ಹೊಸನಗರ

ಅಬ್ಬಿ ಜಲಪಾತದಲ್ಲಿ ಪ್ರವಾಸಿಗನ ಮರಣ: ಶಾಶ್ವತ ತಂತಿಬೇಲಿಗೆ ಮುಂದಾದ ಅರಣ್ಯ ಇಲಾಖೆ

ಶಿವಮೊಗ್ಗ :ಜಿಲ್ಲೆಯ ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಪ್ರಸಿದ್ಧ ಅಬ್ಬಿ ಜಲಪಾತದಲ್ಲಿ ಪ್ರವಾಸಿಗನೊಬ್ಬ ನೀರುಪಾಲಾದ ದುರ್ಘಟನೆ ಸಂಭವಿಸಿದೆ. ಈ ಪ್ರಕರಣದ ಹಿನ್ನೆಲೆ ಅರಣ್ಯ ಇಲಾಖೆ ಕಠಿಣ ಕ್ರಮಗಳತ್ತ ಹೆಜ್ಜೆ ಹಾಕಿದೆ.

ಎಚ್ಚರಿಕೆ ಫಲಕ ಇದ್ದರೂ ನಿರ್ಲಕ್ಷ್ಯ:

ಈ ಪ್ರದೇಶದ ಅಪಾಯವನ್ನು ಮನಗಂಡ ನಗರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಸಂತೋಷ್ ನೇತೃತ್ವದಲ್ಲಿ ಈಗಾಗಲೇ ಜೂನ್ ತಿಂಗಳಲ್ಲಿಯೇ ಅಗಳ ಹೊಡೆದು, ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಲಾಗಿತ್ತು. ಆದರೂ, ಕೆಲ ಪ್ರವಾಸಿಗರು ಈ ಸೂಚನೆಗಳನ್ನು ಲೆಕ್ಕಿಸದೇ ಅಪಾಯಭರಿತ ಪ್ರದೇಶಕ್ಕೆ ಹೋಗುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.

ಕಾಲುಜಾರಿ ನೀರುಪಾಲಾದ ಯುವಕ:

ಇತ್ತೀಚೆಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ನಾಗರಭಾವಿಯ ಖಾಸಗಿ ಕಂಪನಿಯ ಮ್ಯಾನೇಜರ್ ರಮೇಶ್ ಎಂಬಾತ ಅಬ್ಬಿ ಜಲಪಾತದ ಬಳಿ ವಿಡಿಯೋಗೆ ಪೋಸ್ ನೀಡುತ್ತಿರುವಾಗ ಕಾಲುಜಾರಿ ನದಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಈ ಘಟನೆ ಪ್ರವಾಸಸ್ಥಳದ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಎಬ್ಬಿಸಿದೆ.

ಶಾಶ್ವತ ತಂತಿಬೇಲಿಗೆ ಮುಂದಾದ ಇಲಾಖೆ:

ಈ ದುರ್ಘಟನೆಯ ಬಳಿಕ, ಅನಧಿಕೃತ ಪ್ರವೇಶವನ್ನು ತಡೆಯಲು ಅರಣ್ಯ ಇಲಾಖೆ ಶಾಶ್ವತ ತಂತಿಬೇಲಿ ನಿರ್ಮಾಣಕ್ಕೆ ಮುಂದಾಗಿದೆ. ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದ್ದು, ಅನಧಿಕೃತವಾಗಿ ಒಳಹೊಗ್ಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಎಫ್‌ಓ ಸಂತೋಷ್ ತಿಳಿಸಿದ್ದಾರೆ.

ಫೋಟೊ ಹಾಗು ರೀಲ್ಸ್ ಆಸೆಗೆ ಜೀವ ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು .ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಒಳಿತು, ಸರಕಾರ ಹಾಗೂ ಇಲಾಖೆಗಳಿಂದ ನೀಡಲ್ಪಟ್ಟ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಹಜ ಸೌಂದರ್ಯದ ಸವಿಯನ್ನು ಸುರಕ್ಷಿತವಾಗಿ ಅನುಭವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

Leave a Comment