ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದ ರಾಮನಾಮ ತಾರಕ ಹೋಮ
ಕಳಸ: ತಾಲ್ಲೂಕಿನ ಹೆಮ್ಮಕ್ಕಿ ಗ್ರಾಮದ ಶ್ರೀಸೋಮೇಶ್ವರ ಹಾಗೂ ಶ್ರೀಭದ್ರಕಾಳಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಹಾಗೂ ಅನಂತರಾಮ ಭಟ್ ಇವರ ಸಮುಖದಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಗ್ರಾಮಸ್ಥರು ಸೇರಿ, ಶ್ರೀ ಸೋಮೇಶ್ವರ ದೇವಸ್ಥಾನದಿಂದ ಶ್ರೀ ಭದ್ರಕಾಳಿ ಅಮ್ಮನವರ ದೇವಸ್ಥಾನದವರೆಗೆ ಶ್ರೀರಾಮನ ಸಂಕೀರ್ತನೆಯೊಂದಿಗೆ ಭವ್ಯ ರಥದಲ್ಲಿ ಶ್ರೀರಾಮನ ಮೆರವಣಿಗೆಯನ್ನು ನಡೆಸಲಾಯಿತು.
ನಂತರ ಶ್ರೀಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ ರಾಮ ತಾರಕ ಹೋಮ, ಭಜನೆ, ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸುವುದರ ಜೊತೆಗೆ, ಗ್ರಾಮದಲ್ಲಿನ ಮಕ್ಕಳಿಂದ ಶ್ರೀರಾಮನ ಹಾಡುಗಳಿಗೆ ನೃತ್ಯ ರೂಪದ ಕಾರ್ಯಕ್ರಮದ ಮೂಲಕ ಭಕ್ತಿಯ ನಮನವನ್ನ ಸಲ್ಲಿಸಿದರು.
ದೇವಸ್ಥಾನದ ಆವರಣದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಶ್ರೀರಾಮನ ಪ್ರಾಣಪ್ರತಿಷ್ಠಾನೆ ಕಾರ್ಯಕ್ರಮವನ್ನು ಎಲ್.ಇ.ಡಿ ಪರದೆಯ ಮೂಲಕ ನೇರ ಪ್ರಸಾರದ ವ್ಯವಸ್ಥೆಯನ್ನು ಅಲ್ಲಿ ನೆರೆದಿದ್ದ ಹೆಮ್ಮಕ್ಕಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಎಲ್ಲಾ ಗ್ರಾಮದ ಭಕ್ತರಿಗೆ ಒದಗಿಸಿಕೊಡಲಾಗಿತ್ತು.
ರಾಮ ತಾರಕ ಹೋಮದ ನಂತರ ಸಮಸ್ತ ಭಕ್ತಾದಿಗಳಿಗೆ ಪ್ರಸಾದ, ಪಾನಕ ಹಾಗೂ ಅನ್ನಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಮುಖಂಡರುಗಳು ಹಾಗೂ ಸಮಸ್ತ ಭಕ್ತರು ಭಾಗವಹಿಸಿದ್ದರು.