ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ತಂಪೆರೆದ ಮಳೆ
ಶಿವಮೊಗ್ಗ/ಚಿಕ್ಕಮಗಳೂರು : ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಇಂದು ಸಂಜೆ ವೇಳೆ ಮಳೆಯಾಗಿದ್ದು ಬಿಸಿಲಿನಿಂದ ಕಂಗೆಟ್ಟಿದ್ದ ಜನರು ತಂಪಿನ ವಾತಾವರಣದ ಕಂಡು ಸಂಭ್ರಮ ಪಟ್ಟರು.
ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು, ಎನ್.ಆರ್.ಪುರ ತಾಲೂಕಿನಲ್ಲಿ ಮಧ್ಯಾಹ್ನ ಭರ್ಜರಿ ಮಳೆ ಸುರಿದಿದೆ. ಬಾಳೆಹೊನ್ನೂರಿನಲ್ಲಿ ಧಾರಾಕಾರವಾಗಿ ಮಳೆ ಬಿದ್ದಿದೆ.
ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ.
ಹಂಗರವಳ್ಳಿ, ಕೆರೆಮಕ್ಕಿ, ಬೈಗೂರು ಗ್ರಾಮದಲ್ಲಿ ಮಳೆ ಸುರಿದಿದೆ. ಈ ಭಾಗದಲ್ಲಿ ವರ್ಷದ ಮೊದಲ ಮಳೆ ಇದಾಗಿದ್ದು, ಕೃಷಿಕರು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸದ ವಾತಾವರಣ ಕಂಡುಬಂದಿದೆ.
ಇನ್ನೂ ಶಿವಮೊಗ್ಗ ತಾಲೂಕಿನ ಕುಂಸಿ, ಚೋರಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಶಿವಮೊಗ್ಗ ನಗರ, ಸಾಗರ ಮತ್ತು ಶಿಕಾರಿಪುರ ತಾಲೂಕಿನ ವಿವಿಧೆಡೆ ಮಳೆಯಾಗಿದೆ. ಭಾರಿ ಬಿಸಿಲಿಗೆ ಹೈರಾಣಾಗಿದ್ದ ಜನತೆಗೆ ಮಳೆ ತುಸು ನೆಮ್ಮದಿ ನೀಡಿದೆ.