ಪ್ರತಿಪಕ್ಷಗಳಿಗೆ ತಾಕತ್ತಿದ್ದರೆ ಗ್ಯಾರಂಟಿ ಯೋಜನೆ ತಿರಸ್ಕರಿಸಿ ಎಂದು ಕರೆ ಕೊಡಿ ; ಸವಾಲೆಸೆದ ಡಿಸಿಎಂ ಡಿ.ಕೆ. ಶಿವಕುಮಾರ್
ಚಿಕ್ಕಮಗಳೂರು: ಕರ್ನಾಟಕದ ಜನರು ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಪ್ರತಿಪಕ್ಷಗಳಿಗೆ ತಾಕತ್ತಿದ್ದರೆ ಅವರ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಎಂದು ಕರೆ ಕೊಡಿ. ಜನ ತಿರಸ್ಕರಿಸಲು ಒಪ್ಪುತ್ತಾರೆಯೇ ನೋಡೋಣ ಎಂದು ಸವಾಲು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಕಿದರು.
ಅವರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿ ಇರುವ ತನಕ ಯಾರು ಸಹ ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ಮುಂದಿನ 10 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ಇರಲಿವೆ. ಕಾಂಗ್ರೆಸ್ ಬಡತನದ ವಿರುದ್ಧ ಯುದ್ದ ಮಾಡುತ್ತದೆ ಹೊರತು ಬಡವರ ವಿರುದ್ಧ ಯುದ್ದ ಮಾಡುವುದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಗಳಿಗೆ ವರ್ಷಕ್ಕೆ 50-60 ಸಾವಿರ ಉಳಿತಾಯವಾಗುತ್ತಿದೆ. ನಮ್ಮ ಸರ್ಕಾರ ರಚನೆ ಆದ ತಕ್ಷಣ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತೀರ್ಮಾನ ತೆಗೆದುಕೊಂಡೆವು. ಮೋದಿ ಅವರು ಕಪ್ಪು ಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಹೇಳಿದರು. ಹಣ ಬಂದಿದೆಯೇ? ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಹಣ ನೀಡಿದ್ದೇವೆ. ಅಭಿವೃದ್ದಿ ಯೋಜನೆಗಳಿಗೆ 1 ಲಕ್ಷದ 26 ಸಾವಿರ ಕೋಟಿ ರೂ. ಹಣವನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅಭಿವೃದ್ಧಿಗೆ ಹಣ ನೀಡಿಲ್ಲ ಎನ್ನುವ ಬಿಜೆಪಿಯವು ನನ್ನ ಬಳಿ ಬರಲಿ, ಎಲ್ಲೆಲ್ಲಿ,ಯಾವ, ಯಾವ ಕೆಲಸಗಳಿಗೆ ಹಣ ನೀಡಿದ್ದೇವೆ ಎಂದು ತೋರಿಸುತ್ತೇನೆ ಎಂದು ತಿಳಿಸಿ, ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಚಿಕ್ಕಮಗಳೂರು ಜಿಲ್ಲೆಯಿಂದ ಐದು ಶಾಸಕರನ್ನು ನೀಡಿದ ನಿಮ್ಮ ಋಣವನ್ನು ತೀರಿಸಲು ಹಾಗೂ ನಿಮಗೆ ಕೃತಜ್ಞತೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಭದ್ರಾ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಇದುವರೆಗೂ ಒಂದೇ ಒಂದು ರೂಪಾಯಿ ನೀಡಿಲ್ಲ. ಕಾಂಗ್ರೆಸ್ ಪಕ್ಷದ 136 ಶಾಸಕರು, ವಿಧಾನಪರಿಷತ್ ಸದಸ್ಯರು ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ನಡೆಸಿದೆವು. ಬಿಜೆಪಿ ಮತ್ತು ಜೆಡಿಎಸ್ ಸಂಸದರು ಬಾಯಿ ತೆಗೆಯಲೇ ಇಲ್ಲ ಎಂದು ತಿಳಿಸಿದರು.