ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಶ್ರೇಷ್ಠ ಗ್ರಂಥ ; ಪ್ರೀತ್ರೇಶ್

0 29


ಚಿಕ್ಕಮಗಳೂರು : ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಶ್ರೇಷ್ಠ ಗ್ರಂಥವಾಗಿದ್ದು, ಎಲ್ಲರಿಗೂ ಮಾರ್ಗದರ್ಶಕ. ಅವರ ಬದುಕಿನ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತ್ರೇಶ್ ಹೇಳಿದರು.


ನಗರದ ಜಿಲ್ಲಾ ಕಾರಾಗೃಹದಲ್ಲಿ ವಂದೇ ಮಾತರಂ ಟ್ರಸ್ಟ್, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕೃಷ್ಣ ಒಬ್ಬ ಶ್ರೇಷ್ಠ ಗುರು, ತನ್ನ ಇಡೀ ಜೀವನದಲ್ಲಿ ಲೋಕಕ್ಕೆ ಉತ್ತಮ ಸಂದೇಶ ಸಾರಿದ ಮಾರ್ಗದರ್ಶಕ. ಆತನು ಬೋಧಿಸಿದ ಭಗವದ್ಗೀತೆಯಲ್ಲಿ ಜೀವನ ಸಂದೇಶ ನೀಡುವ ಹಲವಾರು ವಿಚಾರಗಳಿವೆ. ಅಂತಹ ಶ್ರೀಕೃಷ್ಣ ಸೆರೆಮನೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮವನ್ನು ಕಾರಾಗೃಹದಲ್ಲಿ ಆಚರಿಸಿ ಬಂಧಿಗಳ ಮನ ಪರಿವರ್ತನೆ ಮೂಡಿಸುವಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.


ಪ್ರಕೃತಿಯಲ್ಲಿ ಹಗಲು-ರಾತ್ರಿಗಳೆಂಬ ಪ್ರಾಕೃತಿಕ ನಿಯಮವನ್ನು ಶ್ರೀಕೃಷ್ಣ ಬೋಧಿಸಿದ್ದಾನೆ. ಜಗತ್ತಿನಲ್ಲಿ ಸಮಸ್ಯೆ ಗಳಲ್ಲಿ ಒಳಗಾಗುವವರು ಮತ್ತು ಸಿಕ್ಕಿಬೀಳುವವರು ಎರಡು ತರಹದ ಜನರಿದ್ದಾರೆ. ಬಹುತೇಕ ಜನರು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆದರೆ ಸಮಸ್ಯೆ ಬಂದಾಗ ಅವುಗಳಿಂದ ಯಾವ ರೀತಿಯಲ್ಲಿ ಹೊರಬರಬೇಕು ಎನ್ನುವ ಅದ್ಭುತ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾನೆ ಎಂದರು.


ಜೀವನದ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಇತರರಿಗೆೆ ಅವಲಂಬಿತರಾಗದೆ, ಬರುವ ಕಷ್ಟಗಳಿಗೆ ಸ್ವತಃ ಪರಿಹಾರ ಕಂಡುಕೊಳ್ಳಬೇಕು. ನಾವು ಮಾಡುವ ಕೆಲಸಗಳನ್ನು ಎಂತಹ ಪರಿಸ್ಥಿತಿ ಬಂದರೂ ಅತ್ಯಂತ ನಿಷ್ಠೆ, ಪ್ರಾಮಾ ಣಿಕವಾಗಿದ್ದರೆ ಪ್ರತಿಫಲವನ್ನು ಭಗವಂತ ನೀಡುತ್ತಾನೆ ಎನ್ನುವ ಸಂದೇಶವನ್ನು ಶ್ರೀಕೃಷ್ಣ ಜಗತ್ತಿಗೆ ಸಾರಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಆಕಸ್ಮಿಕ ವಾಗಿ ಜರುಗುವ ತಪ್ಪುಗಳಿಗೆ ಕಾರಾಬಂಧಿಗಳಾಗುವವರು ಮನಪರಿವರ್ತನೆಗೆ ಸೂಕ್ತವಾದ ಸ್ಥಳ ಕಾರಾಗೃಹ. ಶ್ರೀಕೃಷ್ಣನು ಸೆರೆವಾಸದಲ್ಲೇ ಜನ್ಮಿಸಿ ಇಡೀ ವಿಶ್ವಕ್ಕೆ ಪ್ರಸಿದ್ಧಿಯಾದವರು. ಆ ನಿಟ್ಟಿನಲ್ಲಿ ಕಾರಾಬಂಧಿಗಳು ಯಾವುದೇ ಕೀಳರಿಮೆ ಹೊಂದದೇ ಮುಂದಿನ ದಿನಗಳಲ್ಲಿ ಭಗವಂತ ನಾಮಸ್ಮರಣೆಯಿಂದ ಮುನ್ನಡೆಯಬೇಕು ಎಂದರು.


ಇದೇ ವೇಳೆ ದಾಸ ಸಾಹಿತ್ಯ ಭಜನಾ ಮಂಡಳಿ ಸಂಚಾಲಕ ಉದಯಸಿಂಹ ಅವರು ಕಾರಾಬಂಧಿಗಳಿಗೆ  ಭಜನೆ, ದಾಸಸಾಹಿತ್ಯದ ಮೂಲಕ ಮನರಂಜಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹ ಜೈಲರ್ ಎಂ.ಕೆ.ನೆಲಧರಿ, ವಂದೇ ಮಾತರಂ ಟ್ರಸ್ಟ್ ಪಿಆರ್‌ಓ ನವೀನ್, ಮಹಿಳಾ ಕಾರ್ಯದರ್ಶಿ ಶ್ರೀಮತಿ ಚೈತ್ರ, ಕಾರಾಗೃಹ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.

ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿಸಬಲ್ಲ ಶಕ್ತಿ ಶಿಕ್ಷಕರಿಗಿದೆ : ಮೇಟಿ
ಚಿಕ್ಕಮಗಳೂರು : ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿಸಬಲ್ಲ ಶಕ್ತಿ ಹೊಂದಿರುವವರು ಹಾಗೂ ವಿದ್ಯಾರ್ಥಿಯನ್ನು ಪ್ರಪಂಚಕ್ಕೆ ಪರಿಚಯಿಸುವುದಲ್ಲದೇ ಅಂತರಂಗದ ಶಕ್ತಿಯನ್ನು ತುಂಬುವ ಪಾತ್ರ ನಿಭಾ ಯಿಸುವವರು ಶಿಕ್ಷಕರು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಹೇಳಿದರು.


ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಗುರುಕೃಪಾ ಸಂಗೀತ ಕಲಾ ತಂಡ ಚಿಕ್ಕಮಗಳೂರು ವತಿಯಿಂದ ಮಂಗಳವಾರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ ಮನಪರಿವರ್ತನೆಯಲ್ಲಿ ಭಾವಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ. ಅಧ್ಯಯನಶೀಲತೆ ಅಧ್ಯಾಪಕನಿಗೆ ಅತ್ಯಗತ್ಯ.  ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅರಿವಿಲ್ಲದಂತೆ ವೇದಿಕೆ ಮುಂದೆ ಸಾದರಪಡಿಸುವಲ್ಲಿ ಹಾಗೂ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿ ಭರವಸೆಯ ದಾರಿ ಮೂಡಿಸುವವರು ಅಧ್ಯಾಪಕ ವೃಂದದವರು ಎಂದರು.


ಶಿಕ್ಷಣವು ಪ್ರತಿಯೊಬ್ಬರ ವ್ಯಕ್ತಿತ್ವ ಬದಲಾಯಿಸುತ್ತದೆ. ಇಲ್ಲಿನ ಕೈದಿಗಳು ವಿದ್ಯಾರ್ಥಿಗಳಿದ್ದಂತೆ ಕಲಿತ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅಪರಾಧಮುಕ್ತ ರಾಯಭಾರಿಗಳಾಗಿ ಗುರುತಿಸಿಕೊಳ್ಳಬೇಕು ಎಂದರು.


ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಗಣೇಶ್ ಮಾತನಾಡಿ ಜೈಲಿನ ಕೈದಿಗಳು ಕೆಟ್ಟ ಆಲೋಚನೆಗಳಿಂದ ಹೊರಬಂದು ಮನಪರಿವರ್ತನೆ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕಾರಾಗೃಹ ಕೇಂದ್ರಗಳು ಮನಪರಿವರ್ತನೆ ತಾಣವಿದ್ದಂತೆ. ಜೀವನದಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಅವು ಮರುಕಳಿಸದಂತೆ ತಿದ್ದಿಕೊಂಡು ಸಮಾಜದಲ್ಲಿ ಬದುಕಬೇಕು. ಉತ್ತಮ ಆಲೋಚನೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಇದೇ ವೇಳೆ ಕಾರ್ಯಕ್ರಮದಲ್ಲಿ ಸುರೇಂದ್ರ ನಾಯಕ್ ಅವರ ಗುರುಕೃಪಾ ಸಂಗೀತಾ ಕಲಾ ತಂಡದಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಮನಪರಿವರ್ತನೆ ಗೀತೆಗಳನ್ನು ಹಾಡಲಾಯಿತು.


ಈ ಸಂದರ್ಭದಲ್ಲಿ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ನಟೇಶ್, ಎಐಟಿ ಕಾಲೇಜು ಪ್ರಾಂಶುಪಾಲ ಜಯದೇವ್, ಐಡಿಎಸ್‌ಜಿ ಕಾಲೇಜು ಉಪನ್ಯಾಸಕ ಮಹೇಶ್, ಜೈಲರ್ ಎಂ.ಕೆ. ನೆಲಧರಿ,  ಸಂಗೀತ ಶಿಕ್ಷಕ ಜಯಣ್ಣ, ಆನಂದ್, ಭುವನೇಶ್ವರಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!