ಪ್ರಪಂಚದಲ್ಲಿ ಭಾರತೀಯರು ಎಂದು ಹೇಳಲು ಇರುವುದು ಒಂದೇ ರಾಷ್ಟ್ರ ; ಪಟ್ಲ ಸತೀಶ್ ಶೆಟ್ಟಿ

0 402

ಹೊಸನಗರ : ಭಾರತೀಯರು ಎಲ್ಲರೂ ಒಟ್ಟಾಗಿ ನಡೆಯಬೇಕು. ನಮಗೆ ಪ್ರಪಂಚದಲ್ಲಿ ಭಾರತೀಯರು ಎಂದು ಹೇಳಲು ಒಂದೇ ರಾಷ್ಟ್ರ ಇರುವುದು. ಅದೇ ನಮ್ಮ ಹಿಂದೂ ರಾಷ್ಟ್ರ. ನಮ್ಮ ರಾಷ್ಟ್ರದ ಸಂಸ್ಕೃತಿಗೆ, ಸನಾತನ ಧರ್ಮಕ್ಕೆ ಹಾಗೂ ನಮ್ಮ ಹಿಂದೂಗಳ ಸ್ವಾಭಿಮಾನಕ್ಕೆ, ಆತ್ಮ ಗೌರವಕ್ಕೆ ದಕ್ಕೆಯಾದಾಗ ಮಾತ್ರ ನಾವು ಅದರ ವಿರುದ್ದ ಸೆಟೆದು ನಿಲ್ಲುತ್ತೇವೆ ಎಂದು ಯಕ್ಷರಂಗದ ದ್ರುವತಾರೆ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಹೊಸನಗರದ ನೆಹರೂ ಮೈದಾನದಲ್ಲಿ ನಡೆದ ಮಲೆನಾಡು ವಾಯ್ಸ್ ಪತ್ರಿಕೆಯ 16ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅವರು ಹಿಂದೂ ರಾಷ್ಟ್ರ ಹಾಗೂ ಸನಾತನ ಧರ್ಮದ ಶ್ರೇಷ್ಟತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಭಾರತೀಯರಿಗೆ ಸದಾ ಹೆಮ್ಮೆಯಿಂದ ಹೇಳಲು ಭಾರತವೊಂದೆ ಇರುವುದು. ಇತರೆ ಧರ್ಮದವರಿಗೆ ಹತ್ತಾರು ದೇಶಗಳಿವೆ. ಆದುದರಿಂದ ನಮ್ಮ ದೇಶದ ಸಂಸ್ಕೃತಿ ಹಾಗೂ ಸನಾತನ ಧರ್ಮದ ವಿಚಾರವನ್ನು ದ್ವೇಷಿಸುವವರು ಅತ್ಯಂತ ಕಠಿಣ ವಿರೋಧವನ್ನು ಎದುರಿಸಬೇಕಾಗುತ್ತದೆ. ಆದುದರಿಂದ ನಾವೆಲ್ಲರೂ ಸದಾ ಭಾರತೀಯರಾಗಿ ನಮ್ಮ ನಮ್ಮ ಧರ್ಮದ ಪಾಲನೆ ಆರಾಧನೆಯ ಜೊತೆಗೆ ಇತರೆ ಧರ್ಮದ ಬಗ್ಗೆ ಗೌರವಯುತವಾಗಿ ನಡೆದು ಎಲ್ಲರೂ ಸಾಮರಸ್ಯ ಹಾಗೂ ಸಹಬಾಳ್ವೆಯಿಂದ ಬದುಕಿದರೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.

ಬಹಳ ಅಪರೂಪಕ್ಕೆ ವೇದಿಕೆ ಹಂಚಿಕೊಂಡ ಅವರು ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಅದು ನಮಗೆ ನಮಗೆ ಧರ್ಮ ಮತ್ತು ನ್ಯಾಯದ ಮಾರ್ಗವನ್ನು ತೋರುತ್ತದೆ ಎಂದರು.
ಯಕ್ಷಗಾನದ ಮೂಲಕ ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ಪ್ರಪಂಚದ ಹತ್ತಾರು ದೇಶಗಳಿಗೆ ಬಿತ್ತರಿಸಲಾಗುತ್ತಿದೆ. ಪ್ರಪಂಚದ ಅನೇಕ ದೇಶಗಳಲ್ಲಿ ಈ ಕಲೆಯನ್ನು ನಮ್ಮ ತಂಡದ ಮೂಲಕ ಪ್ರದರ್ಶನ ಮಾಡಲಾಗುತ್ತಿದೆ. ಹಾಗೆಯೇ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ದೇಶ ಹಾಗೂ ಸಂಸ್ಕೃತಿ ಬಗ್ಗೆ ಗೌರವದಿಂದ ನಡೆದುಕೊಂಡು, ಯಕ್ಷಗಾನ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಈ ದೇವತಾ ಕಲೆಯನ್ನು ಉಳಿಸಿ ಬೆಳೆಸಲು ಸಹಕರಿಸುವಂತೆ ಪಟ್ಲ ಸತೀಶ್ ಕರೆ ನೀಡಿದರು.

ಮೂಲೆಗದ್ದೆ ಮಠದ ಅಭಿನವ ಚನ್ನಬಸಪ್ಪ ಸ್ವಾಮೀಜಿಗಳು ಆಶೀರ್ವಚನ ನೀಡಿ, ಕಷ್ಟ – ಸುಖಗಳ ನಡುವೆ ತಾಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಬೆಳಕು ಚೆಲ್ಲುತ್ತಾ, ಜನರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಪತ್ರಿಕೆ ಗೌರವ ಹೆಚ್ಚಿಸಿಕೊಂಡಿದೆ. ಜೊತೆಯಲ್ಲಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸುವ ಕಾರ್ಯ ನಿಜಕ್ಕೂ ಹೆಮ್ಮೆ ಸಂಗತಿ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ವಿಚಾರದಲ್ಲಿ ನಾಗರೀಕ ಸಮಾಜಕ್ಕೆ ಕಾನೂನು ಮತ್ತು ಹಕ್ಕುಗಳ ಅನ್ವಯ ಪಡೆಯಬೇಕಾದ ಸವಲತ್ತುಗಳು ಹಾಗೂ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಜನರ ಪರವಾಗಿ ಕೆಲಸ ಮಾಡುವ ದೇಶದ ನಾಲ್ಕನೇ ಬಹುದೊಡ್ಡ ಅಂಗವಾಗಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಡಾ.ಶಾಂತರಾಮ್ ಪ್ರಭು, ಬಹಳ ಹಿಂದಿನಿಂದಲೂ ಮುದ್ರಣ ಮಾಧ್ಯಮಗಳು ಈ ದೇಶದ ಜನರ ಅಭಿವೃದ್ಧಿಗೆ ಕೈ ಜೋಡಿಸಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿವೆ. ಅದರ ನಡುವೆ ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ರಾಜಕೀಯ ಬೆಳವಣಿಗೆ ಸಾಧಿಸುವ ಕೆಲಸ ಮಾಡಿಕೊಂಡಿವೆ. ಮುದ್ರಣ ಮಾಧ್ಯಮಗಳು ಈ ದೇಶದ ಅಭಿವೃದ್ದಿ ವಿಚಾರದಲ್ಲಿ ನೈಜ ವರದಿಗಳ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ದೃಶ್ಯ ಮಾಧ್ಯಮಗಳು ಪ್ರವೇಶವಾದ ಮೇಲೆ ನ್ಯಾಯ ಧ್ವನಿಯಾಗಿ ನ್ಯಾಯ ಸಮ್ಮತ ಕೆಲಸ ಮಾಡುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಡಿ ಎಂ ದೇವರಾಜ್, ಸಾಮಾಜಿಕ ಕ್ಷೇತ್ರದಲ್ಲಿ ಸತೀಶ್ ಹೆಚ್ ಜಿ ಯಡೂರು, ಪುರುಷೋತ್ತಮ ಕಿಲಗಾರು, ನಾಗೇಂದ್ರ ಗೌಡ, ಬೆಂಕಿ ಶೇಖರಪ್ಪ, ರಾಜಕೀಯ ಕ್ಷೇತ್ರದಲ್ಲಿ ಡಿ.ಟಿ ಕೃಷ್ಣಮೂರ್ತಿ, ಜಯಪ್ರಕಾಶ್ ಶೆಟ್ಟಿ ಕೋಡೂರು, ವೆಂಕಟಾಚಲ ಹೆಚ್ ಎಂ ಚಿಕ್ಕಜೇನಿ, ಚಾಬುಸಾಬು ರಿಪ್ಪನ್‌ಪೇಟೆ, ಕೃಷಿ ಕ್ಷೇತ್ರದಲ್ಲಿ ದೇವಿಪ್ರಸಾದ್ ಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಎಡ್ವರ್ಡ್ ಡಿಸೋಜಾ, ಗಂಗಾಧರ ವ.ಮ.ಅತ್ರೇಯ, ಚಂದ್ರ.ಸಿ, ಯಕ್ಷಗಾನ ಕ್ಷೇತ್ರದಲ್ಲಿ ನಾರಾಯಣ ಅರೋಡಿ, ಮಹಿಳಾ ಕ್ಷೇತ್ರದಲ್ಲಿ ಸುಮಾ ಸುಬ್ರಹ್ಮಣ್ಯ, ದೀಪಿಕಾ ಕೃಷ್ಣಜಯ, ಅನಿಲ್ ಹೆಗಡೆ, ಶಾರಾದಾ ಗೋಖಲೆ, ಎಂ.ಡಿ ಇಂದ್ರಮ್ಮ, ಭೀಮಗೌಡ
ಇವರುಗಳನ್ನು ‘ಮಲೆನಾಡು ರತ್ನ’ ಬಿರುದು ನೀಡಿ ಗೌರವಿಸಲಾಯಿತು.

ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಶಾಲೆ ಸಂಸ್ಥಾಪಕರಾದ ದೇವರಾಜ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪತ್ರಿಕೆಯ ಉಪಸಂಪಾದಕ ಮಾಸ್ತಿಕಟ್ಟೆ ವಾಸಪ್ಪ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ವಿನಾಯಕ ಪ್ರಭು ವಾರಂಬಳ್ಳಿ ವಂದಿಸಿದರು. ತಾರ ಸುರೇಶ, ಇಸ್ಮಾಯಿಲ್, ಗೌತಮ್ ಆಚಾರ್ಯ, ಈರಗೋಡು ಗೀರಿಶ್, ಅಶೋಕ್, ಶಶಿ, ಪತ್ರಕರ್ತರಾದ ಮಹೇಶ ಹಿಂಡ್ಲೆಮನೆ, ರಫಿ ರಿಪ್ಪನ್‌ಪೇಟೆ, ಸಬಾಸ್ಟಿನ್ ರಿಪ್ಪನ್‌ಪೇಟೆ ಇದ್ದರು‌. ನಂತರ ‘ಅಯೋಧ್ಯ ದೀಪ’ ಯಕ್ಷಗಾನ ನಡೆಯಿತು.

Leave A Reply

Your email address will not be published.

error: Content is protected !!