ಸಹಕಾರ ಸಂಘಗಳ ಉಳಿವು ಸಹಕಾರಿಗಳ ಕೈಯಲ್ಲಿದೆ ; ಸಚಿವ ಕೆ.ಎನ್.ರಾಜಣ್ಣ

0 36


ಶಿವಮೊಗ್ಗ : ಸಹಕಾರಿಗಳು ರಾಜಕಾರಣಿಗಳಾಗಬಾರದು. ಸಹಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದಲ್ಲಿ ಸಂಸ್ಥೆಯು ದೀರ್ಘ ಅವಧಿಯವರೆಗೆ ಉಳಿದು ಬಲಿಷ್ಟಗೊಂಡು ಜನೋಪಯೋಗಿಯಾಗಲಿವೆ. ತಪ್ಪಿದಲ್ಲಿ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.


ಅವರು ಇಂದು ಸಾಗರದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವು ಸ್ಥಳೀಯ ಈಡಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅನೇಕ ಸಮಸ್ಯೆ-ಸವಾಲುಗಳ ನಡುವೆಯೂ ಸಾಗರದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವು ಸವೆಸಿದ ಹಾದಿ ದೀರ್ಘವಾಗಿದ್ದು, ಯಶಸ್ವಿಗೊಂಡು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹರ್ಷದ ಸಂಗತಿ ಎಂದ ಅವರು, ಅದಕ್ಕೆ ಕಾರಣಕರ್ತರಾದ ನೌಕರರು ಮತ್ತು ಸಿಬ್ಬಂಧಿಗಳ ಶ್ರಮ ಅಭಿನಂದನೀಯ ಎಂದವರು ನುಡಿದರು.


ಪ್ರಸ್ತುತ ಸಂದರ್ಭದಲ್ಲಿ ಅಡಿಕೆ ಬೆಳೆಯ ಕ್ಷೇತ್ರ ವ್ಯಾಪ್ತಿ ದಿನೇದಿನೇ ವಿಸ್ತರಣೆಯಾಗುತ್ತಿದ್ದು ಬೆಳೆ ನಿಯಂತ್ರಣ ಅಸಾಧ್ಯ ಎನ್ನುವಂತಾಗಿದೆ. ಒಂದೆಡೆ ರೈತರು ಖರೀದಿಸುವ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ರೈತರ ಕೃಷಿ ಉತ್ಪನ್ನಗಳ ಬೆಲೆ ಕನಿಷ್ಟ ಹಂತ ತಲುಪಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಸಹಕಾರಿ ಸದಸ್ಯರು ಸಂಘದಲ್ಲಿ ಹೆಚ್ಚಿನ ಠೇವಣಿ ಇಡಬೇಕು ಹಾಗೂ ಕಡಿಮೆ ಸಾಲ ಪಡೆದುಕೊಳ್ಳಬೇಕು. ಅಗತ್ಯವಿರುವವರು ಸರಕಾರದಿಂದ ದೊರೆಯುವ ಕನಿಷ್ಟ ಬಡ್ಡಿದರದ ಸಾಲಸೌಲಭ್ಯಗಳನ್ನು ಪಡೆದು ಜೀವನ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಮುಂದಾಗಬೇಕು. ಇದು ರೈತರ ಆರ್ಥಿಕಾಭಿವೃದ್ಧಿ ಹಾಗೂ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿದೆ ಎಂದರು.


ಸಹಕಾರಿ ಚಳುವಳಿ eನಾಂದೋಲನವಾಗಿ ರೂಪುಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಹಕಾರ ಸಂಘಗಳನ್ನು ವಿಲೀನಗೊಳಿಸಿ, ಪಂಚಾಯಿತಿಗೊಂದರಂತೆ ಸಂಘಗಳನ್ನು ಸ್ಥಾಪಿಸಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.


ಸಹಕಾರ ಚಳುವಳಿಯ ಉನ್ನತಿಗಾಗಿ ಸರ್ವ ಸಹಕಾರಿಗಳು ಸಂಕಲ್ಪ ಮಾಡಬೇಕಾದ ಸಂದರ್ಭ ಇದಾಗಿದೆ ಎಂದ ಅವರು ಅಡಿಕೆ ಬೆಳೆಗೆ ಅಲ್ಲಲ್ಲಿ ಕಂಡು ಬಂದಿರುವ ಎಲೆಚುಕ್ಕೆ ರೋಗಕ್ಕೆ ಅಗತ್ಯವಿರುವ ಔಷಧವನ್ನು ಸಹಾಯಧನದೊಂದಿಗೆ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.


ಆಮದು ಅಡಿಕೆ ಸುಂಕ ಹೆಚ್ಚಿಸಿ, ದೇಸಿ ಅಡಿಕೆಗೆ ಮಾರುಕಟ್ಟೆ ಕಲ್ಪಿಸಿ : ಮಧು ಎಸ್.ಬಂಗಾರಪ್ಪ


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ ಅವರು ಮಾತನಾಡಿ, ಭೂತಾನ್ ಸೇರಿದಂತೆ ವಿದೇಶಗಳಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಅಡಿಕೆಗೆ ಸುಂಕ ಹೆಚ್ಚಿಸಿ, ದೇಸಿ ಅಡಿಕೆಗೆ ಸ್ಥಿರ ಮಾರುಕಟ್ಟೆ ಒದಗಿಸಿ ರಾಜ್ಯದ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮೀಣ ರೈತರಿಗೆ ಸಹಕಾರ ಸಂಸ್ಥೆಗಳು ಜೀವನಾಡಿಯಾಗಿವೆ. ಈ ಸಂಸ್ಥೆಗಳು ಉತ್ತುಂಗಕ್ಕೆ ಏರುವಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮ ಪ್ರಶಂಸನೀಯ ಎಂದ ಅವರು, ಅನೇಕ ಸಮಸ್ಯೆಗಳ ನಡುವೆಯೂ ಅಡಿಕೆ ವಹಿವಾಟು ಎಂದಿನಂತೆ ಸಾಗಿದೆ ಎಂದರು.


ಶರಾವತಿ ಮುಳುಗಡೆ ಸಂತ್ರಸ್ಥರು, ಬಗರ್‍ಹುಕುಂ ಸಾಗುವಳಿದಾರರ ಸಮಸ್ಯೆ ಸೇರಿದಂತೆ ರೈತರ ಎಲ್ಲಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಮಾನ್ಯಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ. ರೈತರ ಕೈತಪ್ಪಿ ಹೋಗಿರುವ ಹಕ್ಕುಪತ್ರಗಳನ್ನು ಇಲಾಖೆ ವತಿಯಿಂದ ಪುನರ್ ಕೊಡಿಸಲು ಕ್ರಮ ವಹಿಸಲಾಗುವುದು ಎಂದ ಅವರು, ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಈಗಾಗಲೆ ಸಮಾಲೋಚನೆ ಮಾಡಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಸಂಘದ ಸುವರ್ಣ ಮಹೋತ್ಸವದ ಕೂಪನ್‍ಗಳನ್ನು ಬಿಡುಗಡೆಗೊಳಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಅಡಿಕೆ ಮಲೆನಾಡಿನ ಕಲ್ಪವೃಕ್ಷ. ಅಡಿಕೆ ಬೆಲೆ ಏರಿಳಿತ ರೈತರನ್ನು ಹೈರಾಣಾಗಿಸಿದೆ. ಸ್ಥಿರ ಬೆಲೆ ನಿಗಧಿಗೆ ಸರ್ಕಾರಗಳ ಯೋಜನೆ ರೂಪಿಸಬೇಕು. ಅಡಿಕೆಯ ಉಪಉತ್ಪನ್ನಗಳ ಮೂಲಕ ಆದಾಯ ಹೆಚ್ಚಳ, ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.


ಆಪ್ಸ್‍ಕೋಸ್ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್, ಷಡಾಕ್ಷರಿ, ಹೆಚ್.ಎಸ್.ಮಂಜಪ್ಪ, ವೈ.ಎನ್.ಸುಬ್ರಹ್ಮಣ್ಯ ಯಡಗೆರೆ, ಆರ್.ಎಂ.ಮಂಜುನಾಥಗೌಡ, ಬಿ.ಆರ್.ಜಯಂತ್, ರಾಮಚಂದ್ರಭಟ್, ಮಧುಕರ ಎನ್.ಹೆಗಡೆ, ಕೆ.ಬಸವರಾಜ್, ಎಂ.ವಿ.ಮೋಹನ್, ಜಿ.ವಾಸುದೇವ ಸೇರಿದಂತೆ ಮಾಜಿ ಅಧ್ಯಕ್ಷರುಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!