ಜೂ.1 ರಂದು ಶಿವಮೊಗ್ಗದಲ್ಲಿ ಸಾವಿರ ಕೆಪಿಎಸ್ ಶಾಲೆಗಳಿಗೆ ಸಿಎಂ ಶಂಕುಸ್ಥಾಪನೆ ; ಮಧು ಬಂಗಾರಪ್ಪ

Written by Mahesha Hindlemane

Published on:

ಶಿವಮೊಗ್ಗ : ಬೆಲೆ ಕಟ್ಟಲಾಗದ ಗ್ಯಾರಂಟಿಯಾದ ಶಿಕ್ಷಣವನ್ನು ಇಡೀ ದೇಶಕ್ಕೇ ಮಾದರಿಯಾಗಿ ನಮ್ಮ ರಾಜ್ಯ ನೀಡುತ್ತಿದ್ದು ಜೂನ್ 01 ರಂದು ಒಂದು ಸಾವಿರ ಕೆಪಿಎಸ್ ಶಾಲೆಗಳಿಗೆ ಶಿವಮೊಗ್ಗದ ಅಲ್ಲಮ ಪ್ರಭು‌ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸುವರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶುಕ್ರವಾರ ನಗರದ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪರಿಶೀಲಿಸಿದ ನಂತರ ಅವರು ಮಾತನಾಡಿ, ರಾಜ್ಯದಲ್ಲಿ ತಲಾ ಅಂದಾಜು ₹ 3.5 ಕೋಟಿ ವೆಚ್ಚದಲ್ಲಿ 1000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಈ ಶಾಲೆಗಳಲ್ಲಿ ಒಂದೇ ಸೂರಿನಡಿ ಸಕಲ ಸೌಲಭ್ಯ ಒದಗಲಿದ್ದು,
ಇದೊಂದು ಬ್ರಾಂಡ್ ಆಗಿದೆ. ಹಾಗೂ ಮಕ್ಕಳ ಭವಿಷ್ಯದ ಆಶಾಕಿರಣವಾಗಿದೆ ಎಂದರು.

800 ಶಾಲೆಗಳನ್ನು ಶಿಕ್ಷಣ ಇಲಾಖೆ ಹಾಗೂ
200 ಶಾಲೆಗಳನ್ನು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಿಯುಸಿ ಪರೀಕ್ಷೆ -2 ರಲ್ಲಿ ಶೇ.45 ಫಲಿತಾಂಶ ಬಂದಿದೆ. ಈಗ ಪಿಯುಸಿ ಫಲಿತಾಂಶ ಶೇ. 92.25 ಏರಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು.

ಈ ತಿಂಗಳ ಕೊನೆಯಲ್ಲಿ ಎಸ್ಎಸ್ಎಲ್ಸಿ ಎರಡನೇ ಪರೀಕ್ಷೆ ಫಲಿತಾಂಶ ಬರಲಿದ್ದು ಉತ್ತಮ‌ ಫಲಿತಾಂಶ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿತ್ತಿದ್ದು ಶೇ.60 ಅಂಕ ಗಳಿಸಿದ ಶೇ. 62 ಮಕ್ಕಳಿದ್ದರು. ಇದೀಗ ಶೇ. 60 ಅಂಕ ಗಳಿಸಿದ ಶೇ.66.5 ಮಕ್ಕಳಿದ್ದು
4.5% ರಷ್ಟು ಹೆಚ್ಚಳ ಆಗಿದೆ ಎಂದರು.

ಅಧಿಕಾರ ವಹಿಸಿಕೊಂಡ ತಕ್ಷಣ ಇಲಾಖೆಗೆ ಅತ್ಯಗತ್ಯವಾದ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.

ಜೂನ್ 1 ರಂದು ಶಿವಮೊಗ್ಗದಲ್ಲಿ 7 ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ಅಂದು ಆಗುತ್ತದೆ. ನಂತರ ಉಳಿದ ಶಾಲೆಗಳ‌ ಡಿಪಿಆರ್ ಸಿದ್ದಗೊಳ್ಳಲಿದೆ ಎಂದ ಅವರು ಅಂದು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು ಇಡಲಾಗುವುದು.

ತುಮಕೂರಿನಲ್ಲಿ‌ ಇತ್ತೀಚೆಗೆ ಮುಖ್ಯಮಂತ್ರಿಗಳು ₹ 600 ಕೋಟಿ ಕಾಮಗಾರಿ ಘೋಷಣೆ ಮಾಡಿದ್ದು, ಅದೇ ರೀತಿಯಲ್ಲಿ ಇಲ್ಲಿಯೂ ಸಹ ಮಾಡುವರು. ಜೂ.01 ರ ಕಾರ್ಯಕ್ರಮದಂದು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಮಕ್ಕಳ‌ ಜೊತೆಯಲ್ಲಿಯೇ ಊಟ ಮಾಡುವರು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ :

ಎಸ್ಎಸ್ಎಲ್ಸಿಯಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ 867 ವಿದ್ಯಾರ್ಥಿಗಳು ಹಾಗೂ ರಾಜ್ಯದಿಂದಲೂ ವಿದ್ಯಾರ್ಥಿಗಳನ್ನು ಕರೆಯಿಸಿ ಅಂದು ಸನ್ಮಾನಿಸಿ ಅಭಿನಂಧಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ 12 ಕೆಪಿಎಸ್ ಶಾಲೆಗಳಿವೆ. ಇದೀಗ ಹೊಸದಾಗಿ 19 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು ಹಾಗೂ ಖಾಸಗಿ ಸಂಸ್ಥೆಯೊಂದು ₹ 12 ಕೋಟಿಗಳನ್ನು ಶಾಲೆಗಳ ಉನ್ನತೀಕರಣಕ್ಕೆ ಸಿಎಸ್ಆರ್ ನಿಧಿಯನ್ನು‌ ಘೋಷಿಸಿದ್ದಾರೆಂದು ತಿಳಿಸಿದರು.

ಅಡಿಕೆ ಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ಗೆ ಬೇಡಿಕೆ :

ಇತ್ತೀಚೆಗೆ ಜಿಲ್ಲೆಯಲ್ಲಿ ಬಿರುಗಾಳಿ‌ ಮತ್ತು ಮಳೆಗೆ ಹೊಳೆಹೊನ್ನೂರು ವ್ಯಾಪ್ತಿಯ ಗ್ರಾಮಗಳು‌ ಮತ್ತು ಇತರೆಡೆ ಅಡಿಕೆ ಬೆಳೆಗಳು ಹಾನಿಗೀಡಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳ ಬಳಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಎಸ್ಐಆರ್ :

ಮತದಾನ ನಮ್ಮೆಲ್ಲರ ಮೂಲಭೂತ ಹಕ್ಕು. ಎಸ್ಐಆರ್ ಪ್ರಕ್ರಿಯೆಯನ್ನು ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು ಹಾಗೂ ಮತದಾರರು ಸಹ ತಮ್ಮ ಹಕ್ಕಾದ ಮತದಾನಕ್ಕೆ ಸಂಬಂಧಿಸಿದ ಎಸ್ಐಆರ್ ಪ್ರಕ್ರಿಯೆಯಲ್ಲಿ ಎಚ್ಚರಿಕೆಯಿಂದ ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ವಿಧಾನ ಪರಿಷತ್ ಮಾಜಿ ಶಾಸಕ ಆಯನೂರು‌ ಮಂಜುನಾಥ್, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಎನ್.ಹೇಮಂತ್, ಎಸ್ ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿ ಸತ್ಯನಾರಾಯಣ್ ಇತರೆ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

Leave a Comment