ತೀರ್ಥಹಳ್ಳಿ

ಆಗುಂಬೆ ಘಾಟಿ ಕಾರ್ಯಾಚರಣೆ ಪೂರ್ಣ: ವಾಹನ ಸಂಚಾರ ಪುನಾರಂಭ

ತೀರ್ಥಹಳ್ಳಿ ಆಗುಂಬೆ ಘಾಟಿಯಲ್ಲಿ ಶುಕ್ರವಾರ ಸಂಜೆ ಧರೆ ಕುಸಿತ ಮತ್ತು ಮರ ಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಹಾಗೂ ಮಣ್ಣನ್ನು ತೆರವು ಮಾಡುವ ಕಾರ್ಯಾಚರಣೆ ಇಂದು (ಶನಿವಾರ) ಬೆಳಗ್ಗೆಯಿಂದ ಪ್ರಾರಂಭವಾಗಿ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಶುಕ್ರವಾರ ಸಂಜೆ ಆರನೇ ತಿರುವಿನಲ್ಲಿ ಧರೆ ಕುಸಿತದಿಂದಾಗಿ ರಸ್ತೆ ಸಂಪೂರ್ಣ ಮುಚ್ಚಿಕೊಂಡಿತ್ತು. ಕತ್ತಲಾದ ಕಾರಣ ತೆರವು ಕಾರ್ಯಾಚರಣೆ ತಕ್ಷಣ ಸಾಧ್ಯವಾಗದೆ, ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಬೆಳಗ್ಗಿನಿಂದಲೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾರಂಭ ಮಾಡಿ ಮರ ಮತ್ತು ಮಣ್ಣನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಆದರೆ, ಇದರ ಬೆನ್ನಿಗೇ ಮತ್ತೊಂದು ಮರ ಜಾರಿ ರಸ್ತೆ ಮೇಲೆ ಬಿದ್ದಿದ್ದರಿಂದ ಮತ್ತೆ ಅಡಚಣೆ ಉಂಟಾಯಿತು. ಕೂಡಲೇ ಆ ಮರವನ್ನು ತೆರವು ಮಾಡಲಾಗಿದ್ದು, ಈಗಾಗಲೇ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಪುನಾರಂಭವಾಗಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.

👉 ಪ್ರಸ್ತುತ ಆಗುಂಬೆ ಘಾಟಿಯಲ್ಲಿ ಸಂಚಾರ ಸರಾಗವಾಗಿ ನಡೆಯುತ್ತಿದ್ದು, ಪ್ರಯಾಣಿಕರಿಗೆ ಆತಂಕ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment