ರೋಟರಿ ಜಿಲ್ಲಾ ಸಮ್ಮೇಳನ ‘ನಿಸರ್ಗ ನಿನಾದ’ | ಸೇವಾ ಮನೋಭಾವ ಮನುಷ್ಯನಿಗೆ ಮುಖ್ಯ ; ಗುಣನಾಥ ಸ್ವಾಮೀಜಿ

0 194

ಚಿಕ್ಕಮಗಳೂರು : ಸೇವಾಮನೋಭಾವ ಮನುಷ್ಯನಿಗೆ ಮುಖ್ಯ. ರೋಟರಿ ಸೇವೆಯ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠಾಧ್ಯಕ್ಷ ಶ್ರೀ ಗುಣನಾಥಸ್ವಾಮೀಜಿ ನುಡಿದರು.

ಬಾಳೆಹೊನ್ನೂರು-ಚಿಕ್ಕಮಗಳೂರು ಮತ್ತು ರೋಟರಿ ಕಾಫಿಲ್ಯಾಂಡ್ ಸಂಯುಕ್ತಾಶ್ರಯದಲ್ಲಿ ಎಐಟಿ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಮೂರು ದಿನಗಳ ರೋಟರಿ 3182 ಜಿಲ್ಲಾ ಸಮ್ಮೇಳನ ‘ನಿಸರ್ಗ ನಿನಾದ’ವನ್ನು ಭಾನುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿ, ಅಗತ್ಯವಿರುವವರಿಗೆ ಅಗತ್ಯ ಸೇವೆಯನ್ನು ಒದಗಿಸುವ ಕ್ರಮ ರೋಟರಿಯಲ್ಲಿದೆ. ಯಾವುದೇ ಸಂಘ ಸಂಸ್ಥೆಯು ನಿಸ್ವಾರ್ಥವಾಗಿ ಮನಮುಟ್ಟುವಂತೆ ಸೇವೆ ಸಲ್ಲಿಸಿದರೆ ಬಹುಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಜಾತಿ, ಧರ್ಮ, ರಾಜಕೀಯ ಎಲ್ಲವನ್ನೂ ಬಿಟ್ಟು ಸೇವೆಗೆ ಹೊರಟಾಗ ಅದಕ್ಕೊಂದು ನೆಲೆ-ಬೆಲೆ. ಮನಸ್ಸು ಮಾಡಿದರೆ ಕಪ್ಪುಚುಕ್ಕಿ ಬಾರದಂತೆ ಅಂತರರಾಷ್ಟ್ರೀಯ ಸಂಸ್ಥೆಯನ್ನು ಮುನ್ನಡೆಸಬಹುದೆಂಬುದಕ್ಕೆ ರೋಟರಿ ನಿದರ್ಶನವಾಗಿದೆ ಎಂದರು.

ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಅಂತರರಾಷ್ಟ್ರೀಯ ರೋಟರಿಕ್ಲಬ್ ಮಾಜಿ ಅಧ್ಯಕ್ಷ ಕಲ್ಕತ್ತದ ಕಲ್ಯಾಣ ಬ್ಯಾನರ್ಜಿ ಪೌಲ್‌ಹ್ಯಾರೀಸ್ ಸ್ನೇಹಕ್ಕಾಗಿ ಆರಂಭಿಸಿದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ವಿಭಿನ್ನ ವೃತ್ತಿ ಮತ್ತು ಸ್ವಭಾವದ ಒಳ್ಳೆಯ ಸ್ನೇಹಿತರು ಒಟ್ಟಾಗಿ ಕಲೆತು, ಒಟ್ಟಾಗಿ ಆಲೋಚಿಸಿ ಕೌಶಲ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಒಂದಷ್ಟು ಸೇವಾಕರ‍್ಯವನ್ನು ಮನುಕುಲಕ್ಕೆ ಸಲ್ಲಿಸುವ ಅಪೂರ್ವ ವೇದಿಕೆಯೆ ರೋಟರಿ ಎಂದರು.

ಸೇವೆ, ಐಕ್ಯತೆ, ಬಾಂಧವ್ಯ, ವಿಭಿನ್ನತೆ, ನಾಯಕತ್ವ ಮತ್ತಿತರ ವಿಶಿಷ್ಟ ಗುಣಲಕ್ಷಣಗಳಿಂದ 120 ವರ್ಷ ಮುನ್ನಡೆದಿರುವ ರೋಟರಿ ಬದುಕಿಗೆ ಭರವಸೆ ತುಂಬುತ್ತದೆ ಎಂದ ಕಲ್ಯಾಣಬ್ಯಾನರ್ಜಿ, ಸಂತೋಷ, ಸೇವೆ, ಕಠಿಣ ಪರಿಶ್ರಮ, ಒಳ್ಳೆಯ ಜೀವನ ನಮ್ಮದಾಗಬೇಕು. ಪೋಲಿಯೋನಂತಹ ಮಾರಿಯನ್ನು ಹೊರಗಟ್ಟುವಲ್ಲಿ ರೋಟರಿಯ ನೆರವು ಮರೆಯಲಾಗದು. ಭೂಕಂಪ, ಪ್ರವಾಹ ಸೇರಿದಂತೆ ಜನಸಮುದಾಯ ಸಂಕಷ್ಟದ ಸಂದರ್ಭಗಳಲ್ಲಿ ರೋಟರಿಯ ನೆರವು ಸದಾ ಮುಂದಿರುತ್ತದೆ ಎಂದರು.

ರೋಟರಿ ಅಂತರರಾಷ್ಟ್ರೀಯ ಅಧ್ಯಕ್ಷರ ಸಮ್ಮೇಳನ ಪ್ರತಿನಿಧಿ ಗುಜರಾತಿನ ಸಂತೋಷ್‌ಪ್ರಧಾನ್ ಮಾತನಾಡಿ ವಿಶ್ವದ 200ಕ್ಕೂಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ ರೋಟರಿ ನೊಂದುಬೆಂದವರ ಮುಖದಲ್ಲಿ ನಗು ಮೂಡಿಸಲು ಶ್ರಮಿಸುತ್ತಿದೆ. ರೋಟರಿ ಫೌಂಡೇಷನ್ ವಿಶ್ವದ ಅತಿದೊಡ್ಡ ನೆರವು ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಪ್ರಕೃತಿಯ ಮಡಿಲಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಹರ್ಷದಾಯಕ ಎಂದರು.

ರೋಟರಿ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಮಾತನಾಡಿ ಚಿಕ್ಕಮಗಳೂರಿನಲ್ಲಿ ಪ್ರಥಮಬಾರಿಗೆ ರೋಟರಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ದಾಖಲೆಯಾಗಿದೆ. ಜಿಲ್ಲೆಯ 2ನೆಯ ರಾಜ್ಯಪಾಲೆಯಾಗಿ ಅವಿರೋಧವಾಗಿ ಆಯ್ಕೆಮಾಡಿದ್ದು, 8ನೆಯ ಸಮ್ಮೇಳನ ಮೂರು ಕ್ಲಬ್‌ಗಳ ಸಹಭಾಗಿತ್ವದೊಂದಿಗೆ ಅರ್ಥಪೂರ್ಣವಾಗಿ ಆಯೋಜನೆಗೊಂಡಿದೆ ಎಂದರು.

ರೋಟರಿ 3182 ಜಿಲ್ಲೆಯಿಂದ ಖಾಸಗಿ ಹಣಕಾಸುಸಂಸ್ಥೆ ಸಹಯೋಗದೊಂದಿಗೆ ಹತ್ತು ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಐದು ಲಕ್ಷ ರೂ.ವೆಚ್ಚದೊಂದಿಗೆ ಸ್ಥಾಪಿಸಲಾಗುತ್ತಿದೆ. ಮೌಲ್ಯಾಧಾರಿತ ಶಿಕ್ಷಣ, ಭೂಸಾರ ಸಂರಕ್ಷಣೆ, ಇ-ತ್ಯಾಜ್ಯ ನಿರ್ವಹಣೆ ಮತ್ತು ಸುರಕ್ಷಾಸಂಚಾರ ಕುರಿತಂತೆ ಈವರ್ಷ ಜಾಗೃತಿ ಮೂಡಿಸುವ ಕರ‍್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ ಎಂದ ಬಿ.ಸಿ.ಗೀತಾ, ನಿಸರ್ಗ ನಿನಾದದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯ 87ರೋಟರಿ ಕ್ಲಬ್‌ಗಳೂ ಭಾಗವಹಿಸಿದ್ದು, 1,400ಕ್ಕೂ ಹೆಚ್ಚು ಪ್ರತಿನಿಧಿಗಳು ನೊಂದಾವಣೆಗೊಂಡಿದ್ದಾರೆಂದರು.

ಜಿಲ್ಲಾ ತರಬೇತುದಾರ ಅಭಿನಂದನಶೆಟ್ಟಿ ಪ್ರಾಸ್ತಾವಿಸಿದರು. ಸ್ವಾಗತ ಸಮಿತಿಅಧ್ಯಕ್ಷ ನಂಜುಂಡಸ್ವಾಮಿ ಸ್ವಾಗತಿಸಿ, ಜಿಲ್ಲಾಕರ‍್ಯದರ್ಶಿ ಪ್ರೀತಿ ಮೋಹನ್ ವಂದಿಸಿದರು.

ರೂಪಾ ಅಶ್ವಿನ್ ಪ್ರಾರ್ಥಿಸಿದರು. ಚುನಾಯಿತ ಜಿಲ್ಲಾಗರ‍್ನರ್ ದೇವಾನಂದ, ಡಿಜಿಎನ್ ಪ್ರತಿನಿಧಿ ಕೆ.ಪಾಲಾಕ್ಷ, ಜಿಲ್ಲಾಕೌನ್ಸಿಲರ್ ಡಿ.ಎಸ್.ರವಿ, ಬಿ.ಎಂ.ಭಟ್, ಕಾರ‍್ಯದರ್ಶಿ ಗುರುಮೂರ್ತಿ, ಬಾಳೆಹೊನ್ನೂರು ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ಚಿಕ್ಕಮಗಳೂರು ರೋಟರಿ ಅಧ್ಯಕ್ಷ ಶ್ರೀವತ್ಸವ ನಟರಾಜ್, ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ತನೂಜ್ ಮತ್ತಿತರರು ವೇದಿಕೆಯಲ್ಲಿದ್ದರು.

Leave A Reply

Your email address will not be published.

error: Content is protected !!