ಹೊಸನಗರ ; ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್ ಮಾಲೀಕರು ಹೋಟೆಲ್ ಬಂದ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಹೇಳಿದರು.
ಇಲ್ಲಿನ ತಾಲೂಕು ಕಛೇರಿಯ ಮುಂಭಾಗ ವರ್ತಕರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದ ವತಿಯಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಕೊರತೆಯನ್ನು ತಪ್ಪಿಸುವ ಸಲುವಾಗಿ ತಹಸೀಲ್ದಾರ್ ಭರತ್ರಾಜ್ ಮೂಲಕ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಿ ಮಾತನಾಡಿದರು.
ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಕೊರತೆಯಿಂದಾಗಿ ಸರಬರಾಜು ಸರಿಯಾಗಿ ಇಲ್ಲದೇ ಹೋಟೆಲ್ ಉದ್ಯಮಕ್ಕೆ ಅತೀವ ತೊಂದರೆಯಾಗುತ್ತಿದೆ. ಪ್ರಧಾನಿಗಳು ಯಾವುದೇ ಕಾರಣಕ್ಕೂ ವಾಣಿಜ್ಯ ಮತ್ತು ಗೃಹ ಸಿಲಿಂಡರ್ಗಳ ಕೊರತೆ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಅದಾಗಿಯು ಹೊಸನಗರದಲ್ಲಿ ವಾಣಿಜ್ಯ ಸಿಲಿಂಡರ್ ಸರಬರಾಜು ಸರಿಯಾಗಿ ಆಗದೇ ಹೋಟೆಲ್ ಉದ್ಯಮ ಭಯ ಭೀತಿಗೊಂಡಿದೆ. ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಈ ಸಮಸ್ಯೆಯು ನಮಗೆಲ್ಲ ಅತೀವ ಸಂಕಷ್ಟಕ್ಕೀಡು ಮಾಡಿದೆ. ತಾವುಗಳು ದಯಮಾಡಿ ಸರಬರಾಜು ಏಜೆನ್ಸಿಗಳನ್ನು ಕರೆಸಿ ಮೇಲ್ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡು ನಿರಂತರ ಗ್ಯಾಸ್ ಸಿಲಿಂಡರ್ ಸರಬರಾಜಾಗುವಂತೆ ಸರ್ಕಾರ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕೆಂದರು.
ಹೋಟೆಲ್ ಮಾಲೀಕರು ಯಾರು ಶ್ರೀಮಂತರಿಲ್ಲ ;
ಹೊಸನಗರ ತಾಲ್ಲೂಕು ಪಟ್ಟಣದಲ್ಲಿ ಹೋಟೆಲ್ ಉದ್ಯಮ ನಡೆಸುವವರು ಯಾರು ಶ್ರೀಮಂತರಿಲ್ಲ. ಒಂದು ದಿನ ಹೋಟೆಲ್ ಬಾಗಿಲು ಹಾಕಿದರೆ ಮಾಲೀಕರು ಮತ್ತು ಕೆಲಸ ನಿರ್ವಹಿಸುವವರು ಬೀದಿಗೆ ಬರುತ್ತಾರೆ. ಸಂಸಾರ ನಡೆಸುವುದೇ ಕಷ್ಟಕರವಾಗಲಿದೆ. ಯಾವುದೇ ಕಾರಣಕ್ಕೂ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ತೊಂದರೆಯನ್ನು ಹೋಟೆಲ್ ಮಾಲೀಕರಿಗೆ ನೀಡಬಾರದೆಂದು ಉದಯ್ ಕುಮಾರ್ ಶೆಟ್ಟಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್, ಸಾಗರ-ಹೊಸನಗರ ಹೋಟೆಲ್ ಮಾಲೀಕರ ಸಂಘದ ನಿರ್ದೇಶಕರಾದ ನಿಖಿಲ್ ಪ್ರಭಾಕರ್, ಸ್ಪಂದನ ಬಿ.ಎಸ್. ಸುರೇಶ್, ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಸಂತೋಷ್ ಹೋಟೆಲ್ ರವಿ, ಸಂತೋಷ, ಮಾವಿನಕೊಪ್ಪ ಶ್ರಿಧರ, ಉದಯ್ಕುಮಾರ್, ಕೃಷ್ಣಮೂರ್ತಿ ಗೋವಿಂದಣ್ಣ, ರಾಘವೇಂದ್ರ, ಭೋಜೇಗೌಡ, ನಂಜುಂಡಿ, ಅಶೋಕ ಹೋಟೆಲ್ ರತ್ನಾಕರ, ಸುಭಾಷ್, ಚಂದ್ರಣ್ಣ ಮಹಾಬಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





