ರಿಪ್ಪನ್ಪೇಟೆ ; ಕಳೆದ ಒಂದು ತಿಂಗಳಿಂದ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪಿಸಬೇಕು ಎಂಬ ಕೂಗಿನೊಂದಿಗೆ ತಾಲ್ಲೂಕಿನ 30 ಗ್ರಾಮ ಪಂಚಾಯಿತ್ಗಳಿಗೆ ತೆರಳಿ ಯುವಜನರನ್ನು ಸಂಘಟಿಸುವುದರೊಂದಿಗೆ ಏಪ್ರಿಲ್ 5 ರಂದು ನಗರದ ಚಿಕ್ಕಪೇಟೆಯಿಂದ ಪಾದಯಾತ್ರೆಯನ್ನು 95 ರ ಹರೆಯದ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಏಪ್ರಿಲ್ 5 ರಂದು ಹೊರಟ ಪಾದಯಾತ್ರೆ ಇಂದು ಸಂಜೆ ರಿಪ್ಪನ್ಪೇಟೆಯಲ್ಲಿ ಸಮಾರೋಪದೊಂದಿಗೆ ಮುಕ್ತಾಯಗೊಳ್ಳಲಿದ್ದು ಮಾರ್ಗದುದ್ದಕ್ಕೂ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುವುದರೊಂದಿಗೆ ಪಾದಯಾತ್ರೆಯಲ್ಲಿರುವ ಹೋರಾಟಗಾರರಿಗೆ ಊಟೋಪಚಾರ ಮತ್ತು ಕುಡಿಯುವ ನೀರು ಪಾನೀಯಗಳ ವ್ಯವಸ್ಥೆ ಸಹ ಭರ್ಜರಿಯಾಗಿಯೇ ಸಾಗಿತು.




ಹೊಸನಗರದಿಂದ ಇಂದು ಬೆಳಗ್ಗೆ 6:30 ಕ್ಕೆ ಹೊರಟ ಪಾದಯಾತ್ರೆಯ ಹೋರಾಟಗಾರರಿಗೆ ಕರಿನಗೊಳ್ಳಿ ಬಳಿ ಕಾಫಿ, ಟೀ ಉಪಹಾರದ ವ್ಯವಸ್ಥೆಯನ್ನು ಸಾರ್ವಜನಿಕರು ನೆರವೇರಿಸುವುದರೊಂದಿಗೆ ಸಂಪೂರ್ಣ ಬೆಂಬಲ ನೀಡಿದರು. ನಂತರ ಕೋಡೂರು ಗ್ರಾಮ ಪಂಚಾಯಿತ್ ನವರು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರೆ ಬಿಸಿಲಿನ ತಾಪದಲ್ಲಿಯೂ ಮಾಜಿ ಶಾಸಕ ಬಿ.ಸ್ವಾಮಿರಾವ್ ತಮ್ಮ ಹಠವನ್ನು ಬಿಡದೇ ವ್ಹೀಲ್ ಚೇರ್ನಲ್ಲಿ ಕುಳಿತು ಸಹಾಯಕನ ಸಹಾಯದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಇಂದಿನ ಯುವಜನಾಂಗವನ್ನು ನಾಚಿಸುವಂತೆ ಮಾಡಿತು.

ಹೀಗೆ ಪಾದಯಾತ್ರೆ ಸಾಗುತ್ತಾ ಮರದ ನೆರಳನ್ನು ಆಶ್ರಯಿಸುತ್ತಾ ಚಿಕ್ಕಜೇನಿ ಗ್ರಾಮದ ಸಿಡಿಹಳ್ಳ ಬಳಿಯ ಅರಣ್ಯ ಪ್ರದೇಶದ ಮರದ ಕೊಂಬೆಯ ಸಿಂಹಾಸನದ ಮೇಲೆ ಶ್ರೀಗಳು ವಿರಾಜಮಾನವಾಗಿ ಕುಳಿತು ದಣಿವಾರಿಸಿಕೊಳ್ಳುತ್ತಾ ಸಂಗೀತ ವಿವಿಧ ರಸಮಂಜರಿ ಕಾರ್ಯಕ್ರಮಗಳನ್ನು ಹಾಡಿಸುತ್ತಾ ಪಾದಯಾತ್ರೆಗೆ ಹುಮ್ಮಸ್ಸು ಬರುವಂತೆ ಮಾಡಿಸುತ್ತಾ ಗಮನಸೆಳೆದಿದ್ದು ವಿಶೇಷವಾಗಿತ್ತು.

ಒಟ್ಟಾರೆಯಾಗಿ ಕ್ಷೇತ್ರದ ಮರುಸ್ಥಾಪನೆ ಪಾದಯಾತ್ರೆಯು ಯಶಸ್ವಿಯಾಗುವುದರೊಂದಿಗೆ ಬೃಹತ್ ಸಮಾವೇಶದ ಸ್ಥಳಕ್ಕೆ ರಿಪ್ಪನ್ಪೇಟೆಗೆ ಪ್ರವೇಶಿಸುತ್ತಿದ್ದಂತೆ ಮಹಿಳಾ ತಂಡದಿಂದ ಡೊಳ್ಳು ಕುಣಿತ, ನಗಾರಿ, ಚಂಡೆ ವಿವಿಧ ತಾಳಮದ್ದಾಲೆಗಳಿಂದ ಅದ್ದೂರಿಯಾಗಿ ಸ್ವಾಗತಿಸುವುದರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಕ್ಷೇತ್ರದ ಮರು ಸ್ಥಾಪನಾ ಸಮಿತಿಯ ಸಂಚಾಲಕ ಕಲಗೋಡು ರತ್ನಾಕರ್, ಎನ್.ಆರ್. ದೇವಾನಂದ್, ವೀರೇಶ್ ಆಲವಳ್ಳಿ, ಎನ್.ವರ್ತೇಶ್, ಎಂ.ಬಿ.ಮಂಜುನಾಥ, ಎಂ. ಸುರೇಶ್ಸಿಂಗ್, ಆಸಿಫ್ ಭಾಷಾ, ನಿರೂಪ್ಕುಮಾರ್, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾತಗೌಡ ಇನ್ನಿತರ ಮುಖಂಡರು ಹೆಜ್ಜೆ ಹಾಕಿ ಹೋರಾಟಕ್ಕೆ ಬೆಂಬಲ ನೀಡಿದರು.




ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





