ರಿಪ್ಪನ್ಪೇಟೆ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿಯಾದ ಕಟ್ಟಡ ತೆರವಿಗೆ ಮಾಲೀಕನ ತೀವ್ರ ವಿರೋಧ
ರಿಪ್ಪನ್ಪೇಟೆ: ಇಲ್ಲಿನ ಸಾಗರ ರಸ್ತೆಯ ಒಂದು ಕಿ.ಮೀ ದೂರದ ರಸ್ತೆ ಅಗಲೀಕರಣದೊಂದಿಗೆ ಒಳಚರಂಡಿ ಮತ್ತು ಡಿವೈಡರ್ ಡಾಂಬರೀಕರಣ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದಿನ ಸರ್ಕಾರ 5.50 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಮಾಲಕ ಕಾಮಗಾರಿ ಆರಂಭಿಸಲಾಗಿದ್ದು ಹಲವರು ಸ್ವಪ್ರೇರಣೆಯಿಂದ ತಮ್ಮ ಅಂಗಡಿ ಮನೆಯ ಮುಂಭಾಗದಲ್ಲಿನ ಜಾಗವನ್ನು ತೆರವುಗೊಳಿಸುವ ಮೂಲಕ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗಿದ್ದರೂ ಕೂಡಾ ವಿನಾಯಕ ವೃತ್ತದ ಬಳಿಯ ಖಾಸಗಿ ಕಟ್ಟಡದ ಮಾಲೀಕರೊಬ್ಬರು ತಮ್ಮ ಅಂಗಡಿಯ ಮುಂಭಾಗ ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸಿ ಕಾನೂನಿನ ಮೊರೆ ಹೋಗಿರುವುದಾಗಿ ತಿಳಿಸಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆ ಉಂಟು ಮಾಡಿದ ಪ್ರಸಂಗ ನಡೆದಿದೆ.
ಸ್ಥಳೀಯ ಗ್ರಾಮ ಪಂಚಾಯ್ತಿಯವರು ಶನಿವಾರ ಹಿಟಾಚಿಯೊಂದಿಗೆ ಕಟ್ಟಡ ತೆರವು ಕಾರ್ಯಾಚರಣೆಗೆ ಪೊಲೀಸ್ ರಕ್ಷಣೆಯೊಂದಿಗೆ ಸ್ಥಳಕ್ಕೆ ಬಂದಾಗ ಅಂಗಡಿ ಮಾಲೀಕ ಈ ಜಾಗಕ್ಕೆ ನ್ಯಾಯಾಲಯದ ತಡೆ ಆದೇಶವಿದೆ ಎಂದು ಸಬೂಬು ಹೇಳಿದ್ದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆತನ ಮಾತು ಕೇಳಿಕೊಂಡು ವಾಪಾಸ್ ಆದ ಘಟನೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಯಿತು.
ಲೋಕೋಪಯೋಗಿ ಇಲಾಖೆಯ ನಿಯಮದಲ್ಲಿ ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು ಇದೆಯೇನು ಎಂಬ ನಿಯಮ ಏನಾದರೂ ಇದೆಯೋ ಎಂಬ ಸಂಶಯ ಸಾರ್ವಜನಿಕರನ್ನು ಕಾಡುವಂತಾಗಿದ್ದು ಕಳೆದ ಏಳೆಂಟು ತಿಂಗಳಿಂದ ಸಾಗರ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಸಾಗುತ್ತಿದ್ದು ಹಲವರು ಸ್ವಯಂ ಪ್ರೇರಿತರಾಗಿ ತಮ್ಮ ಮನೆಯ ಮುಂಭಾಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿಕೊಂಡು ಊರಿನ ಅಭಿವೃದ್ದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದರೆ ಇಲ್ಲಿನ ಮೆಟಲ್ ಸ್ಟೋರ್ ಮಾಲೀಕ ಮಾತ್ರ ಯಾರೂ ಏನೂ ಮಾಡಿದರೂ ನನಗೆ ಏನು ಅಗುವುದಿಲ್ಲ ಎಂಬ ನಿರ್ಧಾರದೊಂದಿಗೆ ಗಟ್ಟಿಯಾಗಿ ಕುಳಿತು ಆಡಳಿತ ವ್ಯವಸ್ಥೆಗೆ ಸವಾಲಾಗಿದ್ದಾನೆ.
ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿಪಡಿಸಿರುವ ಅಂಗಡಿಯ ಮಾಲೀಕನಿಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಧುಸೂದನ್ ಇದೇ ಏ. 20 ರೊಳಗೆ ಸ್ವಪ್ರೇರಣೆಯಿಂದ ಅಂಗಡಿ ತೆರವು ಮಾಡಿಕೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದು ಅದು ಎಷ್ಟು ಸಫಲವಾಗುವುದು ಕಾದುನೋಡಬೇಕಾಗಿದೆ.
ಒಟ್ಟಾರೆಯಾಗಿ ನಾನು ಒಬ್ಬ ಬದುಕಿದರೆ ಸಾಕು ಉಳಿದವರು ಏನಾದರಾಗಲಿ ನನಗೆ ಏನು ಎಂಬುವರೆ ಹೆಚ್ಚಾಗಿರುವಾಗ ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿಯವರು ದೃಢ ಸಂಕಲ್ಪ ತೊಟ್ಟು ಅಂಗಡಿ ಮಾಲೀಕನ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಆಭಿವೃದ್ದಿಗೆ ಕಾರ್ಯಕ್ಕೆ ಆಡ್ಡಿಯಾಗಿರುವ ಆಂಗಡಿ ತೆರವು ಮಾಡಲು ಮುಂದಾಗಬೇಕು ಎಂದು ಸಾರ್ವಜನಿಕರ ಆಶಯವಾಗಿದೆ. ಶಾಸಕರು ಮತ್ತು ಅಧಿಕಾರಿಗಳು ಇನ್ನು ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆಂಬುದರ ಬಗ್ಗೆ ಕಾದು ನೋಡಬೇಕಾಗಿದೆ.
ಸಾಗರ-ಶಿವಮೊಗ್ಗ ನಗರದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಬೃಹತ್ ಗಾತ್ರದ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾದರೂ ಕೂಡಾ ರಿಪ್ಪನ್ಪೇಟೆಯಲ್ಲಿ ಮಾತ್ರ ರಸ್ತೆ ಆಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿರುವ ಅಂಗಡಿ ತೆರವುಗೊಳಿಸಲು ಮುಂದಾಗದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಆಗಲೀಕರಣದೊಂದಿಗೆ ವಿದ್ಯುತ್ ಕಂಬಗಳನ್ನು ಸಹ ರಸ್ತೆ ಆಂಚಿಗೆ ಅಳವಡಿಸಬೇಕಾಗಿದ್ದರೂ ಕೂಡಾ ಈ ಅಂಗಡಿ ಮಾಲೀಕನ ಗಟ್ಟಿತನದಿಂದಾಗಿ ಬೃಹತ್ ಗಾತ್ರದ ನಾಲ್ಕು ವಿದ್ಯುತ್ ಕಂಬವನ್ನು ತರುವುದರೊಂದಿಗೆ ಅಳವಡಿಸುವ ಹುನ್ನಾರ ನಡೆದಿದ್ದು ಸ್ಥಳೀಯ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಇವರು ತೀವ್ರ ವಿರೋಧದ ವ್ಯಕ್ತ ಪಡಿಸಿದ ಕಾರಣ ಕಂಬ ಅಳವಡಿಸುವುದು ನಿಲ್ಲಿಸಿ ಕಟ್ಟಡ ತೆರವುಗೊಳಿಸಿದ ನಂತರ ಈ ಎಲ್ಲಾ ಕಾಮಗಾರಿ ನಿರ್ವಹಿಸುವಂತೆ ತಿಳಿಸಿದ ಮೇರೆಗೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ ಹಾಗೂ ಈ ಬಗ್ಗೆ ಇದೇ ಏಪ್ರಿಲ್ 20 ರೊಳಗೆ ಕಾಮಗಾರಿಗೆ ಆಡ್ಡಿಯಾಗಿರುವ ಕಟ್ಟಡವನ್ನು ತೆರವುಗೊಳಿಸದಿದ್ದರೆ ಅಂಗಡಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಎಚ್ಚರಿಕೆಯನ್ನು ನೀಡಿದರು.