ರಾಘವೇಂದ್ರ ಸೋಲ್ತಾನೆ, ವಿಜಯೇಂದ್ರ ರಾಜೀನಾಮೆ ಕೊಡ್ತಾನೆ, ಏಕವಚನದಲ್ಲೇ ವಾಗ್ದಾಳಿ ನಡೆಸಿದ ಈಶ್ವರಪ್ಪ

0 161

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಚುನಾವಣೆಯಲ್ಲಿ ಸೋಲುತ್ತಾನೆ, ಬಿ.ವೈ.ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾನೆ, ಬಿಜೆಪಿಯಲ್ಲಿ ರಾಜಕಾರಣ ಶುದ್ಧಿಯಾಗುತ್ತದೆ. ಕುಟುಂಬ ರಾಜಕಾರಣ ಕೊನೆಯಾಗುತ್ತದೆ. ಹಿಂದುತ್ವವೇ ವಿಜೃಂಭಿಸುತ್ತದೆ. ಕೆ.ಎಸ್.ಈಶ್ವರಪ್ಪ ಗೆದ್ದು ಮೋದಿಯನ್ನು ಮತ್ತೇ ಪ್ರಧಾನಿಯನ್ನಾಗಿ ಮಾಡುತ್ತಾರೆ. ಇವು ಬಂಡಾಯ ಅಭ್ಯರ್ಥಿಯಾಗಿ ಈಗಾಗಲೇ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪನವರ ಮಾತುಗಳು.

ಪತ್ರಿಕಾಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಅವರು, ಮತ್ತೇ ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿ, ನನ್ನ ಬಗ್ಗೆ ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಹಾವು ಚೇಳುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರಂತೆ, ಆದರೆ ನಮ್ಮ ಕಾರ್ಯಕರ್ತರು ಹಾವು ಚೇಳುಗಳಲ್ಲ, ಅವರು ಹಿಂದೂ ಹುಲಿಗಳು. ಅವರು ಯಾವುದಕ್ಕೂ ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ, ಚುನಾವಣೆ ಚಿಹ್ನೆಗಾಗಿ ನಾವು ಈಗ ಕಾಯುತ್ತಿದ್ದೇವೆ. ನಮಗೆ ಏ.22ಕ್ಕೆ ಚಿಹ್ನೆ ಸಿಗಬಹುದು ಆಗ ನಾವು ಗೆಲುವಿಗೆ ಇನ್ನೂ ಹತ್ತಿರವಾಗುತ್ತೇವೆ. ನಮ್ಮ ಹಿಂದುತ್ವದ ಹುಲಿಗಳ ಅರ್ಭಟ ಅವರಿಗೆ ತಿಳಿದಿಲ್ಲ ಎಂದರು.

ನಾಮಪತ್ರ ಸಲ್ಲಿಸುವಾಗ ನಿರೀಕ್ಷೆ ಮೀರಿ ಕಾರ್ಯಕರ್ತರು, ಬೆಂಬಲಿಗರು, ಪ್ರೀತಿ ಪಾತ್ರರು ನನ್ನೊಡನೆ ಬಂದಿದ್ದಾರೆ. ನನಗೆ ಶಕ್ತಿ ತುಂಬಿದ್ದಾರೆ. ನಾವೆಲ್ಲ ಈಶ್ವರಪ್ಪನವರ ಜೊತೆ ಇದ್ದೇವೆ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಸುವುದಿಲ್ಲ ಎಂದು ಅನೇಕರು ಹೇಳಿದ್ದರು. ಈಗ ಅವರಿಗೆ ಅರ್ಥವಾಗಿರಬೇಕು. ಈ ಈಶ್ವರಪ್ಪ ಯಾರು ಎಂದು. ವಿಜಯೇಂದ್ರ ಅವರು ಈಶ್ವರಪ್ಪನವರು ನಾಮಪತ್ರವನ್ನು ವಾಪಾಸ್ಸು ತೆಗೆದು ಕೊಳ್ಳುತ್ತಾರಂತೆ ಎಂದಿದ್ದಾರೆ. ಇಂತಹ ಅಪಪ್ರಚಾರಕ್ಕೆ ನಾನೇನು ಬಗ್ಗುವುದಿಲ್ಲ. ಲಕ್ಷಾಂತರ ಜನರ ಅಪೇಕ್ಷೆಯ ಮೇರೆಗೆ ಮುಂದೆ ಹೆಜ್ಜೆ ಇಟ್ಟಿದ್ದೇನೆ. ಅದನ್ನು ಹಿಂದೆ ತೆಗೆಯುವುದಿಲ್ಲ,ನಿರಾಶೆಯನ್ನು ಮಾಡುವುದಿಲ್ಲ ಎಂದರು.

ಬಿಜೆಪಿಯವರೋ, ಕಾಂಗ್ರೆಸ್ಸನವರೋ ಗೊತ್ತಿಲ್ಲ, ನನ್ನ ನಾಮಪತ್ರ ಸಲ್ಲಿಕೆಗೆ ಬರುವ ಬಸ್‌ಗಳನ್ನೇ ತಡೆದು ವಾಪಾಸ್ಸು ಕಳಿಸಿದ್ದಾರೆ. ಬಸ್ ಮಾಲೀಕರನ್ನು ಹೆದರಿಸಿದ್ದಾರೆ. ಯಾರೇ ಆಗಲಿ ನೇರ ಚುನಾವಣೆ ಮಾಡಬೇಕು. ಹೀಗೆ ಅಡ್ಡದಾರಿ ಹಿಡಿಯಬಾರದು ಆದರು ಸುಮಾರು 25 ಸಾವಿರಕ್ಕೂ ಹೆಚ್ಚು ಜನರು, ತಮ್ಮ ತಮ್ಮ ವಾಹನ ಗಳಲ್ಲಿಯೇ ಬಂದು ಭಾಗಿಯಾಗಿದ್ದಾರೆ. ನಿಜಕ್ಕೂ ಅಪ್ಪ ಮಕ್ಕಳಿಗೆ ಈಗಿನಿಂದ ಭಯ ಶುರುವಾಗಿದೆ ಎಂದರು.

ಸಚಿವ ಮಧು ಬಂಗಾರಪ್ಪನವರು ನಿಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಾರಲ್ಲ ಎಂಬ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ ಅವರು, ನನ್ನದು ಬಿ ಟೀಮ್ ಅಲ್ಲ. ನಾನು ಯಾವಾಗಲು ಎ ಟೀಮೇ ನಾನೇ ಒರಿಜಿನಲ್ ಬಿಜೆಪಿ. ಹಾಗಾಗಿಯೇ ನನ್ನ ಜೊತೆ ಕೇಂದ್ರದ ನಾಯಕರು ಮಾತನಾಡಿಲ್ಲ, ನಾನು ಚುನಾವಣೆಗೆ ನಿಲ್ಲುವ ಬಯಕೆ ಮೋದಿಯವರದು ಆಗಿದೆ ಎಂದರು.

ಶಿಕಾರಿಪುರದಲ್ಲಿ ಮಧು ಬಂಗಾರಪ್ಪ ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂದು ಪುನರುಚ್ಛರಿಸಿದ ಈಶ್ವರಪ್ಪ, ಅವರು ಹೇಳಲಿ ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಂಡೇ ಗೀತಾ ಶಿವರಾಜ್‌ಕುಮಾರ್ ಅವರನ್ನು ಚುನಾವಣೆಗೆ ಕರೆತಂದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರಲ್ಲದೇ ಈ ಹಿಂದೆಯೂ ವಿಧಾನಸಭಾ ಚುನಾವಣೆಯಲ್ಲಿ ನಾಗರಾಜ ಗೌಡ ಹಾಗೂ ಗೋಣಿ ಮಾಲತೇಶ್ ಇಬ್ಬರಿಗೂ ಏಕ ಕಾಲದಲ್ಲಿ ಮೋಸ ಮಾಡಿದ್ದರು. ಇದು ಹೊಂದಾಣಿಕೆ ರಾಜಕಾರಣವಲ್ಲದೇ ಮತ್ತೇನು ಎಂದು ಪ್ರಶ್ನೆ ಮಾಡಿದ ಅವರು, ಗೀತಾ ಶಿವರಾಜ್‌ಕುಮಾರ್ ನನ್ನ ತಂಗಿ ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಆದರೆ ಮಧು ಬಂಗಾರಪ್ಪ ಇದಕ್ಕೆ ಉತ್ತರ ಹೇಳಲಿ ಎಂದರು.

ನಾಳೆಯಿಂದ ನಮ್ಮ ಕಾರ್ಯಕರ್ತರು ನಗರದ 288 ಬೂತ್‌ಗಳಿಗೂ ತೆರಳಿ ಮನೆ ಮನೆಗೆ ಹೋಗಿ ಕರಪತ್ರ ಹಂಚುವ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಸುವರ್ಣ ಶಂಕರ್, ಮಹಾಲಿಂಗಶಾಸ್ತ್ರಿ, ವಿನಯ್, ರಾಜು, ಲಕ್ಷ್ಮೀಶಂಕರ ನಾಯಕ, ಲತಾ, ಆರತಿ ಅ.ಮಾ. ಪ್ರಕಾಶ್, ಪ್ರಭಾಕರ್, ಆಂಜನೇಯ, ಉಮಾ, ಸೀತಾಲಕ್ಷ್ಮಿ, ಬಾಲು ಮುಂತಾದವರು ಇದ್ದರು.

Leave A Reply

Your email address will not be published.

error: Content is protected !!