ಹೊಸನಗರ ; ಕೃಷಿ ಕಾರ್ಮಿಕರು ಅವಘಡಗಳಿಗೆ ಬಲಿಯಾದಂತ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬ ಹಾಗೂ ಜಮೀನು ಮಾಲಿಕರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ಮನಗಂಡ ಮಾಮ್ಕೋಸ್ ಸಂಸ್ಥೆಯು ತನ್ನ ಸದಸ್ಯರಿಗೆ ವಿಶೇಷ ಗುಂಪು ವಿಮಾ ಭದ್ರತಾ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಮಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ತಿಳಿಸಿದರು.
ಸಂಸ್ಥೆಯ ಇಲ್ಲಿನ ಶಾಖಾ ಕಛೇರಿಯಲ್ಲಿ ಅವರು ಫಲಾನುಭವಿಗಳಿಗೆ ವಿಮಾ ಪರಿಹಾರ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿ ಮಾತನಾಡಿ, ಅಡಿಕೆ ಕೊನೆಗಾರರ ಕೆಲಸ ಅಪಾಯಕಾರಿ. ಅವಘಡ ಸಂಭವಿಸಿದಲ್ಲಿ ಆತನ ಅವಲಂಬಿತರ ಜೀವನ ಮೂರಾಬಟ್ಟೆಯಾಗುತ್ತದೆ. ನಮ್ಮ ಸಂಸ್ಥೆಯಲ್ಲಿ 531 ರೂ. ವಾರ್ಷಿಕ ಕಂತು ಪಾವತಿಸುವ ಮೂಲಕ ಸದಸ್ಯ ಹಾಗೂ ಓರ್ವ ಕಾರ್ಮಿಕರ ಜೀವಕ್ಕೆ 6 ಲಕ್ಷ ರೂ.ವರೆಗೆ ಜೀವ ವಿಮಾ ಭದ್ರತೆ ದೊರೆಯುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿ ಮಾಡಿದಲ್ಲಿ ಸೌಲಭ್ಯ ವ್ಯಾಪ್ತಿಗೆ ಕುಟುಂಬದ ಎಲ್ಲಾ ಸದಸ್ಯರು ಹಾಗು ಕಾರ್ಮಿಕರು ವಿಮಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ವಿಮಾ ಕಂತು ಪಾವತಿಸಲು ಮೇ 26 ಕಡೆಯ ದಿನವಾಗಿದ್ದು ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಅಡಿಕೆ ಬೆಳೆಗಾರರಿಗೆ ಆರ್ಥಿಕ ಭದ್ರತೆ ದೊರೆಯುವಂತಾಗಬೇಕು. ಪಾರದರ್ಶಕ ಆಡಳಿತ ನೀಡುವುದು ಹಾಗೂ ಬೆಳೆಗಾರರ ಹಿತ ಕಾಯುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದರು.
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ, ಧರ್ಮೆಂದ್ರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿಮಾ ಪರಿಹಾರದ ಚೆಕ್ ವಿತರಣೆ :
ಅಡಿಕೆಗೆ ಔಷಧ ಸಿಂಪಡಿಸುವಾಗ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೆ ಒಳಗಾದ ಕೃಷಿ ಕಾರ್ಮಿಕ ಹೇರಗಲ್ ಗ್ರಾಮದ ನಿವಾಸಿ ಸತೀಶ ಅವರಿಗೆ 1.10 ಲಕ್ಷ ರೂ. ಹಾಗೂ ತೆಂಗಿನ ಹ್ಯಾಡೆ ಬಿದ್ದು ಗಾಯಗೊಂಡಿದ್ದ ಮುತ್ತೂರು ನಿವಾಸಿ ಪ್ರಶಾಂತ ಅವರಿಗೆ 1.39 ಲಕ್ಷ ರೂ.ಪರಿಹಾರದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ವಿ. ಕೃಷ್ಣಮೂರ್ತಿ, ಹೆಚ್. ಧರ್ಮೇಂದ್ರ, ರತ್ನಾಕರ್, ಶ್ರೀಕಾಂತ್, ವ್ಯವಸ್ಥಾಪಕರಾದ ಗಣಪತಿ, ಸಿಬ್ಬಂದಿಗಳಾದ ಯೋಗೇಶ್, ವಿದ್ಯಾ, ಲೀಲಾವತಿ, ಮಧುಸೂದನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





