ಶಿವಮೊಗ್ಗ : ಇಲ್ಲಿನ ಮಹಾವೀರ ವೃತ್ತದಲ್ಲಿನ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆಯ ನಡುವೆಯೇ, ಯುವ ಕಾಂಗ್ರೆಸ್ನೊಬ್ಬರು ನಗರದಲ್ಲಿರುವ ಬಿಜೆಪಿ ಜಿಲ್ಲಾಕಚೇರಿಗೆ ದಿಢೀರ್ ದಾಳಿ ನಡೆಸಲು ಯತ್ನಿಸಿದರು. ಪೊಲೀಸ್ ಸಿಬ್ಬಂದಿ ಮುಂಚಿತವಾಗಿ ಬ್ಯಾರಿಕೇಡ್ಗಳನ್ನು ಸ್ಥಾಪಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರೂ ಸಹ, ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿಹಾಕಿ ಬಿಜೆಪಿ ಕಚೇರಿಗೆ ನುಗ್ಗುವ ಪ್ರಯತ್ನ ನಡೆಸಿದರು.

ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ, ಒಳಗೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ತಕ್ಷಣ ಬಿಜೆಪಿ ಕಚೇರಿಯ ಬಾಗಿಲನ್ನು ಮುಚ್ಚಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ಪೊಲೀಸ್ ವಾಹನದ ಮೇಲೆ ಏರಿ, ಕಾಂಗ್ರೆಸ್ ಧ್ವಜ ಹಾರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲದೇ ಯುವ ಕಾಂಗ್ರೆಸ್ ತಂಡವು ಬಿಜೆಪಿ ಕಚೇರಿಗೆ ಚಪ್ಪಲಿ ತೂರಿದಷ್ಟೇ ಅಲ್ಲ, ಸಮೀಪದಲ್ಲಿದ್ದ ಗ್ರಾಮಾಂತರ ಬಿಜೆಪಿ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಲು ಯತ್ನಿಸಿತು. ಸ್ಥಳದಲ್ಲಿದ್ದ ಬ್ಯಾಂಕ್ ಸಿಬ್ಬಂದಿಯ ದ್ವಿಚಕ್ರ ವಾಹನಕ್ಕೂ ಹಾನಿ ಉಂಟಾಯಿತು.

ಈ ಘಟನೆಯ ನಂತರ ಪೊಲೀಸರು ತ್ವರಿತ ಕ್ರಮ ತೆಗೆದುಕೊಂಡು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು. ಈ ವೇಳೆ ಶರತ್ ಮರಿಯಪ್ಪ, ಕೇಶವ, ಎಂ.ಬಿ. ಪ್ರವೀಣ್, ಕುಮರೇಶ್, ಜಿ.ಡಿ. ಮಂಜುನಾಥ್, ಕೆ. ರಂಗನಾಥ್, ರಾಹುಲ್, ಮಿಥುನ್, ಆರೀಫ್ ಮೊದಲಾದವರು ಸ್ಥಳದಲ್ಲಿದ್ದರು.
ಕಾಂಗ್ರೆಸ್ ಕಛೇರಿ ಮೇಲೆ ಕಲ್ಲು ತೂರಾಟಕ್ಕೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರು !
ನಗರದಲ್ಲಿ ಇಂದು ನಡೆದ ನೀಟ್ ಸಂಬಂಧಿತ ವಿವಾದದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಉಗ್ರ ಸಂಘರ್ಷ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಛೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ ಕೆಲವೇ ಕ್ಷಣದಲ್ಲಿ, ಬಿಜೆಪಿ ಕಾರ್ಯಕರ್ತರು ಪ್ರತಿಕ್ರಿಯೆಯಾಗಿ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ದಾಳಿ ನಡೆಸಿ ಕಲ್ಲು ತೂರಾಟಕ್ಕೆ ಯತ್ನಿಸಿದರು. ಈ ವೇಳೆ ಕಛೇರಿಯ ಬಳಿ ಬೃಹತ್ ಬ್ಯಾನರ್ ಅನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕಛೇರಿಯ ರಸ್ತೆಯಲ್ಲಿ ನಾಲ್ಕು ದಿಕ್ಕುಗಳಿಂದ ಬಿಗಿ ಬಂದೋಬಸ್ತ್ ಜಾರಿಗೊಳಿಸಿದ್ದರು. ಆದರೂ ಸಂದಿಯಲ್ಲಿ ನುಗ್ಗಿದ 15ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಪ್ರಯತ್ನಿಸಿದ್ದರು. ಪೊಲೀಸರು ತಕ್ಷಣವೇ ಅವರನ್ನು ವಶಕ್ಕೆ ಪಡೆದು ನೂಕಾಟ-ತಳ್ಳಾಟದ ಮಧ್ಯೆ ಸಂಘರ್ಷವನ್ನು ತಡೆಯಲು ಪ್ರಯತ್ನಿಸಿದರು.
ಸಂಘರ್ಷದ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರ ಕಾಲಿಗೆ ಗಂಭೀರ ಗಾಯವಾಯಿತು ಮತ್ತು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂಘಟನೆಯಲ್ಲಿದ್ದ ಪ್ರಮುಖ ಬಿಜೆಪಿ ಯುವ ಮುಖಂಡರಾದ ರಾಹುಲ್ ಬಿದಿರೆ, ಚಿದಾನಂದ, ಸಂತೋಷ್, ದರ್ಶನ್ ಹಾಗೂ ದೀನ್ ದಯಾಳ್ ಉಪಸ್ಥಿತರಿದ್ದರು.

ಇದಕ್ಕೆ ಕೌಂಟರ್ ನೀಡಿದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಆಗಮಿಸಿ, ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಕಾರಣದಿಂದ ಸ್ಥಳದಲ್ಲಿ ಮತ್ತೊಂದು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಬೆಳಿಗ್ಗೆಯಿಂದಲೇ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆಯುತ್ತಿರುವುದರಿಂದ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಎಸ್.ಪಿ. ಶೇಷಾದ್ರಿ, ಕೆ. ರಂಗನಾಥ್, ಹೆಚ್.ಪಿ. ಗಿರೀಶ್, ಕೇಶವ್ ಮತ್ತು ಬಾಬು ಸೇರಿದಂತೆ ಯುವ ಕಾಂಗ್ರೆಸ್ ಪ್ರಮುಖರನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿನ ಘಟನೆಗೆ ಸಂಬಂಧಿಸಿ ಇಬ್ಬರು ಪಕ್ಷಗಳ ನಾಯಕರ ವಿರುದ್ಧ FIR ದಾಖಲೆ ಮಾಡಲಾಯಿತು ಮತ್ತು ಕಠಿಣ ಕ್ರಮ ಕೈಗೊಳ್ಳಲಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





