ಹೊಸನಗರ ಚೆಕ್ ಪೋಸ್ಟ್’ಗಳಿಗೆ ಡಿಸಿ ಭೇಟಿ, ಪರಿಶೀಲನೆ | ಎಲ್ಲ ವಾಹನಗಳ ತಪಾಸಣೆ ನಡೆಸಬೇಕು ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ
ಹೊಸನಗರ: ಎರಡು ತಿಂಗಳುಗಳ ಕಾಲ ಎಲ್ಲ ವಾಹನಗಳನ್ನು ಸಂಪೂರ್ಣ ತಪಾಸಣೆ ನಡೆಸಿ ಅಕ್ರಮ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.
ಬುಧವಾರ ತಾಲ್ಲೂಕಿನಲ್ಲಿರುವ ಹುಲಿಕಲ್ ಮತ್ತು ನಿಟ್ಟೂರು ಚುನಾವಣೆ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಮಾತನಾಡಿ, ಒಂದೂವರೆ ತಿಂಗಳಲ್ಲಿ ಲೋಕಸಭೆಯ ಚುನಾವಣೆ ನಡೆಯುತ್ತಿರುವುದರಿಂದ ವಾಹನಗಳಲ್ಲಿ ಅಕ್ರಮವಾಗಿ ಹಣ ಇತ್ಯಾದಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಬಹುದು ಇದನ್ನು ಪತ್ತೆ ಹಚ್ಚುವ ಕಾರ್ಯ ನಿಮ್ಮಿಂದ ಆಗಬೇಕಾಗಿದೆ. ನೀವು ಎರಡು ತಿಂಗಳು ಯಾವುದೇ ಕಾರಣಕ್ಕೂ ಯಾವುದೇ ಮುಲಾಜಿಲ್ಲದೇ ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು ನಿಮ್ಮಿಂದ ಯಾವುದೇ ತಪ್ಪುಗಳು ನಡೆದರೂ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೊಸನಗರದ ತಹಶೀಲ್ದಾರ್ ರಶ್ಮಿ, ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್ ರೆಣುಕಯ್ಯ, ಗ್ರಾಮ ಆಡಳಿತಾಧಿಕಾರಿಗಳಾದ ಕೌಶಿಕ್, ದೀಪು, ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.