ಕೊಪ್ಪ: ಮಲೆನಾಡಿಗರು ಎದುರಿಸುತ್ತಿರುವ ಅಸಮರ್ಪಕ ಮೂಲಭೂತ ಸೌಕರ್ಯಗಳ ಕುರಿತಾದ ಸಮಸ್ಯೆಯನ್ನು ಅತೀ ಶೀಘ್ರವಾಗಿ ಪರಿಹರಿಸಬೇಕೆಂದು ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಮತ್ತು ಶಾಸಕ ಟಿ.ಡಿ ರಾಜೇಗೌಡರವರಿಗೆ ಮನವಿ ಸಲ್ಲಿಸಿದ್ದರು.
ಜಿಲ್ಲೆಯ ಮಲೆನಾಡು ಭಾಗಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಹಾಗೂ ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ಕೃಷಿಕರು, ದಲಿತರು,ಬಡವರು ಹಿಂದುಳಿದ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಜನರಿಗೆ ಅಗತ್ಯವಾಗಿ ಕಲ್ಪಿಸಲೇಬೇಕಾದ ರಸ್ತೆ ಸೌಲಭ್ಯ, ಆಶ್ರಯದ ಸಲುವಾಗಿ ಮನೆ ಹಾಗೂ ಕೃಷಿಕಾರ್ಯಗಳನ್ನು ಈವರೆಗೆ ನಡೆಸಿಕೊಂಡು ಬಂದಿದ್ದರೂ ಕೂಡ ಅವರುಗಳ ಹೆಸರಿಗೆ ಯಾವುದೇ ಪೂರಕವಾದ ದಾಖಲೆಗಳನ್ನು ಮಾಡಿಕೊಟ್ಟಿಲ್ಲ ಆದಕಾರಣ ಅತೀ ಶೀಘ್ರವಾಗಿ ಮಲೆನಾಡಿನ ಎಲ್ಲಾ ವರ್ಗದ ಜನರ ಉತ್ತಮ ಜೀವನಕ್ಕಾಗಿ ಯೋಜನೆಗಳನ್ನು ರೂಪಿಸಿ ಮಲೆನಾಡಿಗರ ಜೀವನಕ್ಕೆ ಪೂರಕವಾಗುವ ಆಯಾಮಗಳಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊಪ್ಪ ತಾಲ್ಲೂಕಿನ ಮೇಗುಂದಾ ಹೋಬಳಿಯ ಹೆಗ್ಗಾರು ಗ್ರಾಮದ ಹ್ಯಾರನಕಲ್ಲು ಹಾಗೂ ಬೈಸಿಗದ್ದೆ ಎಂಬ ಊರಿನ ದಲಿತ ಕುಟುಂಬಗಳಿಗೆ ಅತ್ಯವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಅತೀ ಶೀಘ್ರವಾಗಿ ಒದಗಿಸಬೇಕೆಂದು ಶಾಸಕ ಟಿ.ಡಿ ರಾಜೇಗೌಡರವರಿಗೂ ಮನವಿ ಸಲ್ಲಿಸಿದ್ದಾರೆ.