನ ರೂಪದಲ್ಲಿ ಹಂತ ಹಂತವಾಗಿ ವಸೂಲಿ ಮಾಡುವಂತೆ ಗ್ರಾಮ ಪಂಚಾಯ್ತಿ ಪಿಡಿಓ ರವರಿಗೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಸೂಚನೆ ನೀಡಿದರು.
ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಇಂದು ಆಯೋಜಿಸಲಾದ 2022-23 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿಯಾಗಿ ಭಾಗವಹಿಸಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಂದಾಯ ವಸೂಲಾತಿಯಲ್ಲಿ ಸಾಕಷ್ಟು ಬಾಕಿ ಉಳಿಸಿಕೊಂಡಿರುವವರ ಬಗ್ಗೆ ಮಾಹಿತಿ ಪಡೆದ ಅವರು ಕರವಸೂಲಾತಿಯನ್ನು ಕಂತುಗಳಲ್ಲಿ ವಸೂಲಾತಿ ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರದ ಯೋಜನೆಯಾದ ಜಲಜೀವನ ಯೋಜನೆಯಡಿ ನಡೆಸಲಾಗುತ್ತಿರುವ ಕಾಮಗಾರಿಯು ಪ್ಲಾನ್ ಅಂಡ್ ಎಸ್ಟಿಮೆಂಟ್ ಮಾಡುವಾಗ ತಿಳಿಸಿದಂತೆ ನಿರ್ವಹಿಸದೇ ಬೇಕಾಬಿಟ್ಟಿ ಮಾಡಲಾಗುತ್ತಿದೆ ಇದೊಂದು ಅವೈಜ್ಞಾನಿಕ ಕಾಮಗಾರಿಯೆಂದು ಸಾಕಷ್ಟು ಸದಸ್ಯರು ಸಿಇಓ ಬಳಿ ದೂರು ನೀಡಿದಾಗ ಸ್ಥಳದಲ್ಲಿದ್ದ ಜಲಜೀವನ ಯೋಜನೆಯ ನೀರಾವರಿ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಕಾಮಗಾರಿಯನ್ನು ಸಮರ್ಪಕವಾಗಿ ಸದಸ್ಯರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಈಗಾಗಲೇ ಗ್ರಾಮದ ವ್ಯಾಪ್ತಿಯಲ್ಲಿ ಶುದ್ದಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದ್ದರೂ ಸರಿಯಾಗಿ ನಿರ್ವಹಣೆ ಮಾಡದೇ ನೀರು ಬರುತ್ತಿಲ್ಲದಿರುವುದರ ಬಗ್ಗೆ ಗಮನಸೆಳೆದಾಗ ತಕ್ಷಣ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಸಾರ್ವಜನಿಕರಿಗೆ ಶುದ್ದಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವಂತೆ ತಿಳಿಸಿದರು.
ನಮ್ಮೂರಿನಲ್ಲಿ ಕುಡಿಯುವ ನೀರಿಗಾಗಿ ಬೋರ್ವೆಲ್ಗಳು ಇದ್ದರೂ ಪವರ್ ಕಟ್ನಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳಾ ಗಮನಕ್ಕೆ ತರುತ್ತಿದ್ದಂತೆ ಕೆಲವರು ಧ್ವನಿಗೂಡಿಸಿದರು. ಆಗ ಅವರು ಈ ಬಗ್ಗೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.
ಇನ್ನೂ ಪಂಚಾಯ್ತಿ ವ್ಯಾಪ್ತಿಯ ಗೌಠಾಣಾ ಜಾಗದಲ್ಲಿ ಮತ್ತು ಕಂದಾಯ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಆವರಿಗೆ 9&11 ನೀಡಲು ಬರುವುದಿಲ್ಲ ಇದಕ್ಕೆ ಪರಿಹಾರ ಹೇಗೆ ಎಂದು ಕೇಳಿದಾಗ ಸರ್ಕಾರದ ನಿಯಮ ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಪರಿಹಾರವಾಗ ಬೇಕು ಆ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ವಿವರಿಸಿದರು. ಪಂಚಾಯ್ತಿ ಕಡತಗಳ ಸಮಗ್ರ ಮಾಹಿತಿಯನ್ನು ಪಡೆದು ನಿರ್ವಹಿಸುವುದರ ಬಗ್ಗೆ ಸಿಬ್ಬಂದಿ ವರ್ಗದವರಿಗೆ ತಳಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತಾಲ್ಲೂಕ್ ಪಂಚಾಯ್ತಿ ಪ್ರಭಾರಿ ಇಓ ನರೇಂದ್ರ ಕುಮಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಧುಸೂದನ್, ಉಪಸ್ಥಿತರಿದ್ದರು.