ಸಮಯ ಸ್ನೇಹ ಆರೋಗ್ಯ ಅಮೂಲ್ಯ ಸಂಪತ್ತು ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

ಬಾಳೆಹೊನ್ನೂರು ; ರೂಪ ಮತ್ತು ರೂಪಾಯಿ ತುಂಬಾ ದಿನ ಉಳಿಯುವುದಿಲ್ಲ. ಮನುಷ್ಯನ ಒಳ್ಳೆಯತನ ಮಾತ್ರ ಚಿರಕಾಲ ನೆನಪಿನಲ್ಲಿ ಉಳಿಯುತ್ತದೆ. ಭೌತಿಕ ಸಂಪತ್ತು ನಿಜವಾದ ಸಂಪತ್ತೆಂದು ತಿಳಿದವರು ಬಹಳ ಜನ. ಆದರೆ ಸಮಯ ಸ್ನೇಹ ಮತ್ತು ಆರೋಗ್ಯ ಜೀವನದ ಅಮೂಲ್ಯ ಸಂಪತ್ತು ಎಂಬುದನ್ನು ಮರೆಯಬಾರದೆಂದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಜಾನಪದ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನೆಯ ಅಂಗಳದ ಕಸ ನಾವಾಗಲಿ ಬೇರೆಯವರಾಗಲಿ ಹಸನಗೊಳಿಸಬಹುದು. ಆದರೆ ಮನದಂಗಳದ ಕಸವನ್ನು ನಾವೇ ಹಸನ ಮಾಡಿಕೊಳ್ಳಬೇಕಾಗುತ್ತದೆ. ಜೀವನದಲ್ಲಿ ಗುರಿ ಮತ್ತು ಗುರು ಬಹಳ ಮುಖ್ಯ. ಹಣ ಕೆಟ್ಟ ಚಟ ಕಲಿಸುತ್ತದೆ. ಹಸಿವು ಬದುಕಿನ ಪಾಠ ಕಲಿಸುತ್ತದೆ. ಹಣ ಮಾನವೀಯತೆ ಮರೆಸುತ್ತದೆ. ಆದರೆ ಹಸಿವು ಅರಿವು ಮೂಡಿಸುವ ಕಾರ್ಯ ಮಾಡುತ್ತದೆ. ಚಿನ್ನವನ್ನು ಉಜ್ಜಿದಷ್ಟು ಹೊಳಪು ಹೆಚ್ಚುತ್ತದೆ. ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟದ ಸಂದರ್ಭವೂ ನಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಪ್ರಪಂಚದಲ್ಲಿ ಬೆಲೆ ಕಟ್ಟಲು ಆಗದ ವಸ್ತು ಅಂದರೆ ನಂಬಿಕೆ. ಅದನ್ನು ಸಂಪಾದಿಸಲು ವರುಷಗಳೇ ಬೇಕಾಗುತ್ತವೆ. ಆದರೆ ಕಳೆದುಕೊಳ್ಳಲು ಕ್ಷಣ ಮಾತ್ರ ಸಾಕು. ಕೆಟ್ಟ ಅಭ್ಯಾಸಗಳು ಇರುವವನನ್ನು ಬದಲಿಸಬಹುದು. ಆದರೆ ಕೆಟ್ಟ ಯೋಚನೆಗಳು ಇರುವವನನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ನಾಡಿನ ಜಾನಪದ ಜ್ಞಾನ ಅಮೂಲ್ಯ ಸಂಪತ್ತಾಗಿದೆ. ಓದು ಬರಹ ಬರಲಾರದ ಎಷ್ಟೋ ಜನರು ಜಾನಪದ ಸಂಪತ್ತನ್ನು ಸಂಪಾದಿಸಿರುವದನ್ನು ಕಾಣುತ್ತೇವೆ. ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣಬಹುದು. ಜಾನದ ಉತ್ತಮ ಸಾಹಿತ್ಯವನ್ನು ಉಳಿಸಿ ಇನ್ನಷ್ಟು ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಬೇಕೆಂದರು.
ಜಾನಪದ ಮೇಳ ಉದ್ಘಾಟಿಸಿದ ಚಿತ್ರದುರ್ಗದ ಉದ್ಯಮಿ ಪಟೇಲ್ ಶಿವಕುಮಾರ ಮಾತನಾಡಿ ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತದೋ ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತದೆ. ಸಂತೋಷದಲ್ಲಿ ತಬ್ಬಿಕೊಳ್ಳುವ ಸಂಬಂಧಗಳು ತಾತ್ಕಾಲಿಕ. ಕಷ್ಟದಲ್ಲಿದ್ದಾಗ ತಬ್ಬಿಕೊಳ್ಳುವ ಸಂಬಂಧಗಳು ಶಾಶ್ವತ. ವಸ್ತುವಿನ ಬೆಲೆ ಕೊಳ್ಳುವುದಕ್ಕೆ ಮೊದಲೇ ತಿಳಿದುಕೊಳ್ಳುತ್ತೇವೆ. ಮನುಷ್ಯನ ಬೆಲೆ ಕಳೆದುಕೊಂಡ ನಂತರ ತಿಳಿದುಕೊಳ್ಳುತ್ತದೆ. ಜಾನಪದ ಸಾಹಿತ್ಯದಲ್ಲಿ ಸಂಬಂಧಗಳ ಬೆಸುಗೆ ಮತ್ತು ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಕಾಣಬಹುದು. ದೇವದುರ್ಗ ಶಿಖರಮಠದ ಕಪಿಲಸಿದ್ಧ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುರು ಪರಂಪರೆಯ ಮಹತ್ವವನ್ನು ವೀರಶೈವ ಧರ್ಮ ಸಂಸ್ಕೃತಿ ಬಿತ್ತರಿಸುತ್ತಿರುವ ಮಹತ್ಕಾರ್ಯವನ್ನು ಮಾಡುತ್ತಿರುವುದರಿಂದ ಅವರಿಗೆ “ವೀರಶೈವ ಸಂಸ್ಕೃತಿ ಸಂವರ್ಧನ ರತ್ನ” ಎಂಬ ವಿಶೇಷ ಪದವಿಯನ್ನು ಈ ದಿನ ಅನುಗ್ರಹಿಸಲಾಗಿದೆ ಎಂದರು.

ನೇತೃತ್ವ ವಹಿಸಿದ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದ್ದಾಗಬೇಕೆಂದಿಲ್ಲ. ರಾತ್ರಿ ಕಳೆದು ಹಗಲು ಬರುವಂತೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಸಮಯ ಎಲ್ಲವನ್ನು ಬದಲಾಯಿಸುತ್ತದೆ. ಆದರೆ ನೆನಪುಗಳು ಯಾವತ್ತೂ ಬದಲಾಗುವುದಿಲ್ಲ. ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೆ ಹೋಗುತ್ತವೆ. ಆದರೆ ಕೊಳಕಾಗುವುದಿಲ್ಲ. ಬದುಕಿನಲ್ಲಿ ಸೂರ್ಯನ ಕಿರಣಗಳಂತೆ ಮನುಷ್ಯ ಆಗಬೇಕು. ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಕೊಳಕಾಗಬಾರದು. ಜೀವನದ ನೀತಿ ಬೋಧೆಯನ್ನು ಜಾನಪದ ಸಾಹಿತ್ಯದಿಂದ ತಿಳಿಯಲು ಸಾಮಾನ್ಯರಿಗೂ ಸಾಧ್ಯವಾಗುತ್ತದೆ.

ಮುಖ್ಯ ಅತಿಥಿಗಳಾಗಿ ಕೊಗಳಿಯ ಹೆಚ್.ಎಸ್.ಶಂಕರಯ್ಯ, ನಂದಿಬೇವೂರಿನ ವೀರೇಶ, ಸೋಮಲಾಪುರದ ವೀರಣ್ಣ ಅಂಗಡಿ ಪಾಲ್ಗೊಂಡಿದ್ದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಹಾಗೂ ಅಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ದಾನಿಗಳಿಗೆ ಸೇವಾಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಮುಕ್ತಿಮಂದಿರ, ಎಡೆಯೂರು, ಮಳಲಿ, ಹೂಲಿ, ಅಮ್ಮಿನಬಾವಿ, ಸಿಂಧನೂರು, ಸಂಗೊಳ್ಳಿ, ಬೇರುಗಂಡಿ, ದೋರನಹಳ್ಳಿ, ಅಚಲೇರಿ, ದೊಡ್ಡಸಗರ, ಎಮ್ಮಿಗನೂರು ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಗಳ ಸುಮಾರು 25ಕ್ಕೂ ಹೆಚ್ಚು ಶಿವಾಚಾರ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಬಾಳೆಹೊನ್ನೂರು ಇಳಾಲ್ ಗದ್ದೆಯ ಶ್ರೀಮತಿ ಅನುಶ್ರೀ ಆದಿಗೌಡ ಇವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.

ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹುಬ್ಬಳ್ಳಿ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಸರ್ವರನ್ನು ಸ್ವಾಗತಿಸಿದರು. ಗುರುಲಿಂಗಯ್ಯ ಹಿರೇಮಠ ಹಿತ್ತಲ ಶಿರೂರು ಇವರಿಂದ ಪ್ರಾರ್ಥನೆ ನಡೆಯಿತು. ಶಂಕ್ರಯ್ಯ ಗವಾಯಿಗಳಿಂದ ಸಂಗೀತ ಸೇವೆ ಜರುಗಿತು. ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಚಿಗುರವಳ್ಳಿ ಶ್ರೀ ನಂದೀಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಕೆಂಡಾರ್ಚನೆ ಜರುಗಿತು.
ಬೆಳಿಗ್ಗೆ ಶಯನೋತ್ಸವ ಶ್ರೀ ಜಗದ್ಗುರು ಶಿವಾನಂದ ಕಾಫಿ ಎಸ್ಟೇಟಿನಲ್ಲಿ ವನದುರ್ಗ ಚೌಡೇಶ್ವರಿ ಮಂದಿರದಲ್ಲಿ ಪೂಜೆ ಬಂದ ಎಲ್ಲ ಭಕ್ತರಿಗೆ ಪ್ರಸಾದ ವಿನಿಯೋಗವಾಯಿತು.

Leave a Comment