ರಿಪ್ಪನ್ಪೇಟೆ ; ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿನ ಮಳೆ ಮಾಪನ ಕೇಂದ್ರ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವಾದ್ದರಿಂದ ಈ ಕುರಿತು ಮೇಲ್ಮಟ್ಟದಲ್ಲಿ ವರದಿಯನ್ನು ನೀಡುವಂತೆ ಹಾಗೂ ಮಲೆನಾಡಿನ ವ್ಯಾಪ್ತಿಯಲ್ಲಿ ತೀರ್ಥಹಳ್ಳಿ, ಸಾಗರ, ಹೊಸನಗರ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆಯಾಗಿ ಬೆಳೆೆ ನಷ್ಟವಾದರೂ ಕೂಡಾ ರೈತರಿಗೆ ವಿಮಾ ಸೌಲಭ್ಯ ದೊರೆಯುವಲ್ಲಿ ತಾರತಮ್ಯವಾಗುವ ಮೂಲಕ ವಂಚಿತರನ್ನಾಗಿ ಮಾಡಿದೆ ಎಂದು ಹೊಸನಗರ ತಾಲ್ಲೂಕು ರೈತ ಮುಖಂಡ ಕಲ್ಮಕ್ಕಿ ಸುಗಂಧರಾಜ್ ರೈತರ ಪರವಾಗಿ ಆಗ್ರಹಿಸಿದರು.
2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲ್ಲೂಕಿನ ಅಡಿಕೆ, ಕಾಳುಮೆಣಸು ಬೆಳೆಗೆ ಟರ್ಮ್ ಶೀಟ್ನ ತಯಾರಿ ಬಗ್ಗೆ ಸಮಾಲೋಚನೆ ಸಂವಾದ ಮತ್ತು ಸಲಹೆ ಕಾರ್ಯಕ್ರಮವನ್ನು ಇಲ್ಲಿನ ಗ್ರಾಮ ಪಂಚಾಯಿತ್ ಸಭಾಭವನದ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಟರ್ಮ್ ಶೀಟ್ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಯಿತು.
ಹವಾಮಾನ ಆಧಾರಿತ ಬೆಳೆ ವಿಮೆ ಆಗಿರುವುದರಿಂದ ರೈತರಿಗೆ ಎಲೆಚುಕ್ಕೆ ರೋಗದ ಪರಿಹಾರವಾಗಿ ಅತಿ ಮಳೆ ಮತ್ತು ಬೇಸಿಗೆಯಲ್ಲಿ ಮಳೆಯ ವಿವರವನ್ನು ಚರ್ಚಿಸುವ ಮೂಲಕ ಅವೈಜ್ಞಾನಿಕವಾದ ವಿಮೆ ಪರಿಹಾರದಲ್ಲಿ ಬೇರೆ ಭಾಗದಲ್ಲಿ ಗುಂಟೆಗೆ 900 ರೂ. ನೀಡಲಾದರೆ ಹೊಸನಗರ ವ್ಯಾಪ್ತಿಯಲ್ಲೆ ಕೇವಲ ಗುಂಟೆಗೆ 100 ರೂ. ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಕೆ.ಎಸ್.ಎನ್.ಡಿ.ಎಂ.ಸಿ ಪ್ರತಿನಿಧಿಗಳು ಹಾಜರಿಲ್ಲದ್ದರಿಂದ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಮಳೆ ಮಾಪನ ಕೇಂದ್ರದ ಸುಸ್ಥಿತಿ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತ್ಗಳಿಗೆ ನಿಯಮಿತವಾಗಿ ಹತ್ತಾಂಶವನ್ನು ಹಂಚಿಕೊಳ್ಳಲು ರೈತರು ಸಲಹೆಯನ್ನು ನೀಡಿದರು.

ಕೆಎಸ್.ಎನ್.ಡಿ.ಎಂ.ಸಿ. ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿ ಮಳೆಯ ಮಾಪನ ಕೇಂದ್ರಗಳ ಸುಸ್ಥಿತಿಯ ಖಾತರಿ ಬಗ್ಗೆ ನಿಯಮಿತವಾಗಿ ವರದಿ ನೀಡುವುದು ಅವಶ್ಯವೆಂದು ಸಭೆಯಲ್ಲಿ ಒಕ್ಕೊರಲ ನಿರ್ಧಾರದ ಒತ್ತಾಯ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಜಿಲ್ಲಾ ಪ್ರತಿನಿಧಿ ವಾಟಗೋಡು ಸುರೇಶ್, ತಾಲ್ಲೂಕ್ ಕೃಷಿಕ ಸಮಾಜದ ನಿರ್ದೇಶಕ ಸತೀಶ ಹೊಸಮನೆ, ತೀರ್ಥಹಳ್ಳಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಘವೇಂದ್ರ, ಕೆರೆಹಳ್ಳಿ ದೀಶಾ ಸಮಿತಿಯ ಸದಸ್ಯ ವಿನಯಕುಮಾರ ದುಮ್ಮ, ವಿನಾಯಕ ಚಕ್ಕಾರ್, ಹೊಸನಗರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪುಟ್ಟಾನಾಯ್ಕ್, ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ಮಹಾಬಲೇಶ್ವರ ಹೆಗ್ಗಡೆ, ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





