ರಿಪ್ಪನ್ಪೇಟೆ : ದೂರದರ್ಶನದ ಪ್ರಸಿದ್ಧ ಧಾರಾವಾಹಿ ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡ ಅರಸಾಳು ರೈಲ್ವೆ ನಿಲ್ದಾಣಕ್ಕೆ ಮಾಲ್ಗುಡಿ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡುವ ಮೂಲಕ ಮಾಲ್ಗುಡಿ ಮೂಸಿಯಂ ಸಹ ನಿರ್ಮಿಸುವುದರೊಂದಿಗೆ ನಿಲ್ದಾಣದಲ್ಲಿ ಸದಾ ಜನಜಂಗುಳಿ ತುಂಬಿ ತುಳುಕುವಂತೆ ಮಾಡಿ ಅಭಿವೃದ್ಧಿಪಡಿಸಲಾದ ಇಲ್ಲಿನ ಆರಸಾಳು ರೈಲ್ವೆ ನಿಲ್ದಾಣದಲ್ಲಿ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ರೈಲ್ವೆ ಪ್ರಯಾಣಿಕರಾದ ಗಾಯಿತ್ರಿ ವಿನಾಯಕ, ಸುಶೀಲ ಮೂಡಾಗ್ರೆ, ಕೆ. ಗೀತಾ ಅಣ್ಣಪ್ಪ, ಸೀತಾ ರಾಜಪ್ಪ, ಗೀತಾ ಕರಿಬಸಪ್ಪ, ವೇದಾವತಿ ಇನ್ನೂ ಮುಂತಾದವರು ಆರೋಪಿಸಿದ್ದಾರೆ.
ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು-ಮೈಸೂರು ಇಂಟರ್ ಸಿಟಿ ಸೇರಿದಂತೆ ಹಲವು ಪ್ಯಾಸೆಂಜರ್ ರೈಲು ಗಾಡಿಗಳು ನಿತ್ಯ ಈ ಮಾರ್ಗದಲ್ಲಿ ಹೋಗಿ ಬರುತ್ತಿದ್ದು ಇಲ್ಲಿನ ಅರಸಾಳು ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು, ಮೈಸೂರು, ತಾಳಗುಪ್ಪ, ಜೋಗ, ಭಟ್ಕಳ, ಶಿರಸಿ, ಸಿದ್ದಾಪುರ, ಕುಂದಾಪುರ, ಉಡುಪಿ, ಕೊಡಚಾದ್ರಿ, ಕೊಲ್ಲೂರು, ಹೊಂಬುಜ, ಸಿಗಂದೂರು ಹೀಗೆ ಸುತ್ತಮುತ್ತಲಿನ ಪ್ರಕ್ಷಣೀಯ ಧಾರ್ಮಿಕ ಸ್ಥಳಗಳಿಗೆ ಹಾಗೂ ನಿರುದ್ಯೋಗಿಗಳು ಉದ್ಯೋಗಿಗಳು ಮತ್ತು ಸಂಬಂಧಿಕರ ಊರುಗಳಿಗೆ ಹೋಗಿ ಬರುವವರಿಗೆ ತುಂಬಾ ಅನುಕೂಲಕರವಾಗಿರುವ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ಶೌಚಾಲಯವಿಲ್ಲ. ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲವಾಗಿದೆ. ರಾತ್ರಿ ವೇಳೆಯಲ್ಲಿ ನಿಲ್ದಾಣದ ಬಳಿ ಸರಿಯಾದ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿಕೊಂಡಿದ್ದು ಮಹಿಳೆಯರಿಗೆ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ನಿಲ್ದಾಣದ ಆವರಣದಲ್ಲಿ ಸ್ವಚ್ಚತೆಯಿಲ್ಲದೆ ಕಸ ತುಂಬಿಕೊಂಡಿದ್ದು ಶೌಚಾಲಯಗಳಿಗೆ ಹೋದರೆ ನೀರು ಸಹ ಇಲ್ಲ ಇನ್ನೂ ಕುಡಿಯುವ ನೀರಯಂತೂ ಇಲ್ಲವೆ ಇಲ್ಲವಾಗಿ ಮಹಿಳೆಯರು ಮಕ್ಕಳು ವೃದ್ಧರು ಅನಾರೋಗ್ಯ ಪೀಡಿತರು ದೂರದ ಬೆಂಗಳೂರು, ಮೈಸೂರು ತೆರಳುವ ಪ್ರಯಾಣಿಕರು ಶೌಚಾಲಯವಿಲ್ಲದೆ ಬಯಲು ಪ್ರದೇಶವನ್ನು ಅವಲಂಬಿಸುವುದು ಅನಿರ್ವಾಯವಾಗಿದೆ.
ಮಹಿಳೆಯವರು, ಹೆಣ್ಣು ಮಕ್ಕಳು ರೈಲ್ವೆ ನಿಲ್ದಾಣದಲ್ಲಿ ಗಿಡದ ಪೊದೆಯ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ಇದರೊಂದಿಗೆ ಅನಾರೋಗ್ಯ ಪೀಡಿತರ ಸ್ಥಿತಿಯಂತೂ ಕೇಳೋರಿಲ್ಲದಂತಾಗಿದೆ. ಕಡಿಮೆ ಖರ್ಚಿನಲ್ಲಿ ರಾಜಧಾನಿಗೆ ತೆರಳುವ ಪ್ರಯಾಣಿಕರಿಗೆ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಸುಲಭ ಶೌಚಾಲಯಗಳಿಲ್ಲದೆ ಪರದಾಡುವ ಪರಿಸ್ಥಿತಿಯಿದ್ದು ರೈಲ್ವೆ ಇಲಾಖೆಯ ಅಧಿಕಾರಿ ವರ್ಗ ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ರೈಲ್ವೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಮುಂಜಾನೆ ರಾಜಧಾನಿಯಿಂದ 5:50ಕ್ಕೆ ಬರುವ ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್ ಸಿಟಿ ರೈಲು ತಾಳುಗುಪ್ಪದಿಂದ ಹೊರಟು ಸಾಗರ, ಆನಂದಪುರ, ಅರಸಾಳು, ಕುಂಸಿ, ಶಿವಮೊಗ್ಗ ಮಾರ್ಗವಾಗಿ ರಾಜಧಾನಿ ಬೆಂಗಳೂರಿಗೆ 6:20ಕ್ಕೆ ಹೋಗುವ ಇಂಟರ್ ಸಿಟಿ ರೈಲು ನಂತರ 7:45 ರಿಂದ 8 ಗಂಟೆಗೆ ಶಿವಮೊಗ್ಗ ಪ್ಯಾಸೆಂಜರ್ ರೈಲು ಹೀಗೆ ಹೋಗಿ ಬರುವ ಹಲವಾರು ರೈಲು ಗಾಡಿಗಳು ಅರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ನಿಲ್ಲಿಸಿ ಹೋಗುವುದರಿಂದಾಗಿ ಸಾಕಷ್ಟು ಪ್ರಯಾಣಿಕರು ಓಡಾಡುವಂತಾಗಿದೆ.
ಇನ್ನೂ ಮಾಲ್ಗೂಡಿ ಮೂಸಿಯಂ ವೀಕ್ಷಣೆಗೆ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದು ಸರಿಯಾದ ವ್ಯವಸ್ಥೆಗಳಿಲ್ಲದೆ ಹೋಟೆಲ್ಗಳಿಲ್ಲ ಮತ್ತು ಶೌಚಾಲಯಗಳಂತೂ ಇಲ್ಲದಿರುವುದು ಹಾಗೂ ಕುಡಿಯುವ ಶುದ್ದ ನೀರಿನ ಘಟಕ ಸಹ ಇಲ್ಲದಿರುವುದು ಸ್ಟೇಷನ್ ಪಕ್ಕದಲ್ಲಿನ ಶೌಚಾಲಯಗಳು ನೀರಿನ ಸೌಲಭ್ಯಗಳಿಲ್ಲದೆ ಬಾಗಿಲುಗಳೆಲ್ಲಾ ಮುರಿದು ಹೋಗಿ ತೆರೆದಕೊಂಡಿದ್ದು ನಿರ್ವಹಣೆಯಲ್ಲದೆ ಇರುವುದಕ್ಕೆ ಸಾಕ್ಷಿ ಕರಿಸುತ್ತಿವೆ.
ಇನ್ನಾದರೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಇತ್ತ ಗಮನಹರಿಸುವ ಮೂಲಕ ಅರಸಾಳು ಮಾಲ್ಗುಡಿ ಮೂಸಿಯಂ ಮತ್ತು ರೈಲ್ವೆ ನಿಲ್ದಾಣದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವತ್ತ ಗಮನಹರಿಸುವರೇ ಕಾದು ನೋಡಬೇಕಾಗಿದೆ.

