ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಮಂಗಮಾಯ ; ಈ ವಿಚಿತ್ರ ಘಟನೆ ನಡೆದಿದ್ದು ಎಲ್ಲಿ ಗೊತ್ತಾ ?
ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರ ಸಮೀಪದ ಹೊರಬೈಲಿನ ಶ್ಮಶಾನದಲ್ಲಿ ಸುಟ್ಟ ಶವದ ಬೂದಿಯನ್ನು ಹಾಗೂ ಸ್ಮಶಾನದಲ್ಲಿದ್ದ ಕಬ್ಬಿಣದ ರಾಡನ್ನು ಯಾರೋ ಕದ್ದೊಯ್ದ ವಿಚಿತ್ರ ಘಟನೆಯೊಂದು ಬುಧವಾರ ಬೆಳಕಿಗೆ ಬಂದಿದೆ.
ಪಟ್ಟಣದ ಸಮೀಪವಿರುವ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ 3 ದಿನದ ಹಿಂದೆ ಊರಿನ ಮಹಿಳೆಯೊಬ್ಬರ ಶವವನ್ನು ಸಂಸ್ಕಾರ ಮಾಡಲಾಗಿತ್ತು. ಮಾರನೇ ದಿನ ಕುಟುಂಬದವರು ಸ್ಮಶಾನದಲ್ಲಿ ಅಳಿದುಳಿದ ಕಟ್ಟಿಗೆ ಕೊಳ್ಳಿಯನ್ನು ದೂಡುವ ಪದ್ಧತಿಯಂತೆ ಕಟ್ಟಿಗೆಯನ್ನು ಮುಂದೆ ಹಾಕಿ ಒಂದು ಎಳನೀರು ಇಟ್ಟು ವಾಪಾಸು ಬಂದಿದ್ದರು. ಮೂರನೇ ದಿನವಾದ ಇಂದು ಸಂಸ್ಕಾರ ಮಾಡಿದ ಬೂದಿ ತೆಗೆಯಲು ಕುಟುಂಬಸ್ಥರು ಸ್ಮಶಾನಕ್ಕೆ ಬಂದಿದ್ದರು ಆದರೆ ಸ್ಮಶಾನದಲ್ಲಿ ನೋಡುವಾಗ ಸುಟ್ಟ ಶವದ ಬೂದಿ ಮಂಗ ಮಾಯವಾಗಿತ್ತು. ಆಶ್ಚರ್ಯವೆಂದರೆ ಬೂದಿ ಕದ್ದ ಕಳ್ಳರು ಮೂರು ಎಲುಬುಗಳನ್ನು ಅಲ್ಲೆ ಒಂದು ಬದಿಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಕುಟುಂಬದವರು ಆ ಮೂರು ಮೂಳೆಗಳನ್ನು ತಂದು ಮುಂದಿನ ಕಾರ್ಯವನ್ನು ಮಾಡಿದ್ದಾರೆ.
ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಇಲ್ಲದ್ದನ್ನು ನೋಡಿ ಕಂಗಾಲಾದ ಕುಟುಂಬಸ್ಥರು ಆಶ್ಚರ್ಯಚಕಿತರಾಗಿ ಊರಿನ ಗ್ರಾಮಸ್ಥರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಸ್ಮಶಾನಕ್ಕೆ ಹೋಗಿ ನೋಡಿದಾಗ ಕುಟುಂಬಸ್ಥರು ಹೇಳಿದ ವಿಷಯ ಸತ್ಯವಾಗಿತ್ತು. ಶವ ಸಂಸ್ಕಾರ ಮಾಡುವಾಗ ಅದರಲ್ಲಿ ಬಂಗಾರ, ಬೆಳ್ಳಿ ಹಾಗೂ ನಾಣ್ಯಗಳನ್ನು ಹಾಕಿರಬಹುದೆಂದು ಯೋಚಿಸಿ ಕಳ್ಳರು ಬೂದಿಯನ್ನು ತೆಗೆದುಕೊಂಡು ಹೋಗಿರಬಹುದು ಎಂದು ಊರಿನ ಸಾರ್ವಜನಿಕರಿಂದ ಮಾತುಗಳು ಕೇಳಿ ಬರುತ್ತಿದೆ.