Shivamogga | ನಿಯಂತ್ರಣ ಕ್ರಮ ಮತ್ತು ಪರೀಕ್ಷೆಯಿಂದ ಕೆಎಫ್‍ಡಿ ನಿಯಂತ್ರಿಸಲು ಡಿಸಿ ಸೂಚನೆ

0 91

ಶಿವಮೊಗ್ಗ: ಜಾನುವಾರುಗಳ ಮೇಲಿನ ಉಣ್ಣಿ(ಟಿಕ್) ಸಂಖ್ಯೆ ನಿಯಂತ್ರಣ ಮತ್ತು ಪರೀಕ್ಷೆಗಳಿಂದ ಶೀಘ್ರ ರೋಗ ಪತ್ತೆ ಮಾಡುವ ಮೂಲಕ ಕ್ಯಾಸನೂರು ಫಾರೆಸ್ಟ್ ಡಿಸೀಸ್‍ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ತಿಳಿಸಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಎಫ್‍ಡಿ ಮತ್ತು ರೇಬಿಸ್ ಕುರಿತಾದ ಅಂತರ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೆನಾಡಿನ ಅತಿ ಹೆಚ್ಚು ಉಣ್ಣಿಗಳಿರುವ ಪ್ರದೇಶಗಳನ್ನು ಗುರುತಿಸಿ, ಜಾನುವಾರುಗಳಿಗೆ ಅಂತಹ ಪ್ರದೇಶದಲ್ಲಿ ಮೇಯದಂತೆ ಕ್ರಮ ವಹಿಸಬೇಕು. ಕಾಲ ಕಾಲಕ್ಕೆ ಜಾನುವಾರುಗಳಿಗೆ ಐವರ್‍ಮೆಕ್ಟಿನ್/ಡೊರಾಮೆಕ್ಟಿನ್ ಲಸಿಕೆ ನೀಡಬೇಕು. ಜಾನುವಾರುಗಳ ಬೆನ್ನಿನ ಮೇಲೆ ಪೊರಾನ್ ಸಿಂಪಡಿಸಬೇಕು. ರೈತರು ಜಾನುವಾರುಗಳು ಮತ್ತು ಕೊಟ್ಟಿಗೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.

ಉಣ್ಣಿಗಳ ಹೊಸ ಹಾಟ್‍ಸ್ಪಾಟ್‍ಗಳನ್ನು ಕಡಿಮೆ ಮಾಡಬೇಕು. ರೈತರಿಗೆ ಉಣ್ಣಿ ನಿಯಂತ್ರಣ ಮತ್ತು ಕೆಎಫ್‍ಡಿ ಕುರಿತು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯವರು ಟಿಕ್ ಮಾದರಿ ಪರೀಕ್ಷೆ, ಟಿಕ್ ಸರ್ವೇಕ್ಷಣೆಯನ್ನು ಕೈಗೊಳ್ಳಬೇಕು. ಸಂಶಯಾಸ್ಪದ ಕೆಎಫ್‍ಡಿ ಪ್ರಕರಣಗಳನ್ನು ಶೀಘ್ರ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯ ಶಿಕ್ಷಣವನ್ನು ಹೆಚ್ಚಿಸಬೇಕೆಂದರು.
ಕೆಎಫ್‍ಡಿ ನಿಯಂತ್ರಣದಲ್ಲಿ ಪಶುಪಾಲನ ಇಲಾಖೆಯ ಜವಾಬ್ದಾರಿ ಹೆಚ್ಚಿರುತ್ತದೆ. ತರಬೇತಿ ಹೊಂದಿದ ಸಿಬ್ಬಂದಿಗಳಿಂದ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಸಾಕು ಪ್ರಾಣಿಗಳಲ್ಲಿ ಉಣ್ಣಿ ನಿಯಂತ್ರಕಗಳನ್ನು ಬಳಸಬೇಕು.


ಮಂಗ ಸತ್ತರೆ ಅರಣ್ಯ, ಪಶುಪಾಲನೆ, ಆರೋಗ್ಯ ಇಲಾಖೆಯರು ಮತ್ತು ಸಂಬಂಧಿಸಿದ ಪಿಡಿಓ ರವರು ಅದನ್ನು ವರದಿ ಮಾಡಬೇಕು. ಹಾಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, 60 ಮೀಟರ್ ಒಳಗೆ ರಾಸಾಯನಿಕ ಸಿಂಪಡಿಸಿ, ಇಲ್ಲಿ ಮಾನವರ, ಇತರೆ ಪ್ರಾಣಿಗಳ ಪ್ರವೇಶವನ್ನು ತಡೆಯಬೇಕು ಎಂದರು.
ಗ್ರಾಮ ಸಭೆಗಳಲ್ಲಿ ಕೆಎಫ್‍ಡಿ ಕುರಿತು ಅರಿವು ಮೂಡಿಸಿ, ಗ್ರಾಮಗಳಲ್ಲಿ ಈ ಕುರಿತಾದ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ಹೆಚ್ಚಬೇಕು. ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ತಂಡ ಕ್ಷೇತ್ರ ಭೇಟಿ ನೀಡಬೇಕು. ಸ್ಥಳೀಯ ಸಭೆಗಳಲ್ಲಿ ಇದರ ಬಗ್ಗೆ ಮಾಹಿತಿ ನಿಡಬೇಕು. ಪಿಡಿಓ ಗಳು ಸಹ ಸಹಕರಿಸಬೇಕು.
ಡಿಹೆಚ್‍ಓ 24ಗಂಟೆಗೂ ಅಧಿಕವಾದ ಜ್ವರವನ್ನು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ 2021 ರಲ್ಲಿ 14839 ನಾಯಿ ಕಡಿತದಲ್ಲಿ 03 ರೇಬಿಸ್ ಸಾವು ಸಂಭವಿಸಿದೆ. 2022 ರಲ್ಲಿ 19593 ನಾಯಿ ಕಡಿತ ಪ್ರಕರಣಗಳಲ್ಲಿ 1 ರೇಬಿಸ್‍ನಿಂದ ಸಾವು ಹಾಗೂ 2023 ರಲ್ಲಿ 16934 ನಾಯಿ/ಬೆಕ್ಕು ಕಡಿತ ಪ್ರಕರಣ ದಾಖಲಾಗಿದ್ದು ಬೆಕ್ಕು ಕಡಿತದಿಂದ ಸೊರಬದಲ್ಲಿ 01 ಸಾವು ಸಂಭವಿಸಿದೆ. 2020 ರಿಂದ 2023 ರ ಆಗಸ್ಟ್ ಮಾಹೆವರೆಗೆ ಜಿಲ್ಲೆಯಲ್ಲಿ ರೇಬಿಸ್‍ನಿಂದ 8 ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು.


ಜಿಲ್ಲಾಧಿಕಾರಿಗಳು, ರೇಬಿಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆಗಳ ಲಭ್ಯತೆ ಇರಬೇಕು. ಹಾವು ಕಡಿತ ಮತ್ತು ರೇಬಿಸ್ ಲಸಿಕೆಗಳನ್ನು ಯಾವುದೇ ದಾಖಲೆಗಳಿಗೆ ಕಾಯದೆ ಶೀಘ್ರವಾಗಿ ನೀಡಬೇಕೆಂದು ಸೂಚಿಸಿದರು.

ರೇಬಿಸ್ ಪತ್ತೆ ಹಚ್ಚಲು ರಕ್ತ ಮಾದರಿಯನ್ನು ಬೇರೆಡೆ ಕಳುಹಿಸುದಕ್ಕಿಂತ, ಶೀಘ್ರ ಪತ್ತೆಗಾಗಿ ಜಿಲ್ಲೆಯಲ್ಲಿಯೇ ಪರೀಕ್ಷಾ ಪ್ರಯೋಗಾಲಯ ತರಲು ಡಿಹೆಚ್‍ಓ ಮತ್ತು ಸಂಬಂಧಿಸಿದ ಅಧಿಕಾರಿಗಳು ಪರಿಣಾಮಕಾರಿಯಾಗಿ ಪ್ರಯತ್ನಿಸಬೇಕು. ರೇಬಿಸ್ ಸೋಂಕಿತರು ಬದುಕುವುದಿಲ್ಲ. ಆದರೆ ಪರೀಕ್ಷಾ ಪ್ರಯೋಗಾಲಯದಿಂದ ಶೀಘ್ರ ರೋಗ ಪತ್ತೆಯಾದಲ್ಲಿ ಬೇರೆಯವರು ಸೋಂಕಿತ ನಾಯಿ/ಬೆಕ್ಕಿನಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬೇರೆಯವರಿಗೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ.
– ಡಾ.ಸೆಲ್ವಮಣಿ, ಜಿಲ್ಲಾಧಿಕಾರಿಗಳು

ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ :
ಜಿಲ್ಲಾಧಿಕಾರಿಗಳು ಮಾತನಾಡಿ, ಪ್ರತಿ ಗರ್ಭಿಣಿಯರನ್ನು ಮೊದಲನೇ ಮೂರು ತಿಂಗಳ ಅವಧಿಯಲ್ಲಿ ಹೆಚ್‍ಐವಿ ಪರೀಕ್ಷೆಗೆ ಒಳಪಡಿಸಿ ವರದಿಯನ್ನು ಅಪ್‍ಡೇಟ್ ಮಾಡಬೇಕು. ಏಡ್ಸ್ ದುರ್ಬಲ ವರ್ಗದಿಂದ ಈ ಸೋಂಕು ಹೆಚ್ಚಾಗಿ ಹರಡುವ ಕಾರಣ ಇದಕ್ಕಾಗಿಯೇ ಇರುವ 6 ಎನ್‍ಜಿಓ ಗಳು ಇಂತಹವನ್ನು ಗುರುತಿಸಿ, ಕಾಲ ಕಾಲಕ್ಕೆ ಪರೀಕ್ಷೆಗೊಳಪಡಿಸಿ, ಸೂಕ್ತ ಚಿಕಿತ್ಸೆ ಮತ್ತು ಈ ಬಗ್ಗೆ ಜಾಗೃತಿ-ಶಿಕ್ಷಣವನ್ನು ಹೆಚ್ಚಿಸಬೇಕು.


2022-23 ರಲ್ಲಿ 265 ಮತ್ತು 2023-24 ರಲ್ಲಿ ಈವರೆಗೆ 111 ಹೆಚ್‍ಐವಿ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 8 ವಿದ್ಯಾರ್ಥಿಗಳಿಗೆ ಹೆಚ್‍ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಲೇಜುಗಳಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮಗಳು ಹೆಚ್ಚಬೇಕು. ಇದಕ್ಕೆ ಕಾರಣವಾಗುತ್ತಿರುವ ಮೂಲವನ್ನು ಹುಡುಕಿ ನಿಯಂತ್ರಣ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಅನೇಕ ಪರಿಣಾಮಗಳಾಗುತ್ತಿದ್ದು, ಇದರ ಕುರಿತು ಜಾಗೃತಿ ಹಾಗೂ ನಿಯಂತ್ರಿಸಲು 2019 ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಪ್ರೋಗ್ರಾಮ್ ಆನ್ ಕ್ಲೈಮೇಟ್ ಚೇಂಜ್ ಕಾರ್ಯಕ್ರಮ ಜಾರಿಗೊಳಿಸಿದೆ.


ಹವಾಮಾನ ಬದಲಾವಣೆಯಿಂದ ಶಾಖ ತರಂಗ, ಚಂಡ ಮಾರುತ, ತೀವ್ರ ಉಸಿರಾಟದ ಖಾಯಿಲೆಗಳು ಇತರೆ ದುಷ್ಪರಿಣಾಮಗಳು ಹೆಚ್ಚುತ್ತಿದ್ದು, ಸಂಶೋಧನೆ ಪ್ರಕಾರ ವಿಶ್ವದಲ್ಲಿ 3.6 ಬಿಲಿಯನ್ ಜನರು ಹವಾಮಾನ ವೈಪರೀತ್ಯದಿಂದಾಗುವ ಖಾಯಿಲೆಗಳಿಗೆ ಒಳಗಾಗುವ ಹಾಗೂ 2023 ರ ಹೊತ್ತಿಗೆ 2.5 ಲಕ್ಷ ಹೆಚ್ಚುವರಿ ಸಾವು ಇದರಿಂದ ಸಂಭವಿಸಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ಆದ್ದರಿಂದ ಈ ಕಾರ್ಯಕ್ರಮದಡಿ ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಲ್ಟಿಸೆಕ್ಟರಲ್ ಟಾಸ್ಕ್‍ಫೋರ್ಸ್ ಸಮಿತಿ ರಚಿಸಬೇಕೆಂದರು.
ಜಿಲ್ಲಾಧಿಕಾರಿಗಳು ಸಮಿತಿ ರಚನೆ ಮಾಡಿ, ಕಾರ್ಯಕ್ರಮದನ್ವಯ ಎಲ್ಲ ಆಸ್ಪತ್ರೆಗಳಲ್ಲಿ ಉಸಿರಾಟದ ಖಾಯಿಲೆಗಳನ್ನು ಆನ್‍ಲೈನ್ ಎಂಟ್ರಿ ಮಾಡಬೇಕು. ಇತರೆ ದುಷ್ಪರಿಣಾಮ ತಡೆಗಟ್ಟಲು ನಿಯಮಾನುಸಾರ ಕ್ರಮ ವಹಿಸಬೇಕೆಂದರು.


ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸುಜಾತ ಕೆಆರ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

Leave A Reply

Your email address will not be published.

error: Content is protected !!