ಅಡಿಕೆಗೆ ಎಲೆಚುಕ್ಕೆ ಮತ್ತು ಹಳದಿ ರೋಗ ; ರೈತರಿಗೆ ನಷ್ಟದ ಪರಿಹಾರ ನೀಡಲು ಆಮ್ಆದ್ಮಿ ಆಗ್ರಹ

0 113

ಶಿವಮೊಗ್ಗ: ಅಡಿಕೆಯ ಎಲೆಚುಕ್ಕೆ ರೋಗ ಮತ್ತು ಹಳದಿ ರೋಗದಿಂದ ರೈತರಿಗೆ ನಷ್ಟವಾಗಿದ್ದು ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ ಆಗ್ರಹಿಸಿದ್ದಾರೆ.

ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿ ವಿಜ್ಞಾನ ಸಾಕಷ್ಟು ಬೆಳೆದಿದ್ದರೂ ಕೂಡ ಈ ರೋಗಗಳನ್ನು ತಡೆಯಲು ಆಗುತ್ತಿಲ್ಲ. ತೋಟಗಾರಿಕೆ ಅಧಿಕಾರಿಗಳು ಕೂಡ ವಿಫಲರಾಗಿದ್ದಾರೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಬೇರೆ ಕೈಕೊಟ್ಟಿದೆ. ಅಡಿಕೆಯ ಜೊತೆಗೆ ಜೋಳ, ಭತ್ತ, ರಾಗಿ, ಶುಂಠಿ, ಕಬ್ಬು ಬೆಳೆ ಕೂಡ ಹಾಳಾಗಿದೆ. ಸರ್ಕಾರ ಇಂತಹ ಸಂದರ್ಭದಲ್ಲಿ ರೈತರಿಗೆ ಎಕರೆಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದರು.

ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಮಾತನಾಡಿ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬಂಧನವನ್ನು ನಾವು ಖಂಡಿಸುತ್ತೇವೆ. ಕೇಂದ್ರದ ಸಾಕುಪ್ರಾಣಿಯಂತಾಗಿರುವ ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳ ಹೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಕೇಂದ್ರದಲ್ಲಿ ಭೋವಿ ಸರ್ಕಾರ ಬಂದ ಮೇಲೆ ಅವರ ವಿರುದ್ಧ ಧ್ವನಿ ಎತ್ತಿದವರನ್ನೆಲ್ಲಾ ದಮನ ಮಾಡಲು ಈ ರೀತಿಯ ತಂತ್ರಗಾರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣದಿಂದ ಯಾವ ಸಾಕ್ಷಿಯೂ ಇಲ್ಲದೇ, ಸಂಜಯ್ ಸಿಂಗ್ ಅವರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ:

ಸಂಜಯ್ ಸಿಂಗ್ ಬಂಧನ ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮತ್ತು ಮನವಿ ನೀಡುವ ಸಂದರ್ಭದಲ್ಲಿ ಪ್ರಮುಖರಾದ ಸುರೇಶ್ ಕೋಟೆಕರ್, ಮಂಜುನಾಥ್, ಲಿಂಗರಾಜ್, ಜಗದೀಶ್, ಹರೀಶ್, ಶೋಭಾ, ಹಸನಬ್ಬ, ಗಣೇಶ್, ದಿಲ್ ಶಾದ್ ಬೇಗಂ, ಇಮ್ತಿಯಾಜ್, ರಾಮಕೃಷ್ಣ, ಮೊಹಮ್ಮದ್ ಯೂಸುಫ್ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!