ಶೇ. 100 ಮತದಾನಕ್ಕೆ ಪ್ರೇರೇಪಿಸಿ ; ನರೇಂದ್ರ ಕುಮಾರ್
ರಿಪ್ಪನ್ಪೇಟೆ : ಚುನಾವಣೆ ದೊಡ್ಡ ಪರ್ವ. ಮತದಾನ ನಮ್ಮೆಲ್ಲರ ಹಕ್ಕು. ಈ ಬಾರಿಯ ಲೋಕಸಭಾ ಚುನಾವಣೆ ಹೊಸನಗರ ತಾಲ್ಲೂಕಿನಲ್ಲಿ ಮತದಾನದ ಪ್ರಮಾಣ ಹೆಚ್ಚಬೇಕು. ತಾವು ಮತದಾನ ಮಾಡಿ ಅಕ್ಕಪಕ್ಕದವರೂ ಮತದಾನ ಮಾಡುವಂತೆ ಉತ್ತೇಜಿಸುವುದರೊಂದಿಗೆ ಶೇ. 100 ರಷ್ಟು ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಸನಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರಕುಮಾರ್ ಹೇಳಿದರು.
ರಿಪ್ಪನ್ಪೇಟೆಯಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಪಂಚಾಯ್ತಿ ಶಿವಮೊಗ್ಗ ಹೊಸನಗರ ತಾಲ್ಲೂಕು ಪಂಚಾಯ್ತಿ ಸ್ವೀಪ್ ಸಮಿತಿ ಹಾಗೂ ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ಕಂದಾಯ ಇಲಾಖೆ ಸೇರಿ ರಿಪ್ಪನ್ಪೇಟೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾಗಿದೆ. ಮತದಾನ ಮಾಡುವುದು ನಿಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದೆ.
ಮತದಾರ ಜಾಗೃತರಾಗಿ ಮತದಾನ ಮಾಡಿದರೇ ಸದೃಢ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ನೀವು ಮಾಡುವ ಮತದಾನ ಗೌಪ್ಯವಾಗಿರಲಿ ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಪರಾಧ ಮತ್ತು ಶಿಕ್ಷಾರ್ಹ. ಪ್ರತಿಯೊಬ್ಬರು ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಸಿದ್ದರಾಗಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್, ಗ್ರಾಮ ಪಂಚಾಯ್ತಿ ಪಿಡಿಓ ಮಧುಸೂಧನ್, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಸಿಬ್ಬಂದಿಗಳಾದ ನಾಗೇಶ್ಮೋರೆ, ರಾಜೇಶ್,
ಹಾಗೂ ಎನ್.ಆರ್.ಇ.ಜಿ. ತಾಲ್ಲೂಕು ಮಟ್ಟದ ಅಧಿಕಾರಿವರ್ಗ ಹಾಜರಿದ್ದರು.