ಭಯೋತ್ಪಾದನಾ ಚಟುವಟಿಕೆಯ ಕಿಂಗ್ ಪಿನ್ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ದೆಹಲಿಯಲ್ಲಿ ಬಂಧನ
ತೀರ್ಥಹಳ್ಳಿ : ತೀರ್ಥಹಳ್ಳಿ ಮೂಲದ ಶಂಕಿತ ಉಗ್ರ ಅರಾಫತ್ ಅಲಿಯನ್ನು ಎನ್ಐಎ ದೆಹಲಿ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ.
2019 ರಲ್ಲಿ ತೀರ್ಥಹಳ್ಳಿ ತೊರೆದು, ಬೆಂಗಳೂರಿಗೆ ಅರಾಫತ್ ಅಲಿ ಹೋಗಿದ್ದ ಎಂದು ಹೇಳಲಾಗಿತ್ತು. ಬೆಂಗಳೂರಿನಲ್ಲಿಯೇ ಇಂಜಿನಿಯರಿಂಗ್ ಸೇರಿಕೊಂಡಿದ್ದ ಆತ 2020 ರ ನವಂಬರ್ 27 ರ ಮಂಗಳೂರು ಗೋಡೆ ಬರಹ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದ ಆರೋಪ ಈತನ ಮೇಲಿತ್ತು.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ನೇರ ಸಂಪರ್ಕ ಹೊಂದಿದ್ದ ಆರಾಫತ್, ಮೊಹಮದ್ ಶಾರೀಖ್ ಹಾಗೂ ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಗೋಡೆ ಬರಹಕ್ಕೆ ಪ್ರಚೋದನೆ ನೀಡಿದ್ದ. ಈತ ಮೂಲತಃ ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿಯಾಗಿದ್ದಾನೆ.
ಈ ವಿಚಾರವಾಗಿ ಈಗಾಗಲೇ ಶಿವಮೊಗ್ಗಕ್ಕೂ ಭೇಟಿ ನೀಡಿರುವ ಎನ್ಐಎ ಟೀಂ ಶಂಕಿತ ಉಗ್ರನ ಸಂಬಂಧ ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ. ದುಬೈನ ಫರ್ಫ್ಯೂಮ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ಬಳಿಕ ಈತ ನಾಪತ್ತೆಯಾಗಿದ್ದ. ಕಳೆದ 2020 ರಿಂದಲೂ ತಲೆಮರೆಸಿಕೊಂಡಿದ್ದ ಅರಾಫತ್ ಇದೀಗ ಕೀನ್ಯಾದ ನೈರೋಬಿಯಿಂದ ದೆಹಲಿಗೆ ಬಂದ ವೇಳೆ ಅರಾಫತ್ ಅಲಿಯನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಐಸಿಸ್ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ ಹಾಗೂ ಹಣದ ಸಹಾಯ ನೀಡುತ್ತಿದ್ದ ಆರೋಪದ ಮೇಲೆ ಆರಾಫತ್ ಆಲಿಯನ್ನು ವಶಕ್ಕೆ ಪಡೆಯಲಾಗಿದೆ.