ರಿಪ್ಪನ್ಪೇಟೆ ; ಮಕ್ಕಳಿಗೆ ಶಿಕ್ಷಣದ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡುವ ಮೂಲಕ ಸನ್ಮಾರ್ಗದಲ್ಲಿ ಸಾಗಲು ಶಿಕ್ಷಕರು ಬೋಧನೆ ಮಾಡಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ಅಮೃತ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಾಗೂ ಶಾಲಾ ಪುನರ್ಮಿಲನ ಮತ್ತು ಶಿಕ್ಷಕರ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ವ್ಯಕ್ತಿತ್ವ ನಿರ್ಮಾಣದೊಂದಿಗೆ ವ್ಯಕ್ತಿ ನಿರ್ಮಾಣ ಮಾಡುತ್ತದೆ. ನೌಕರಿಗಾಗಿ ಶಿಕ್ಷಣವಾಗದೆ ಬದುಕಿಗೆ ಮಾರ್ಗದರ್ಶನವಾಗಬೇಕು. ಇಂದು ಸಮಾಜಘಾತುಕ ಕೃತ್ಯಗಳಲ್ಲಿ ವಿದ್ಯಾವಂತರೇ ಹೆಚ್ಚು ಭಾಗಿಯಾಗಿರುವುದು ವಿಪರ್ಯಾಸ ಎಂದರು.
ಸಮಾರಂಭದ ದಿವ್ಯ ಸಾನ್ನಿದ್ಯವನ್ನು ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಎಸ್.ಆನಂತಮೂರ್ತಿ ವಹಿಸಿದ್ದರು.
ಅಮೃತ ಸ್ಮರಣ ಸಂಚಿಕೆಯನ್ನು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬಿಡುಗಡೆಗೊಳಿಸಿ, ಹೊಗಲಿಕೆಯಿಂದ ಏನು ಪ್ರಯೋಜನ ಬದುಕಿದಾಗ ವ್ಯಕ್ತಿಯನ್ನು ನಿಂಧಿಸುವ ಕಾಲವಾಗಿದೆ. ಅದೇ ವ್ಯಕ್ತಿ ಸತ್ತ ಮೇಲೆ ಮಾತನಾಡಿದರೆ ಏನು ಪ್ರಯೋಜನ ಎಂದು ಹೇಳಿ ಜಾತಿವಾದಿಗಳು ವಿಜ್ಞಾನಿಗಳು ವಿದ್ಯಾವಂತರುಗಳಿಂದ ಹೆಚ್ಚು ವಿದ್ವಾಂಸಕ್ಕೆ ಕೃತ್ಯಗಳು ನಡೆಯುತ್ತವೆ ಎಂದು ಹೇಳುವ ಜನಪ್ರತಿನಿಧಿಗಳಿಗೆ ಗಾಂಧಿಜೀಯವರನ್ನು ಹತ್ಯೆ ಮಾಡಿದವರು ಸಹ ವಿದ್ಯಾವಂತರಲ್ಲವೇ? ಎಂದು ಹೇಳಿ, ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿಯೇ ಇದಾಗಿದೆ ಎಂದು ವ್ಯಂಗ್ಯವಾಡಿದರು.

ಅನಕ್ಷರಸ್ಥರಿಂದ ದೇಶ ಹಾಳಾಗಿಲ್ಲ ವಿದ್ಯಾವಂತರಿಂದಲೇ ದೇಶ ಇಂತಹ ಕೃತ್ಯದಿಂದ ನಾಶವಾಗಲು ಕಾರಣವಾಗಿದೆ ಎಂದ ಅವರು, ವಿಮರ್ಶೆ ಅಧ್ಯಯನ ಮಾಡಿ ಯುವ ಸಮೂಹಕ್ಕೆ ತಿಳಿಸಬೇಕಾಗಿದೆ ಎಂದರು.

ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜಾತ್ಯಾತೀತವಾಗಿ ಎಲ್ಲರನ್ನು ಪರಸ್ಪರ ಪ್ರೀತಿ ವಿಶ್ವಾಸದಿಂದ ಕಾಣುವ ಪದ್ದತಿ ಇನ್ನೂ ಇದೆ. ಆದರೆ ಪಟ್ಟಣ ನಗರ ಪ್ರದೇಶದಲ್ಲಿ ಪಕ್ಕದ ಮನೆಯವರು ಯಾರು ಎಂಬುದನ್ನು ಸಹ ನೋಡದ ಸ್ಥಿತಿ ನಿರ್ಮಾಣವಾಗಿದೆ. ನಾವು ನಮ್ಮವರು ಎಂಬ ಭಾವನೆಯಲ್ಲಿ ಕಾಣುವ ನಾವುಗಳು ದೇಶವನ್ನು ಪ್ರೀತಿಸಿದಂತೆ ನಾವು ಕಲಿತ ಶಾಲೆಯನ್ನು ಕಲಿಸಿದ ಗುರುಗಳನ್ನು ಪ್ರೀತಿಸಿ ಗೌರವಿಸಿದಾಗ ಸಿಗುವ ತೃಪ್ತಿಯೇ ಬೇರೆ ಎಂದರು.

ಕಾರ್ಯಕ್ರಮದಲ್ಲಿ ಅಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ್ಗೌಡ, ಉಪಾಧ್ಯಕ್ಷೆ ವಿನೋಧ ಯೋಗೇಂದ್ರಪ್ಪ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಶ್ವೇತಾ ಆರ್.ಬಂಡಿ, ಗ್ರಾಮ ಪಂಚಾಯಿತ್ ಸದಸ್ಯರಾದ ಎ.ವಿ.ಸುರೇಶ, ಲಿಂಗರಾಜ್ ಬಂಡಿ, ವಿಶ್ವನಾಥ ಗಂದ್ರಳ್ಳಿ, ದೇವರಾಜ್ ಹೊಳೆಕೇವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಿನೇಶ ಬಂಡಿ, ಸಿಡಿಸಿ ಅಧ್ಯಕ್ಷ ಟಿ.ಡಿ.ಸೋಮಶೇಖರ್, ಹುಂಚ ಗ್ರಾಮ ಪಂಚಾಯಿತ್ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್, ಕಾಂಗ್ರೆಸ್ ಮುಖಂಡ ವೈ.ಹೆಚ್.ನಾಗರಾಜ್ ಇನ್ನಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ಉಪನ್ಯಾಸಕರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.

ಅಮೃತ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಹೆಚ್.ಎಂ.ಬಷೀರ್ ಅಹಮದ್ ಸ್ವಾಗತಿಸಿದರು. ಸತ್ಯನಾರಾಯಣ ಎನ್.ಎಸ್ ನಿರೂಪಿಸಿದರು. ಸೋಮಶೇಖರ್ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





