ಬೋರ್ವೆಲ್ ಕೊರೆಸಲು ದುಪ್ಪಟ್ಟು ದರ, ರೈತರ ಜೀವ ಹಿಂಡುತ್ತಿರುವ ಲಾರಿ ಮಾಲೀಕರು !
ಹೊಸನಗರ : ನೀರಿನ ಹಾಹಾಕಾರವನ್ನೇ ಬಂಡವಾಳ ಮಾಡಿಕೊಂಡ ಬೋರ್ವೆಲ್ ಲಾರಿ ಮಾಲೀಕರು ರೈತರ ಜೀವ ಹಿಂಡುತ್ತಿದ್ದಾರೆ.
ಹೌದು, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದಿಂದಾಗಿ ಇತ್ತೀಚಿನ ದಿನಗಳಲಿ ಕೃಷಿ ಕೆಲಸಕ್ಕೆ ಹೋಗಲಿ ಕುಡಿಯುವುದಕ್ಕೂ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ತೋಟಗಳಲ್ಲಿನ ಗಿಡ–ಮರ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಎಷ್ಟೇ ಬೆಲೆ ತೆತ್ತಾದರೂ, ಎಲ್ಲಿಂದಲಾದರೂ ನೀರು ತಂದು ತೋಟ ಉಳಿಸಿಕೊಳ್ಳಬೇಕು ಎಂಬ ಉಮೇದಿಯೊಂದಿಗೆ ಹೊಸ ಕೊಳವೆಬಾವಿ ಕೊರೆಸಲು ಪೈಪೋಟಿಗೆ ಇಳಿದಿದ್ದಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ತಮಿಳುನಾಡು ಮೂಲದ ಬೋರ್ವೆಲ್ ಲಾರಿ ಮಾಲೀಕರು ರೈತರಿಂದ ಮನಸೋ ಇಚ್ಛೆ ಹಣ ಪೀಕುತ್ತಿದ್ದಾರೆ.
ಒಂದು ಅಡಿಗೆ 95 – 100 ರೂ. ಇರುವ ದರವನ್ನು ಏಕಾಏಕಿ 125 – 130 ರೂ. ದರ ನಿಗದಿ ಮಾಡಿದ್ದಾರೆ. ಜೊತೆಗೆ 300 ಅಡಿಗಿಂತ ಹೆಚ್ಚು ಆದರೆ ಅದಕ್ಕೆ ಬೇರೆ, 600 ಅಡಿ ದಾಟಿದರೆ ಮತ್ತೊಂದು ದರ ಹೀಗೆ ರೈತರ ಜೇಬಿಗೆ ಕತ್ತರಿ ಬೀಳುತ್ತಲೇ ಹೋಗುತ್ತಿದೆ. ಇದನ್ನ ರೈತರು ಪ್ರಶ್ನೆ ಮಾಡಿದರೆ ‘ಬೇಕಾದರೆ ಬೋರ್ವೆಲ್ ಹೊಡೆಸಿಕೋ ಇಲ್ಲ ಬಿಡು’ ಎಂದು ದುರಾಹಂಕಾರದಿಂದ ವರ್ತನೆ ಮಾಡುತ್ತಾರೆ ಎಂದು ರೈತರು ತಮ್ಮ ಅಳಲನ್ನು ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ.
ಕೊಳವೆಬಾವಿ ಕೊರೆದರೆ ತಮ್ಮ ಬಳಿಯೇ ಕೇಸಿಂಗ್ ಪೈಪ್ ಖರೀದಿಸಬೇಕು ಎಂಬ ಷರತ್ತನ್ನು ಬಹಳಷ್ಟು ಬೋರ್ವೆಲ್ ಏಜೆನ್ಸಿಯವರು ವಿಧಿಸುತ್ತಿದ್ದಾರೆ. ಅದಕ್ಕೆ ಒಪ್ಪಿದರೆ ಮಾತ್ರ ಕೊರೆಯಲು ಒಪ್ಪುತ್ತಾರೆ. ಇಲ್ಲದಿದ್ದರೆ ಬರುವುದಿಲ್ಲ ಎಂಬುದು ರೈತರ ಅಳಲು. 20 ಅಡಿಯ ಕಬ್ಬಿಣದ ಕೇಸಿಂಗ್ ದರ ಈ ಮೊದಲು 2800 – 3000 ರೂ. ಇತ್ತು. ಅದು ಈಗ 7000 ರೂ.ಗೆ ಏರಿಕೆಯಾಗಿದೆ. ದುಪ್ಪಟ್ಟು ದರದ ಜೊತೆಗೆ ಅವರು ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದರೂ ಒಪ್ಪಿಕೊಳ್ಳಬೇಕು ಎಂಬುದು ಅವರ ದೂರಾಗಿದೆ.
ಅಸಹಾಯಕರಾದ ರೈತರು ತಾವು ಮಾಡಿದ ಬೆಳೆ ಹಾಳಾಗಬಾರದೆಂದು ಅಲ್ಲಿ ಇಲ್ಲಿ ಸಾಲಸೋಲ ಮಾಡಿ ಬೋರ್ವೆಲ್ ಕೊರೆಸುತ್ತಾರೆ. ಕೆಲವರ ದುರಾದೃಷ್ಟವೋ ಏನೋ ನೀರು ಬರುವುದಿಲ್ಲ, ಬೋರ್ವೆಲ್ ಕೊರೆಸಿ ಬೆಳೆ ಬೆಳೆದು ಸಾಲ ತೀರಿಸೋಣ ಅಂತ ಕೆಲವರು ಮೀಟರ್ ಬಡ್ಡಿಯಲ್ಲಿ ಹಣ ಪಡೆದಿರುತಾರೆ ಕೆಲವರಿಗೆ ಮೀಟರ್ ಬಡ್ಡಿಯ ಹಣನು ಸಿಗುವುದಿಲ್ಲ ಕಾರಣ ಮೀಟರ್ ಬಡ್ಡಿ ಕೊಡುವವನು ಚೆಕ್ ಮತ್ತು ಬಾಂಡ್ ಪೇಪರ್ ಕೇಳುತ್ತಾನೆ.
ರೈತ ಚೆಕ್ ಮತ್ತು ಇನ್ನಿತರೇ ಯಾವುದು ಆಧಾರ ಕೊಡಲು ಇಲ್ಲದೆ ಹೆಂಡತಿಯ ಮುತ್ತೈದೆ ಭಾಗ್ಯವಾದ ತಾಳಿ ಸರ ಅಡಮಾನ ಇಟ್ಟು ಹಣ ತಂದು ಕೊಳವೆ ಬಾವಿ ಕೊರೆಸುತ್ತಾನೆ. ಅವರ ದುರಾದೃಷ್ಟ ನೀರು ಬರುವುದಿಲ್ಲ ಬೆಳೆ ಬೆಳೆಯಲು ಆಗುವುದಿಲ್ಲ.
ಇತ್ತ ಕೊಳವೆ ಬಾವಿಯಲ್ಲಿ ನೀರು ಇಲ್ಲ ಅಡವಿಟ್ಟ ತಾಳಿಸರ ಬಿಡಿಸಲಾಗದೆ ಮನೆಯಲ್ಲಿ ಕೌಟುಂಬಿಕ ಕಲಹ ಮತ್ತು ಮೀಟರ್ ಬಡ್ಡಿ ಕೊಟ್ಟವನ ಹಿಂಸೆ ತಡೆಯಲು ಆಗದೆ ಇತ್ತ ಸಾಲ ತೀರಿಸಲು ಆಗದೆ ಅತ್ತ ಅಡವಿಟ್ಟ ಬಂಗಾರ ಬಿಡಿಸಲು ಆಗದೆ ರೈತ ಆತ್ಮಹತ್ಯೆಗೆ ಶರಣಾಗುತ್ತಾನೆ.
ಬೋರ್ವೆಲ್ ಕೊರೆಯಲು ಅಗತ್ಯವಿದ್ದಾಗ ಲಾರಿಗಳು ಸಿಗುವುದಿಲ್ಲ. 15 ದಿನ, ತಿಂಗಳು ಮೊದಲೇ ಬುಕ್ಕಿಂಗ್ ಮಾಡಬೇಕು. ಒಂದು ಜಮೀನಿಗೆ ಹೋದ ಲಾರಿ ಒಂದು ಕೊಳವೆ ಬಾವಿ ಕೊರೆದು ವಾಪಸ್ ಬರುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಒಂದು ವಿಫಲ ಆದರೆ ಮತ್ತೊಂದು, ಮಗದೊಂದು ಹೀಗೆ ಬೋರ್ವೆಲ್ಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನೀರು ಬೀಳದಿದ್ದರೆ ತೋಟ ಒಣಗುವ ಭೀತಿ ಬೆಳೆಗಾರರದ್ದು. ಹೀಗಾಗಿ ಮುಂಗಡ ಬುಕ್ಕಿಂಗ್ ಮಾಡಿದರೂ ಕಾಯುತ್ತಲೇ ಇರಬೇಕು. ಅತ್ತ ಲಾರಿ ಕಾಯುತ್ತಾ, ಇತ್ತ ಕಣ್ಣೆದುರೇ ತೋಟದಲ್ಲಿನ ಗಿಡಗಳು ಒಣಗುವುದನ್ನು ನೋಡುತ್ತಾ ಕೂರಬೇಕಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬೋರ್ವೆಲ್ ಲಾರಿ ಮಾಫಿಯಾಕ್ಕೆ ಕಡಿವಾಣ ಹಾಕಬೇಕಿದ್ದ ಅಂತರ್ಜಲ ವಿಭಾಗದ ಅಧಿಕಾರಿಯನ್ನು ಕೇಳಿದರೆ ಆ ಅಧಿಕಾರಿ ಕೊಡುವ ಉತ್ತರ ಕೇಳಿದರೆ ಒಂದು ಗಾದೆ ಮಾತು ನೆನಪಾಗತ್ತೆ. ‘ಕೊಟ್ಟ ಕುದುರೆ ಏರದವನು ವೀರನ್ನು ಅಲ್ಲ ಶೂರನು ಅಲ್ಲ’ ಎನ್ನುವ ಹಾಗೆ ಇದೆ. ಯಾಕೆ ಈ ಗಾದೆ ಮಾತು ನೆನಪಾಗತ್ತೆ ಅಂದರೆ ಈ ಅಧಿಕಾರಿ ಹೆಸರು ನಿರ್ಮಲ ನಾಧನ್. ಅಕ್ರಮ ಕಡಿವಾಣ ಹಾಕಲೆಂದೇ ಇವರಿಗೆ ಸರ್ಕಾರ ಒಂದು ಕಾರು, ಒಬ್ಬ ಚಾಲಕನನ್ನು ಕೊಟ್ಟರು ಇವರು ಶಿವಮೊಗ್ಗ ಬಿಟ್ಟು ಕದಲುವುದಿಲ್ಲ.
ಕರ್ನಾಟಕ ಸರ್ಕಾರದ ಒಂದು ನಿಯಮ ಇದೆ ಬೋರ್ವೆಲ್ ಲಾರಿಗೆ ಕರ್ನಾಟಕ ಅಂತರ್ಜಲ ವಿಭಾಗದಲಿ ನೋಂದಾವಣೆ ಮಾಡಿಸಿ 7A ಫಾರಂ ತೆಗೆದುಕೊಂಡು ಡ್ರಿಲಿಂಗ್ ಮಾಡಬೇಕು. ಇಲ್ಲವಾದಲ್ಲಿ ಇಂತಹ ಲಾರಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ಇದಕ್ಕಾಗಿಯೇ ನಿರ್ಮಲ ಮೇಡಂ ಅವರಿಗೆ ಸರ್ಕಾರ ಎಲ್ಲಾ ವ್ಯವಸ್ಥೆ ಕೊಟ್ಟಿದೆ. ಅದನ್ನ ಅವರು ಸರಿಯಾಗಿ ಉಪಯೋಗಿಸಿಕೊಂಡು ಕಾರ್ಯ ನಿರ್ವಹಿಸಿ ಅಕ್ರಮವನ್ನು ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರು ಮತ್ತು ಜನ ಸಾಮಾನ್ಯರ ರಕ್ಷಣೆಗೆ ನಿಲ್ಲಬೇಕೆಂದು ನಮ್ಮ ಕಳಕಳಿಯಾಗಿದೆ.