ರಿಪ್ಪನ್ಪೇಟೆ ; ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆಮನೆಗೆ ಶುದ್ದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಸಮರ್ಪಕವಾಗಿದ್ದು ಈ ಕಾಮಗಾರಿಯನ್ನು ಖುದ್ದಾಗಿ ಕಂಡು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಎನ್. ಬೆರಗಾದ ಘಟನೆ ರಿಪ್ಪನ್ಪೇಟೆಯಲ್ಲಿ ನಡೆದಿದೆ.
ಹೌದು, ರಿಪ್ಪನ್ಪೇಟೆಗೆ ಇಂದು ದಿಢೀರ್ ಭೇಟಿ ನೀಡಿ ಇಲ್ಲಿನ ಬರುವೆ ಹಳೆ ಸಂತೆ ಮಾರುಕಟ್ಟೆಯ ರಸ್ತೆಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಅಂಗನವಾಡಿ, ರಾಷ್ಟ್ರೋತ್ಥಾನ ಹಾಲು ಉತ್ಪಾದಕರ ಸಂಘದ ಹತ್ತಿರ, ಖಾಸಗಿ ವಾಸದ ಮನೆಗಳ ಮುಂಭಾಗದಲ್ಲಿ ಅಳವಡಿಸಲಾಗಿರುವ ಜಲಜೀವನ್ ಯೋಜನೆಯ ನಲ್ಲಿ ನೀರಿನ ಸಂಪರ್ಕವನ್ನು ಪರಿಶೀಲನೆ ನಡೆಸಿ ನೀರು ಯಾವ ಪ್ರಮಾಣದಲ್ಲಿ ಹರಿಯುತ್ತಿದೆ ಎಂಬುದನ್ನು ಗಮಸಿದ ಅವರು ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಅಳವಡಿಸಲಾಗಿರುವ ನಲ್ಲಿ ನೀರಿಗೆ ಸಂಪರ್ಕ ಕಲ್ಪಿಸದಿರುವ ಬಗ್ಗೆ ಜೊತೆಯಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣವೇ ಸಂಪರ್ಕ ನೀಡುವಂತೆ ತಾಕೀತು ಮಾಡಿ ಭಾವಚಿತ್ರದೊಂದಿಗೆ ವರದಿ ನೀಡುವಂತೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮತ್ತು ಕಿರಿಯ ಅಭಿಯಂತರರಿಗೆ ಸೂಚಿಸಿದರು.

ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹುತ್ತವನ್ನು ಮತ್ತು ಮರಗಳಿರುವುದನ್ನು ಕಂಡು ಶಾಲಾ ಮುಖ್ಯ ಶಿಕ್ಷಕರಿಗೆ ಹುತ್ತವನ್ನು ತೆರವುಗೊಳಿಸುವಂತೆ ಸೂಚಿಸಿ ಸ್ವಚ್ಚತೆಯನ್ನು ಮಾಡುವಂತೆ ಹೇಳಿದರು. ನಂತರ ಪಕ್ಕದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ಪರಿಶೀಲನೆ ನಡೆಸಿ ಇಂಗುಗುಂಡಿಯ ಅಗತ್ಯ ಇದೆ ಎಂದು ಸಿಇಒ ಗಮನಕ್ಕೆ ತರುತ್ತಿದ್ದಂತೆ ತಕ್ಷಣ ಕ್ರಿಯಾಯೋಜನೆ ತಯಾರಿಸಿ ಕಳುಹಿಸುವಂತೆ ಸೂಚಿಸಿದರು ಜಲಜೀವನ್ ಪೈಪ್ ಲೈನ್ ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ಅಳವಡಿಸಲಾಗಿರುವ ಪೈಪ್ ಕಿತ್ತುಕೊಂಡು ಹೋಗಿರುವ ದೃಶ್ಯವನ್ನು ಕಂಡು ಈ ಬಗ್ಗೆ ಜೊತೆಯಲ್ಲಿದ್ದ ತಾಪಂ ಇಒಗೆ ಪೊಲೀಸರಿಗೆ ದೂರು ನೀಡಿ ಇನ್ನೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿ, ಪಂಚಾಯಿತ್ ಅಭಿವೃದ್ದಿ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆ, ಅಂಗನವಾಡಿ, ಸರ್ಕಾರಿ ಕಛೇರಿಗಳು ಸೇರಿದಂತೆ ಮನೆಗಳಿಗೆ ನೀರು ಸರಬರಾಜಿಗೆ ಅಳವಡಿಸಲಾದ ಜಲಜೀವನ್ ನಲ್ಲಿ ಪೈಪ್ಗಳ ಕುರಿತು ಜರೂರು ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತ್ ಇಓ ನರೇಂದ್ರ, ಪಿಡಿಒ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಬಿ.ಎಂ., ಸಿಡಿಪಿಒ ಗಾಯಿತ್ರಿ ಕೆ.ವೈ.ರಾಮಚಂದ್ರ, ಎನ್.ಆರ್.ಇ.ಜಿ ಸಹಾಯಕ ಕಾರ್ಯಪಾಲಕ ಅಭಿಯಂತರ ಇಂಜಿನಿಯರ್ ರಾಜೇಂದ್ರ, ಕಿರಿಯ ಅಭಿಯಂತರ ಓಂಕಾರ್, ಕಾರ್ಯದರ್ಶಿ ಮಧುಶ್ರೀ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಮೇಲ್ವಿಚಾರಕ ರಾಘವೇಂದ್ರ, ಇನ್ನಿತರ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.