ಶಿವಮೊಗ್ಗ ದಸರಾ ಯಶಸ್ವಿಯಾಗಿ ನಡೆಯಲು ನಗರದೆಲ್ಲೆಡೆ ವಿಶೇಷ ಅಲಂಕಾರ

0 69

ಶಿವಮೊಗ್ಗ: ಶಿವಮೊಗ್ಗ ದಸರಾ ಯಶಸ್ವಿಯಾಗಿ ನಡೆಯಲು ಇಡೀ ನಗರವನ್ನು 9 ದಿನಗಳ ಕಾಲ ಅಲಂಕಾರ ಮಾಡಲಾಗುತ್ತಿದೆ ಎಂದು ಅಲಂಕಾರ ಸಮಿತಿಯ ಅಧ್ಯಕ್ಷ ಪ್ರಭಾಕರ್ ಪಿ. (ಪ್ರಭು) ಹೇಳಿದರು.


ಅವರು ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಈ ಬಾರಿಯ ದಸರಾವನ್ನು ಯಶಸ್ವಿಯಾಗಿ ಮತ್ತು ಅಂದವಾಗಿ ಕಾಣುವಂತೆ ಮಾಡಲು ಶಿವಮೊಗ್ಗ ನಗರದ ಮುಖ್ಯ ರಸ್ತೆಗಳಲ್ಲಿ, ವೃತ್ತಗಳಲ್ಲಿ ಹಾಗೂ ಅಂಬಾರಿ ಬರುವ ಸ್ಥಳಗಳಲ್ಲಿ, ಅಲಂಕಾರ ದಸರಾ ಸಮಿತಿಯಿಂದ ವಿವಿಧ ರೀತಿಯ ವಿದ್ಯುತ್ ದೀಪಾಲಂಕಾರದಿಂದ ನಗರವನ್ನು ಕಂಗೊಳಿಸುವಂತೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಮೆರವಣಿಗೆಯನ್ನು ಪ್ರಾರಂಭಿಸುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ರಾಮಣ್ಣ ಶ್ರೇಷ್ಠಿ ವೃತ್ತದ ಮುಖಾಂತರ ಶಿವಪ್ಪ ನಾಯಕ ವೃತ್ತದವರೆಗೆ ವಿದ್ಯುತ್ ದೀಪ ಅಲಂಕಾರವನ್ನು ಮಾಡಲಾಗುತ್ತದೆ. ಬೆಕ್ಕಿನ ಕಲ್ಮಠದಿಂದ ಮೀನಾಕ್ಷಿ ಭವನ, ಶಿವಪ್ಪ ನಾಯಕ ವೃತ್ತದಿಂದ, ಅಶೋಕ ವೃತ್ತದ ವರೆಗೆ ಅಲಂಕಾರಿಕ ವಿದ್ಯುತ್ ಲೈಟ್‌ಗಳನ್ನು ತೋರಣದ ರೀತಿಯಲ್ಲಿ ಅಳವಡಿಸಲಾಗಿದೆ ಎಂದರು.


ಹಾಗೆಯೇ ಶಿವಪ್ಪ ನಾಯಕ ವೃತ್ತದಿಂದ ಟಿ.ಶೀನಪ್ಪ ಶೆಟ್ಟಿ, ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಲಕ್ಷ್ಮಿ ಟಾಕೀಸ್ ವೃತ್ತದವರೆಗೆ ಸಾಗಿ ಫ್ರೀಡಂ ಪಾರ್ಕ್ವರೆಗೆ ವಿಶೇಷ ರೀತಿಯ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಟಿ.ಶೀನಪ್ಪ ಶೆಟ್ಟಿ ವೃತ್ತದಿಂದ ಅಮೀರ್ ಅಹ್ಮದ್ ಸರ್ಕಲ್ ವರೆಗೆ ವಿಶೇಷ ರೀತಿಯ ವಿದ್ಯುತ್ ಬಲ್ಬ್ಗಳಿಂದ ನಿರ್ಮಿಸಿರುವ ತೋರಣ ರೀತಿಯ ಅಲಂಕಾರ ಮಾಡಲಾಗುತ್ತಿದೆ ಎಂದರು.


ದಸರಾ ಉತ್ಸವವು 9 ದಿನಗಳು ಆಚರಿಸುವುದರಿಂದ ಉಷಾ ನರ್ಸಿಂಗ್ ಹೋಮ್ ವೃತ್ತದಿಂದ ಭಗತ್ ಸಿಂಗ್ ವೃತ್ತದ ವರೆಗೆ ಲಕ್ಷ್ಮೀ ಟಾಕೀಸ್ ಮಾರ್ಗವಾಗಿ ಫ್ರೀಡಂ ಪಾರ್ಕ್ ಮುಂಭಾಗದಿAದ ನವರಾತ್ರಿ 9 ದಿನಗಳಲ್ಲೂ ವಿದ್ಯುತ್ ದೀಪ ಅಲಂಕಾರವನ್ನು ಮಾಡಲಾಗುತ್ತಿದೆ ಎಂದರು.
ನಗರದ ವಿವಿಧ ವೃತ್ತಗಳಲ್ಲಿ  ದೇವರ ವಿಗ್ರಹಗಳನ್ನು ಸ್ಥಾಪಿಸಲಾಗುತ್ತಿದೆ. ನೆಹರು ರಸ್ತೆಯಲ್ಲಿ ನವದುರ್ಗೆಯರ ಫ್ಲೆಕ್ಸ್ಗಳನ್ನು ಅಳವಡಿಸಲಾಗುವುದು. ಫ್ರೀಡಂ ಪಾರ್ಕಿನಲ್ಲಿ ಚಂದ್ರಯಾನ ಉಪಗ್ರಹದ ಕಲಾಕೃತಿ ನಿರ್ಮಿಸಲಾಗಿದೆ. ಲಕ್ಷ್ಮಿ ವೃತ್ತದಲ್ಲಿ ಶ್ರೀ ರಾಮ ದೇವರ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲಾಗಿದೆ ಎಂದರು.


ಇದಲ್ಲದೆ ನಗರದ ವಾಣಿಜ್ಯ ಮಳಿಗೆಗಳು ಹಾಗೂ ಮುಖ್ಯ ರಸ್ತೆಯಲ್ಲಿನ ಕಟ್ಟಡಗಳಿಗೆ ಸ್ವಯಂಪ್ರೇರಿತವಾಗಿ ವಿದ್ಯುತ್ ದೀಪಾಲಂಕಾರವನ್ನು ಮಾಡಿಕೊಳ್ಳಲು ಸಾರ್ವಜನಿಕರಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಕೋರಲಾಗಿದೆ. ಒಟ್ಟಾರೆ ನಾಡಹಬ್ಬವನ್ನು ವಿಶೇಷ ಅಲಂಕಾರದ ಮೂಲಕ ಸುಂದರವಾಗಿ ಆಚರಿಸಲು ಸಮಿತಿ ನಿರ್ಧರಿಸಿದೆ ಎಂದರು.


ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೈಸೂರು ದಸರಾ ಬಿಟ್ಟರೆ ಶಿವಮೊಗ್ಗ ದಸರಾಕ್ಕೆ ತನ್ನದೇ ಆದ ಇತಿಹಾಸ ಇದೆ. ಈ ಹಬ್ಬವನ್ನು ಮುಂದಿನ ದಿನಗಳಲ್ಲಿ ಇನ್ನೂ ಸುಂದರವಾಗಿಸಲು ಮತ್ತು ಮೆರವಣಿಗೆಗೆ ಅನುಕೂಲವಾಗುವಂತೆ ಮಾಡಲು ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳನ್ನು ತೆಗೆದುಹಾಕಿ ಕೇಬಲ್ ಮೂಲಕ ಅಳವಡಿಸಲಾಗುವುದು. ಹಾಗೆಯೇ ಶಾಸಕರ ಅನುದಾನವೂ ಸೇರಿದಂತೆ ಸರ್ಕಾರದ ನೆರವು ಪಡೆದು ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಲು ಅಗತ್ಯ ಯೋಜನೆ  ಕೈಗೊಳ್ಳಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಎಸ್. ಶಿವಕುಮಾರ್, ಸದಸ್ಯರಾದ ಜ್ಞಾನೇಶ್ವರ್, ಸುವರ್ಣಾ ಶಂಕರ್, ಅಧಿಕಾರಿಗಳಾದ ಹರೀಶ್, ದೀಪಕ್, ಪವನ್ ಇದ್ದರು.

Leave A Reply

Your email address will not be published.

error: Content is protected !!