ರಿಪ್ಪನ್ಪೇಟೆ ; ಪರಮಪೂಜ್ಯ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಪರಮಶಿಷ್ಯ, ವಾತ್ಸಲ್ಯಮೂರ್ತಿ ಶ್ರೀ 108 ಗುಣನಂದಿ ಮಹಾರಾಜರ ಶಿಷ್ಯ, ಆಚಾರ್ಯ ಶ್ರೀ 108 ಗುಣಭದ್ರನಂದಿ ಮಹಾರಾಜರ ಸಸಂಘಸ್ಥರಾಗಿ ಅತಿಶಯ ಶ್ರೀಕ್ಷೇತ್ರ ಹೊಂಬುಜಕ್ಕೆ ಪುರಪ್ರವೇಶಗೈದರು.
ಗಣಿನೀ ಆರ್ಯಿಕಾ ಶ್ರೀ 105 ಆದಿತ್ಯಶ್ರೀ ಮಾತಾಜಿ, ಆರ್ಯಿಕಾ ಶ್ರೀ 105 ನಿತ್ಯಶ್ರೀ ಮಾತಾಜಿ, ಆರ್ಯಿಕಾ ಶ್ರೀ 105 ಮೈತ್ರಿಶ್ರೀ ಮಾತಾಜಿಯವರು 28-02-2025ನೇ ಶುಭ ಶುಕ್ರವಾರದಂದು ಬೆಳಿಗ್ಗೆ 8.00 ಗಂಟೆಗೆ ಮಂಗಲ ಪ್ರವೇಶ ಮಾಡಿದರು. ಅಂದು ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ದರ್ಶನ ಪಡೆದರು.
ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಮುನಿಶ್ರೀಯವರನ್ನು, ಆರ್ಯಿಕಾ ಮಾತಾಜಿಯವರನ್ನು ಸ್ವಾಗತಿಸಿ, ಧರ್ಮ ಚರ್ಚೆ ನಡೆಸಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯೆಯರು, ಊರ ಶ್ರಾವಕ-ಶ್ರಾವಿಕೆಯರು, ಪರವೂರ ಭಕ್ತಾ ವೃಂದದವರು ವಾದ್ಯಗೋಷ್ಠಿ, ಜಯಘೋಷಗಳೊಂದಿಗೆ ಮುನಿಶ್ರೀಗಳವರ ಸಂಘದವರನ್ನು ಭಕ್ತಿ ಗೌರವಾದರಗಳೊಂದಿಗೆ ಬರಮಾಡಿಕೊಂಡರು.