ಸರ್ಕಾರಿ ಜಾಗದಲ್ಲಿ ಅಕ್ರಮ ಮರ ಕಡಿತಲೆ ಪ್ರಕರಣ ; ಹೊಸನಗರ ಅರಣ್ಯಾಧಿಕಾರಿಗಳಿಂದ ಆರೋಪಿ ಬಂಧನ !

Written by Mahesha Hindlemane

Published on:

ಹೊಸನಗರ ; ಸರ್ಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಲಕ್ಷಾಂತರ ರೂ. ಬೆಲೆಯ ಮರಗಳನ್ನು ಕಡಿದು ನಾಟ ಹಾಗೂ ಸೌದೆಯನ್ನಾಗಿ ಪರಿವರ್ತಿಸಿ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಹೊಸನಗರ ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ‌ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಏನಿದು ಪ್ರಕರಣ ?

📢 Stay Updated! Join our WhatsApp Channel Now →

ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಹೊನ್ನೇಬೈಲು ಗ್ರಾಮದ ಸ.ನಂ 99ರ ಗೋಮಾಳ ಪ್ರದೇಶದಲ್ಲಿ ಅಕ್ರಮ ಒತ್ತುವರಿ ನಡೆದಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ಮೇ 12 ರಂದು ದಾಳಿ ನಡೆಸಿದ್ದರು. ಈ ವೇಳೆ ನಿಟ್ಟೂರು ನಿವಾಸಿ ಸುರೇಶ ಎನ್.ಜಿ (50) ಎಂಬುವವರು ಲಕ್ಷಾಂತರ ರೂ. ಬೆಲೆಯ ಬೀಟೆ ಹಾಗೂ ಇತರೆ ಕಾಡು ಜಾತಿಯ ಮರಗಳನ್ನು ಬುಡಸಮೇತ ಕಿತ್ತು, ಅವುಗಳನ್ನು ಅಕ್ರಮವಾಗಿ ನಾಟ ಮತ್ತು ಸೌದೆಯನ್ನಾಗಿ ಪರಿವರ್ತಿಸಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ಅರಣ್ಯ ಕಾನೂನು 1969ರ ಅಡಿಯಲ್ಲಿ ಹೊಸನಗರ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ದಾಳಿಯ ವೇಳೆ ಪತ್ತೆಯಾದ ಬೀಟೆ ಸೇರಿದಂತೆ ವಿವಿಧ ಜಾತಿಯ ನಾಟ ಹಾಗೂ ಸೌದೆಯನ್ನು ಇಲಾಖಾ ವಶಕ್ಕೆ ಪಡೆದು ಅಮಾನತುಪಡಿಸಿಕೊಳ್ಳಲಾಗಿತ್ತು.

ಪ್ರಕರಣ ದಾಖಲಾದ ದಿನದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸುರೇಶನನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು, ಮೇಲಾಧಿಕಾರಿಗಳ ನಿರ್ದೇಶನದಂತೆ ಮೇ 14 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್, ಉಪ ವಲಯ ಅರಣ್ಯಾಧಿಕಾರಿಗಳಾದ ಆಂಜನೇಯ ಎ ಜಿ, ಬಸವರಾಜ್ ಜಿಗಳಿಕೊಪ್ಪ, ಹಾಲಪ್ಪ ಕೆ ಆನವೇರಿ, ಕ್ಷೇಮಾಭಿವೃದ್ಧಿ ನೌಕರರಾದ ಕೃಷ್ಣಮೂರ್ತಿ ಕೆ ಆರ್ ಹಾಗೂ ಅರಣ್ಯ ಇಲಾಖೆಯ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Comment