ಹೊಸನಗರ ; ತಾಲ್ಲೂಕು ಮಟ್ಟದ ಸ್ವೀಪ್ ಸಮಿತಿ ಉಸ್ತುವಾರಿಯಲ್ಲಿ ಬೈಕ್ ರ್ಯಾಲಿ
ಹೊಸನಗರ: ಮೇ 07ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು ಹಾಗೂ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಾಲ್ಲೂಕಿನ ಅಧಿಕಾರಿಗಳ ವರ್ಗ ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಿಂದ ಮಾವಿನಕೊಪ್ಪ, ಆರ್.ಎಂ.ಸಿ, ಕೋರ್ಟ್ ರಸ್ತೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ರಸ್ತೆ, ಹಳೇ ಕೋರ್ಟ್ ಸರ್ಕಲ್, ವಾಸವಿ ಸ್ಟೇಷನರಿ ಅಂಗಡಿ ಮುಂಭಾಗ, ಸಂತೆ ಮಾರ್ಕೆಟ್, ತಾಲ್ಲೂಕು ಕಛೇರಿಯ ಮುಂಭಾಗ ಹಾಗೂ ಹೊಸನಗರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸುವುದರ ಮೂಲಕ ಜನರಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ಹಾಗೂ ಅರ್ಹ ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ಸ್ವೀಪ್ ಸಮಿತಿಯ ಮೂಲಕ ಕರೆ ನೀಡಿದರು.
ಕೊಡಚಾದ್ರಿ ಕಾಲೇಜ್ ಉಪನ್ಯಾಸಕರಾದ ಪ್ರಭಾಕರ್ರವರು ಈ ರ್ಯಾಲಿಯಲ್ಲಿ ಪ್ರಜಾ ಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭಿತರಾಗಿ ಮತ್ತು ಧರ್ಮ ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆಂದು ರ್ಯಾಲಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರತಿಜ್ಞಾ ವಿಧಿ ಭೋಧಿಸಿದರು.
ಈ ಸಂದರ್ಭದಲ್ಲಿ ಹೊಸನಗರದ ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾರುತಿ, ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರಾದ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಪಟ್ಟಣ ಪಂಚಾಯತಿ ಕಂದಾಯ ಅಧಿಕಾರಿ ಪರಶುರಾಮ್, ಉಮಾಶಂಕರ್, ಶಿಶು ಅಭಿವೃದ್ಧಿ ಇಲಾಖೆಯ ರಾಜು, ರೆವಿನ್ಯೂ ಇನ್ಸ್ಪೆಕ್ಟರ್ ರೇಣುಕಯ್ಯ, ಶಿರಾಸ್ಥೆದಾರ್ ಸತೀಶ್, ಜಿಲ್ಲಾ ಪಂಚಾಯತಿಯ ಇಲಾಖೆಯ ಯೋಗೇಂದ್ರ, ಮಂಜುಪ್ಪ, ಮಿಥುನ್, ಪರಮೇಶ್, ಚಂದ್ರಪ್ಪ, ಗಣೇಶ್, ನಾಗಪ್ಪ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಉಪಖಜಾನೆ ಇಲಾಖೆಯ ಸವಿತಾ, ಇಂಜಿನಿಯರ್ ಶಿವಪ್ರಸಾದ್, ಸತೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.