N.R.PURA ; ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಡಿ. 18ರಂದು ರಾತ್ರಿ 4 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದು ಬಂಧಿತರಿಂದ 4,10,985 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಶಿವಮೊಗ್ಗ ವಾಸಿ ಆರ್.ಕರುಣ, ಕೋಟೆ ಹೊಸದುರ್ಗ ನಿವಾಸಿ ಹಸೈನ್ ಎಂಬುವರನ್ನು ಬಂಧಿಸಿರುವ ಪೊಲೀಸರು ಅವರಿಂದ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರು, ಕಳುವು ಮಾಡಿದ್ದ ಟಿವಿ, ವಾಚ್, ನಗದು, ಹೋಂ ಥೀಯೇಟರ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಅಂತರ್ ಜಿಲ್ಲಾ ಕಳ್ಳರಾಗಿದ್ದು, ಈ ಹಿಂದೆ ಆಂಧ್ರಪ್ರದೇಶದ, ಕರ್ನಾಟಕದ ಉಡುಪಿ, ಸಾಗರ, ಕಡೂರು, ಅಜ್ಜಂಪುರ ಸೇರಿದಂತೆ 50ಕ್ಕೂ ಹೆಚ್ಚು ಕಡೆ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಆರೋಪಿಗಳಿಂದ ರೂ. 15 ಸಾವಿರ ನಗದು, ರೂ. 9 ಸಾವಿರ ಬೆಲೆಯ ವಾಚ್, 3.5 ಲಕ್ಷ ರೂ. ಮೌಲ್ಯದ ಕಾರು ಮತ್ತು ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ಆನಂದಪುರದಲ್ಲಿ ದಿನಸಿ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಗಳಿಂದ ಕಳವು ಮಾಡಿದ್ದ ಒಟ್ಟು 37 ಸಾವಿರ ರೂ. ಮೌಲ್ಯದ ಟಿವಿ, ಹೋಂ ಥಿಯೇಟರ್, ಹೀಟರ್ ಮತ್ತು ಇತರೇ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದುಬಾರಿ ಮದ್ಯ ಕಳ್ಳತನ ಮಾಡಿದ್ದ ಕಳ್ಳರು :
ಡಿ. 18ರಂದು ಬಾಳೆಹೊನ್ನೂರು ಪಟ್ಟಣದಲ್ಲಿ ಸರಣಿ ಕಳ್ಳತನವಾಗಿತ್ತು. ಬಾಳೆಹೊನ್ನೂರಿನಲ್ಲಿ ಸರಣಿ ಕಳ್ಳತನ ಮಾಡಿದ್ದ ಈ ಇಬ್ಬರು ಖದೀಮರು ತಮ್ಮ ಕೈಚಳಕವನ್ನು ತೋರಿಸಿ ಪರಾರಿಯಾಗಿದ್ದರು. ಪಟ್ಟಣದ ಮುಬಾರಕ್ ಹುಸೇನ್ ಎಂಬುವವರ ಅಂಗಡಿಯ ಬೀಗ ಮುರಿದು 20 ಸಾವಿರ ನಗದು ಎರಡು ದುಬಾರಿ ಮೌಲ್ಯದ ವಾಚ್ ಹಾಗೂ ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಎಗರಿಸಿದ್ದರು. ಅಷ್ಟೆ ಅಲ್ಲದೇ ಅಲ್ಲೇ ಇದ್ದ ಕಲ್ಮಕ್ಕಿ ವೈನ್ ಶಾಪ್ ಬೀಗ ಒಡೆದು ದುಬಾರಿ ಮದ್ಯವನ್ನು ಕಳ್ಳತನ ಮಾಡಿದರು. ದುಬಾರಿ ಮದ್ಯವಾದ 2 ಬ್ಲಾಕ್ ಅಂಡ್ ವೈಟ್, 1 ಬ್ಲೈಂಡರ್ ಸ್ಪೈಡ್ ಎಣ್ಣೆ ಜೊತೆ 20 ಸಾವಿರ ನಗದು ಕಳ್ಳತನ ಮಾಡಿದ್ದರು.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ರವೀಶ್, ಸಿಬ್ಬಂದಿಗಳಾದ ಕೆ.ಜೆ.ಶಂಕರ್, ಜಯರಾಂ, ಮಂಜುನಾಥ್, ವಿನಾಯಕ, ಮನು, ಮಂಜುನಾಥ್ ಗುಗ್ಗರಿ, ಕಿರಣ್, ಭೀಮ್ಸೇನ, ಚೆನ್ನಯ್ಯ, ಚಾಲಕ ಕಾರ್ತಿಕ್ ಭಾಗವಹಿಸಿದ್ದರು.
ಬಾಳೆಹೊನ್ನೂರು ಪೊಲೀಸರ ಕಾರ್ಯಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.