ಹೊಂಬುಜ ; ಪಾರಂಪರಿಕ ಜಿನಾಗಮೋಕ್ತ ಶಾಸ್ತ್ರದನ್ವಯ ಧ್ವಜಾರೋಹಣ ಮಾಡಿ, ಆರು ದಿವಸಗಳ ವಾರ್ಷಿಕ ಮಹಾರಥಯಾತ್ರಾ ಮಹೋತ್ಸವವು ಇಂದು ಧ್ವಜಾವರೋಹಣ ಮಾಡುವ ಮೂಲಕ ಸಂಪನ್ನಗೊಂಡಿತ್ತು.
ಶ್ರೀ ಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಆರಾಧನೆಗಳು, ನಾಗವಾಹನೋತ್ಸವ, ಸಿಂಹವಾಹನೋತ್ಸವ, ಬೆಳ್ಳಿ ರಥೋತ್ಸವ, ಪುಷ್ಪರಥೋತ್ಸವ, ಬಲಿ ಉತ್ಸವಾದಿಗಳು ಸಾಂಗವಾಗಿ ಪೂರ್ವಪರಂಪರೆಯಂತೆ ನೆರವೇರಿತು.
ಅಗ್ರೋದಕವನ್ನು ಕುಮದ್ವತಿ ತೀರ್ಥದಿಂದ ಸನ್ನಿಧಿಗೆ ಅರ್ಪಿಸಲಾಯಿತು. ಪಲ್ಲಕ್ಕಿಯಲ್ಲಿ ಅವಭೃತ ಜಿನಬಿಂಬಗಳನ್ನು ನಗರ ರಾಜಬೀದಿಯಿಂದ ಸಾಲಂಕೃತ ಶೋಭಾಯಾತ್ರೆಯಲ್ಲಿ ಜಿನಸ್ತುತಿಯೊಂದಿಗೆ ತರಲಾಯಿತು.

ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದೇವತೆ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶಾಸ್ತ್ರೋಕ್ತ ಪೂಜೆ ಸಲ್ಲಿಸಲಾಯಿತು. ಊರ, ಪರಭಕ್ತವೃಂದ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳ ಹಾಗೂ ಕರ್ನಾಟಕದ ವಿವಿಧೆಡೆಯಿಂದ ಮತ್ತು ದೇಶದ ವಿವಿಧ ರಾಜ್ಯಗಳ ಭಕ್ತರು ಕುಂಕುಮೋತ್ಸವದಲ್ಲಿ ಭಕ್ತಿ ಸಿಂಚನಗೈದರು.
ಶ್ರೀಕ್ಷೇತ್ರದ ಭಕ್ತರನ್ನು ಸದಾ ಹರಸುತ್ತಿರಲಿ ಎಂದು ಪೂಜ್ಯಶ್ರೀಗಳು ಶ್ರೀಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸೇವಾದಾರರಾದ ಮನೋಜಕುಮಾರ ಪಾಟ್ನಿ, ಸಂಗೀತಾ ಪಾಟ್ನಿಯವರನ್ನು ಶ್ರೀಗಳು ಗೌರವಿಸಿದರು. ಭೋಜನ, ಉಪಹಾರ, ಪುಷ್ಪಾಲಂಕಾರ, ಸರ್ವವಾದ್ಯ ಸೇವೆ ಸಲ್ಲಿಸಿದವರನ್ನು ಶ್ರೀಗಳು ಅಭಿನಂದಿಸಿದರು.
ಕೃತಜ್ಞತೆ ಸಮರ್ಪಣೆ :
ವಾರ್ಷಿಕ ಮಹಾರಥೋತ್ಸವ ಸಂದರ್ಭದಲ್ಲಿ ಸಹಕರಿಸಿದ ಆರಕ್ಷಕ ಇಲಾಖೆ, ಮೆಸ್ಕಾಂ ವಿದ್ಯುತ್ ಇಲಾಖೆ, ಪಂಚಾಯತಿ, ಕಂದಾಯ, ಆರೋಗ್ಯ ಇಲಾಖೆ, ಗೃಹರಕ್ಷಕದಳ, ಸ್ವಯಂಸೇವಕರನ್ನು ಅಭಿನಂದಿಸಿ, ಶ್ರೀಮಠದ ಕಾರ್ಯನಿರ್ವಾಕರ ಅಧಿಕಾರಿ ಪ್ರಕಾಶ ನೇ. ಮಗದುಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ರವರು ಕೃತಜ್ಞತೆ ಸಲ್ಲಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ತಂಡದವರನ್ನು ಗೌರವಿಸಿದರು. ಪುರೋಹಿತರಾದ ಪದ್ಮರಾಜ ಇಂದ್ರ, ಸಹಪುರೋಹಿತ ವರ್ಗದವರನ್ನು ಶ್ರೀಗಳು ಗೌರವಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





