ಹೊಸನಗರದಲ್ಲಿ ಚುನಾವಣಾ ಪ್ರಚಾರ ಸಭೆ | ಕುಟುಂಬ ರಾಜಕಾರಣದಿಂದ ಮೂಲ ಬಿಜೆಪಿ ಕಾರ್ಯಕರ್ತರು ನೊಂದಿದ್ದಾರೆ ; ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

0 540

ಹೊಸನಗರ : ಬಿಜೆಪಿ ಪಕ್ಷ ಸೈದ್ಧಾಂತಿಕ ತಳಹದಿಯ ಮೇಲೆ ಕೆಲಸ ಮಾಡುವ ಪಕ್ಷ. ಆದರೆ ಇತ್ತೀಚಿಗೆ ಕುಟುಂಬ ರಾಜಕಾರಣ, ಜಾತಿ ರಾಜಕಾರಣಗಳು ಕಾಣುತ್ತಿರುವುದು ಪಕ್ಷದ ಬೆಳವಣಿಗೆಗೆ ಮಾರಕವಾಗಿದೆ ಎಂದು ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ನೂತನ ಚುನಾವಣಾ ಕಾರ್ಯಲಯವನ್ನು ಉದ್ಘಾಟಿಸಿದ ಬಳಿಕ ಅವರು ಈಡಿಗರ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಯಡಿಯೂರಪ್ಪ ಹಾಗೂ ಅವರ ಮಕ್ಕಳು ಇಡೀ ಆಡಳಿತ ತಮ್ಮ ಕುಟುಂಬದಲ್ಲಿಯೇ ಇರಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಆದರೆ ಬಿಜೆಪಿ ಲಕ್ಷಾಂತರ ಮಂದಿ ಕಾರ್ಯಕರ್ತರು ತಪಸ್ಸಿನಂತೆ ಕಟ್ಟಿ ಬೆಳಸಿದ ಪಕ್ಷ. ಕೇಂದ್ರದ ನಾಯಕರು ಹಾಗೂ ನರೇಂದ್ರ ಮೋದಿ ಅವರು ರಾಜ್ಯದ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಯಾಗಿಸಲು ಮುಂದಾಗಿದ್ದಾರೆ. ಹೊಂದಾಣಿಕೆಯ ರಾಜಕಾರಣದಿಂದ ಪಕ್ಷದ ಮೂಲ ಕಾರ್ಯಕರ್ತರು ನೊಂದಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆಯ ಮಣ್ಣಿಗೆ ಸಂಘಟನೆ, ಸಿದ್ದಾಂತಕ್ಕೆ ಬೆಲೆ ಇದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಬೆಂಬಲಿಸುತ್ತಿರುವ ಅಪಾರ ಸಂಖ್ಯೆಯ ಜನಸಮೂಹವೇ ಇದಕ್ಕೆ ಸಾಕ್ಷಿ. ತಾವು ಯಾವುದೇ ಕಾರಣಕ್ಕೆ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಅಪಪ್ರಚಾರ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳು ತಮಗೆ ಬೆಂಬಲ ಸೂಚಿಸಿವೆ. ಬಿ.ವೈ.ರಾಘವೇಂದ್ರ ಹಾಗೂ ಗೀತಾ ಶಿವರಾಜ್‌ಕುಮಾರ್ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ವಾಟಗೋಡು ಸುರೇಶ್ ಮಾತನಾಡಿ, ಬಿಜೆಪಿಯನ್ನು ಸ್ವಚ್ಚಗೊಳಿಸಬೇಕಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ದೂರ ಮಾಡಲಾಗಿದೆ. ಸಾಗರ ಹಾಗೂ ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ಅವರ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ. ಹಿಂದುಳಿದ ವರ್ಗಕ್ಕೆ ಸೇರಿದ ಅವರು ಈಗ ಈಶ್ವರಪ್ಪ ಅವರನ್ನು ಬೆಂಬಲಿಸುವ ಮೂಲಕ ತಮಗಾದ ಅನ್ಯಾಯಕ್ಕೆ ಉತ್ತರ ನೀಡಬೇಕೆಂದರು.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ನಳಿನಿರಾವ್ ಮಾತನಾಡಿದರು. ಪ್ರಮುಖರಾದ ತ.ಮ.ನರಸಿಂಹ, ವಡಾಹೊಸಳ್ಳಿ ಕುಮಾರಸ್ವಾಮಿ, ರಾಘವೇಂದ್ರ, ಸತೀಶ್, ಕುಂಬ್ಳೆ ಸುರೇಶ್, ರೇಣುಕಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ನಿಟ್ಟೂರಿನಲ್ಲಿ ಸಭೆ:
ಇದಕ್ಕೂ ಮೊದಲು ತಾಲೂಕಿನ ನಿಟ್ಟೂರಿನಲ್ಲಿಯೂ ತಮ್ಮ ಬೆಂಬಲಿಗರ ಸಭೆ ನಡೆಸಿದರು. ರಾಜಕೀಯ ಜೀವನದಲ್ಲಿ ನಾನು ಸಿದ್ದಾಂತ ಬಿಟ್ಟು ಹೋದವನಲ್ಲ. ಪಕ್ಷಕ್ಕಾಗಿ ದುಡಿದಿದ್ದೇನೆ ಎಂದ ಅವರು ಇರುವ ಕಡಿಮೆ ಕಾಲಾವಧಿಯಲ್ಲಿ ಎಲ್ಲರನ್ನೂ ತಲುಪುವುದು ಕಷ್ಟ. ಪ್ರತಿಯೊಬ್ಬ ಬೆಂಬಲಿಗರೂ ತಾವೇ ಅಭ್ಯರ್ಥಿ ಎಂದು ಭಾವಿಸಿ ಜನರ ವಿಶ್ವಾಸ ಗಳಿಸಿ, ಮತಯಾಚಿಸಿ ಎಂದು ಕರೆ ನೀಡಿದರು.

Leave A Reply

Your email address will not be published.

error: Content is protected !!