ಒಂಟಿ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ !
ಚಿಕ್ಕಮಗಳೂರು : ಒಂಟಿಯಾಗಿ ವಾಸವಾಗಿದ್ದ ಮಹಿಳೆಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಹುಣಸೇಮಕ್ಕಿಯಲ್ಲಿ ಗುರುವಾರ ವರದಿಯಾಗಿದೆ.
ಹುಣಸೇಮಕ್ಕಿ ಗ್ರಾಮದ ನಿವಾಸಿ ಲಲಿತಾ (43) ಬರ್ಬರವಾಗಿ ಹತ್ಯೆಯಾದ ಮಹಿಳೆ. ಕಳೆದ ಅನೇಕ ವರ್ಷಗಳಿಂದ ಈ ಮಹಿಳೆ ಹುಣಸೇಮಕ್ಕಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು ಎನ್ನಲಾಗಿದೆ.
ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಮಹಿಳೆ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ. ಗುರುವಾರ ಮಹಿಳೆ ಮನೆಯಿಂದ ಹೊರ ಬಾರದಿರುವುದನ್ನು ಕಂಡು ಅನುಮಾನಗೊಂಡ ಗ್ರಾಮದ ನಿವಾಸಿಗಳು ಮನೆಯೊಳಗೆ ನೋಡಿದಾಗ ಮಹಿಳೆ ಲಲಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಮಹಿಳೆಯ ಕತ್ತು ಸೀಳಿದ್ದರಿಂದ ರಕ್ತಸ್ರಾವ ಉಂಟಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಸ್ಥಳದ ಮಹಜರು ನಡೆಸಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆಲ್ದೂರು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.