ಶಿವಮೊಗ್ಗ ; ಖಾಸಗಿ ಬಸ್ ಬೈಕಿಗೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ತಾಯಿ-ಮಗು ಸಾವನ್ನಪ್ಪಿರುವ ಘಟನೆ ತುಪ್ಪೂರು ಬಳಿ ನಡೆದಿದೆ.
ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದಂತ ಗಜಾನನ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದೆ. ಹಿಂಬದಿಯಲ್ಲಿ ಕುಳಿತ್ತಿದ್ದ ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ತಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬುಕ್ಕಂಬೂದಿಯಿಂದ ಸಾಗರಕ್ಕೆ ಬೈಕಿನಲ್ಲಿ ತೆರಳುವಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅಸ್ಮಾಭಾನು (30) ಮತ್ತು ಮೂರು ವರ್ಷದ ಮಗು ಮಹಮ್ಮದ್ ಖಬೀರ್ ಸಾವನ್ನಪ್ಪಿದ್ದಾರೆ.
ಬೈಕ್ ಓಡಿಸುತ್ತಿದ್ದ ಖಲಂದರ್ ಪಾಶರಿಗೆ ಏಕಾಏಕಿ ಹಿಂಬದಿಯಲ್ಲಿದ್ದ ಬಸ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಮೂರು ವರ್ಷದ ಮಗು ಮಹಮ್ಮದ್ ಖಬೀರ್ ಸಾವನ್ನಪ್ಪಿದ್ದಾನೆ. ಸಾಗರದ ಪ್ರಾರ್ಥನಾ ಮಂದಿರಕ್ಕೆ ಈ ನಾಲ್ವರು ಬೈಕಿನಲ್ಲಿ ತೆರಳುತ್ತಿದ್ದರು.

ಅಸ್ಮಾಬಾನು ಮತ್ತು ಖಲಂದರ್ ಮತ್ತೋರ್ವ 6 ವರ್ಷದ ಬಾಲಕ ಗಂಭೀರ ಗಾಯವಾಗಿದ್ದು ತಕ್ಷಣ ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಅಸ್ಮಬಾನು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಗಾಯಾಳು 6 ವರ್ಷದ ಗಂಡು ಮಗುವಿಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಖಲಂದರ್ ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಸಂಜೆ 4.35ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.