ಶಿವಮೊಗ್ಗಕ್ಕೆ 10 ಕಿಲೋ ವ್ಯಾಟ್ FM ಟ್ರಾನ್ಸ್ ಮೀಟರ್ ; ಸಂಸದ ಬಿವೈಆರ್

0 37

ಶಿವಮೊಗ್ಗ : ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ
ಪ್ರಸ್ತುತ 1 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ ಮೀಟರ್ ಬದಲಿಗೆ ಶಿವಮೊಗ್ಗಕ್ಕೆ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ ಮೀಟರ್ ಪ್ರಸಾರ ಭಾರತಿ ಮಂಜೂರು ಮಾಡಿ 10
ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಅವರು ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಜೂರಾದ 10 ಕಿಲೋ ವ್ಯಾಟ್ ಎಫ್ಎಂ ಟ್ರಾನ್ಸ್ಮೀಟರ್‌ನಿಂದ ಶಿವಮೊಗ್ಗ
ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆ, ರೈತಪರ ಯೋಜನೆ, ಹಾಗೂ ಇತರೆ ಕ್ಷೇತ್ರಗಳ ಅಭಿವೃದ್ಧಿಗಳು ಜಗತ್ತಿಗೆ ಪರಿಚಯವಾಗಲಿದೆ ಎಂದರು.


ಮಂಜೂರಾದ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಭದ್ರಾವತಿಯಿಂದ 20 ಕಿ,ಮೀ ದೂರದಲ್ಲಿರುವ ಶಿವಮೊಗ್ಗದಲ್ಲಿ ಈಗ ನಿಷ್ಕ್ರೀಯವಾಗಿರುವ ದೂರದರ್ಶನ ಹೈಪವರ್ ಟ್ರಾನ್ಸ್ಮೀಟರ್‌ನಲ್ಲಿರುವ 100 ಮೀಟರ್ ಬದಲಾಗಿ 150 ಮೀಟರ್ ಎತ್ತರದ ಗೋಪುರದ ಮೇಲೆ ಸ್ಥಾಪನೆಗೊಳ್ಳಲಿದೆ ಎಂದರು.


ಭದ್ರಾವತಿ ಆಕಾಶವಾಣಿ ಕೇಂದ್ರಕ್ಕಿಂತ‌ ಎತ್ತರವಾದ ಮತ್ತು ಎಲ್ಲಾ ಸೌಲಭ್ಯ ಹೊಂದಿರುವ ಶಿವಮೊಗ್ಗದ ದೂರದರ್ಶನ ಕೇಂದ್ರದಲ್ಲಿ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಸ್ಥಾಪಿಸುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಭದ್ರಾವತಿಯಲ್ಲಿರುವ ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಸ್ಟುಡಿಯೋಗಳನ್ನು ರೆಕಾರ್ಡಿಂಗ್ ಮತ್ತು ಪ್ರಸಾರ ಸೇರಿದಂತೆ ಎಂದಿನಂತೆ ಬಳಸಬಹುದು. ಮತ್ತು ಆಕಾಶವಾಣಿ ಭದ್ರಾವತಿ ಎಂದೇ ಪ್ರಸಾರ ಕಾರ್ಯಗಳನ್ನು
ಭದ್ರಾವತಿ ಆಕಾಶವಾಣಿ ಕೇಂದ್ರದಿಂದಲೇ ಪ್ರಸಾರ ನಡೆಸಲಾಗುವುದು. ಆದಾಗ್ಯೂ ವಿವಿಐಪಿ ರೆಕಾರ್ಡಿಂಗ್ ಮತ್ತು ತುರ್ತು ರೆಕಾರ್ಡಿಂಗ್‌ಗಳಿಗೆ ಅನುಕೂಲವಾಗುವಂತೆ
ಶಿವಮೊಗ್ಗದಲ್ಲಿ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಸ್ಥಾಪನೆಯ ಜೊತೆಗೆ ತಾತ್ಕಾಲಿಕ ಸ್ಟುಡಿಯೋ ಸ್ಥಾಪಿಸುವ ಅಗತ್ಯವಿದೆ ಎಂದರು.


10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ
ಅನುರಾಗ್ ಠಾಕೂರ್, ಪ್ರಸಾರ ಭಾರತಿಯ ಸಿಇಒ ಅವರಿಗೆ ಅಭಿನಂದಿಸಿದರು.


ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್‌ಯೋಜನೆಯಡಿ ವಿಮಾನ ಯಾನ ಸೇವೆ ನೀಡಲು ಸ್ಪೈಸ್ ಜೆಟ್, ಸ್ಟಾರ್ ಏರ್‌ಲೈನ್ಸ್ ಮತ್ತು ಅಲಯನ್ಸ್ ಏರ್‌ಲೈನ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದರು.


ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ಏರ್‌ಲೈನ್ಸ್ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ದತೆ ನಡೆಸಿದ್ದು, ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಅವು ಕಾರ್ಯಾಚರಣೆ ನಡೆಸಲಿವೆ. ಆ.11ರಂದು ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಆ.31ಕ್ಕೆ ಮುಂದೂಡಲ್ಪಟ್ಟಿದೆ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಸ್. ದತ್ತಾತ್ರಿ, ಬಿ.ಕೆ. ಶ್ರೀನಾಥ್, ಶಿವರಾಜ್, ಬಳ್ಳೇಕೆರೆ ಸಂತೋಷ್, ಚಂದ್ರಶೇಖರ್, ನವೀನ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

“ಭದ್ರಾವತಿಯ 100 ಮೀಟರ್ ಟವರ್‌ನಲ್ಲಿ ಪ್ರಸ್ತುತ ಇರುವ 1 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಬದಲಿಗೆ ಶಿವಮೊಗ್ಗದ ದೂರದರ್ಶನ ಕೇಂದ್ರದ 150‌ ಮೀಟರ್ ಟವರ್‌ನಲ್ಲಿ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ಮೀಟರ್ ಅಳವಡಿಸುವುದರಿಂದ ವಿಶಾಲವಾದ ವ್ಯಾಪ್ತಿಯ ಪ್ರದೇಶಕ್ಕೆ ಪ್ರಸಾರ ಮಾಡಲು ಅನುಕೂಲವಾಗುತ್ತದೆ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಲು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಟ್ರಾನ್ಸ್ಮೀಟರ್ ಅಳವಡಿಕೆಗೆ ಡಿಸೆಂಬರ್ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ.”
– ಬಿ.ವೈ.ರಾಘವೇಂದ್ರ, ಸಂಸದ

Leave A Reply

Your email address will not be published.

error: Content is protected !!