Shivamogga | ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗ ಉಳಿಸಬೇಕಾಗಿದೆ ; ನಟ ಅಜಯ್ ರಾವ್

0 66

ಶಿವಮೊಗ್ಗ : ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗವನ್ನು ಉಳಿಸಬೇಕಾಗಿದೆ ಎಂದು ಖ್ಯಾತ ಚಲನಚಿತ್ರ ನಟ ಅಜಯ್ ರಾವ್ ಹೇಳಿದ್ದಾರೆ.
ಅವರು ಭಾನುವಾರ ನಗರದ ಪ್ರೀಡ್‌ಂ ಪಾರ್ಕ್‌ನಲ್ಲಿ ಸಾಂಸ್ಕೃತಿಕ ದಸರಾ-2023ರ ಅಂಗವಾಗಿ ನಾಟ್ಯವೈವಿಧ್ಯ ಮತ್ತು ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಚಿತ್ರಮಂದಿರಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಾ ರಂಗಗಳಂತೆ ಚಿತ್ರರಂಗದಲ್ಲೂ ಪೈಪೋಟಿ ಇದ್ದು, ಆಧುನಿಕತೆ ಮೇಳೈಸಿದೆ. ಕನ್ನಡ ಚಿತ್ರರಂಗ ಉತ್ತಮ ಚಿತ್ರಗಳನ್ನು ನೀಡುತಿದ್ದರೂ ಸಹ ಜನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ವಿಶ್ವದಲ್ಲೇ ಹೆಸರುಗಳಿಸಿದೆ. ಮೈಸೂರು ದಸರಾ ಬಿಟ್ಟರೇ, ಶಿವಮೊಗ್ಗ ದಸರಾ ಎರಡನೇ ಸ್ಥಾನದಲಿ ಇದ್ದು, ಇಲ್ಲಿಯ ಜನ ಕಲಾ ಮತ್ತು ಸಂಸ್ಕೃತಿಯ ಪೋಷಕರಾಗಿದ್ದಾರೆ. ಅನೇಕ ಕಲಾವಿದರಿಗೆ ಶಿವಮೊಗ್ಗ ಜನ್ಮನೀಡಿದೆ. ಮತ್ತು ಕಲಾ ಪೋಷಕರ ಸಂಖ್ಯೆ ಇಲ್ಲಿ ಹೇರಳವಾಗಿದೆ. ನನಗೆ ಈ ಸಾಂಸ್ಕೃತಿಕ ದಸರಾ ಉದ್ಘಾಟನೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.


ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿವಮೊಗ್ಗ ದಸರಾ ಪ್ರಖ್ಯಾತಿ ಪಡೆದಿದ್ದು, ದೊಡ್ಡ ಸಂಖ್ಯೆಯಲ್ಲಿ ಜನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಗರದ ಮಧ್ಯದಲ್ಲಿ ಸುಮಾರು 50 ಎಕರೆ ಜಾಗ ವಿಸ್ತೀರ್ಣದ ಈ ಜಾಗವನ್ನು ಸಾಂಸ್ಕೃತಿಕ ಉದ್ದೇಶಕ್ಕಾಗಿ ದೂರಾಲೋಚನೆಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪ್ರಯತ್ನದಿಂದ ನಮಗೆ ಲಭ್ಯವಾಗಿತ್ತು. ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಈ ಜಾಗವನ್ನು ಪಡೆಯುವುದು ದುಸ್ಸಹಾಸದ ಕೆಲಸ ಆದರೂ ಅವರ ಪ್ರಯತ್ನ ಈಗ ನಮಗೆ ಅನುಕೂಲ ತಂದಿದೆ. ಅದೇ ರೀತಿ ಶಿವಮೊಗ್ಗ ಅಭಿವೃದ್ಧಿಯಲ್ಲಿ ದಾಪೂಗಾಲು ಇಡುತ್ತಿದೆ ಎಂದರು.


ಸ್ಮಾರ್ಟ್ ಸಿಟಿ, ರೈಲ್ವೆ ಅಭಿವೃದ್ಧಿ, ಅಂತರ ರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ರೂಪುಗೊಂಡಿರುವುದರಿಂದ ಕೈಗಾರಿಕೋದ್ಯಮಿಗಳು ಶಿವಮೊಗ್ಗಕ್ಕೆ ಬರಲು ಆಸಕ್ತಿ ತೋರುತ್ತಿದ್ದಾರೆ. ಶೀಘ್ರದಲ್ಲೇ ಯುವಕರ ಅಪೇಕ್ಷೆಯಂತೆ ಗೋವಕ್ಕೆ, ಮಹಿಳೆಯರ ಬೇಡಿಕೆಯಂತೆ ತಿರುಪತಿಗೆ ಮತ್ತು ಹೈದರಾಬಾದ್‌ಗೆ ವಿಮಾನ ಯಾನ ಪ್ರಾರಂಭವಾಗಲಿದೆ. ಮುಚ್ಚಿ ಹೋಗುತ್ತಿರುವ ವಿಐಎಸ್‌ಎಲ್,ಎಂಪಿಎಂನ್ನು ಉಳಿಸುವ ಪ್ರಯತ್ನ ನಡೆದಿದೆ ಎಂದರು.


ಅಭಿಪ್ರಾಯ ಮತ್ತು ಪಕ್ಷ ಬೇಧ ಮರೆತು ಎಲ್ಲಾರು ಒಟ್ಟಾಗಿ ಶಿವಮೊಗ್ಗದಲ್ಲಿ ಅತ್ಯ ೆಯಿಂದ ದಸರಾ ಹಬ್ಬವನ್ನು ರಾಜ್ಯದಲ್ಲೇ ಮಾದರಿಯಾಗಿ ಆಚರಿಸುತ್ತಿದ್ದೇವೆ ಎಂದರು.


ಈ ಸಂದರ್ಭದಲ್ಲಿ ಎಸ್.ಎನ್. ಚನ್ನಬಸಪ್ಪ, ಆಯುಕ್ತ ಮಾಯಣ್ಣಗೌಡ, ಸಾಂಸ್ಕೃತಿಕ ದಸರಾ ಸಮಿತಿಯ ಅಧ್ಯಕ್ಷರಾದ ಈ. ವಿಶ್ವಾಸ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ್‌ನಾಯಕ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಡಳಿತ ಪಕ್ಷದ ನಾಯಕ ಎಸ್. ಜ್ಞಾನೇಶ್ವರ್ ಹಾಗೂ ಪಾಲಿಕೆಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!