ಹೊಸನಗರ ; ಸಿದ್ದರಾಮಯ್ಯನವರ ಸರ್ಕಾರದ ಆಡಳಿತದಲ್ಲಿ ದಿನನಿತ್ಯ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್ ಹೇಳಿದರು.
ಪಟ್ಟಣದಲ್ಲಿ ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್ ಪಕ್ಷದ ವತಿಯಿಂದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಂದಾಯ ಇಲಾಖೆಯ ಗ್ರೇಡ್ 2ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬಿಟ್ಟೋರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿ ಹೃದಯಾಘಾತ ಸಾವು ದಿನೇ ದಿನೇ ಏರುತ್ತಿದ್ದು ಈವರೆಗೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಸಂಪುಟದ ಕೆಲವು ಸಚಿವರ ಮೇಲೆ ಭ್ರಷ್ಟಾಚಾರ ನಡೆಸಿದ ಬಗ್ಗೆ ಶಾಸಕರು ಮತ್ತು ಮಾಧ್ಯಮದವರು ನಿತ್ಯ ಸುದ್ದಿ ಮಾಡುತ್ತಿದ್ದರು ಸಹ ಆಡಳಿತಾತ್ಮಕವಾಗಿ ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ಮುಖ್ಯಮಂತ್ರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ದಿನನಿತ್ಯ ಕುರ್ಚಿಗಾಗಿ ಮುಸುಕಿನ ಗುದ್ದಾಟದಲ್ಲಿ ಸಮಯ ಕಳೆಯುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲಾ ಅಧಿಕಾರಿಗಳ ಜೊತೆ ಹೊಂದಾಣಿಕೆ ಕೊರತೆ ಎದ್ದು ತೋರುತ್ತಿದೆ. ಆರ್.ಸಿ.ಬಿ ಯಂತಹ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವೇ ನೇರ ಕಾರಣವಿದ್ದರೂ ಕೆಲವು ಅಧಿಕಾರಿಗಳ ಸೇವೆ ವಜಾ ಮಾಡಿದರು ಸಹ ಇದಕ್ಕೆ ನೇರ ಕಾರಣ ಕರ್ತರಾದ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಮುಂದೆ ಕ್ಷಮೆ ಈವರೆಗೂ ಕೋರಲಿಲ್ಲ. ಉಡಾಫೆ ಉತ್ತರವನ್ನು ನೀಡಿ ರಾಜ್ಯದ ಜನತೆಯನ್ನು ಮತ್ತು ಮಡಿದವರ ಕುಟುಂಬವನ್ನು ನಿರ್ಲಕ್ಷ್ಯಿಸಿದ್ದಾರೆ.

ರಾಜ್ಯದ ಅಭಿವೃದ್ದಿಯನ್ನು ಸರಿಪಡಿಸಲು ಹಣಕಾಸು ಬಿಕ್ಕಟ್ಟು ಇದ್ದರು ಸಹ ಸರಿಪಡಿಸಲು ಪ್ರಯತ್ನ ಪಡುತ್ತಿಲ್ಲ ರಾಜ್ಯದಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಈವರೆಗೂ ಹಣ ಪಾವತಿಸಿಲ್ಲ ರಾಜ್ಯದ ಖಜಾನೆ ಖಾಲಿ ಮಾಡಲು ಇವರ ಅವೈಜ್ಞಾನಿಕ ನೀತಿಯೆ ಕಾರಣವಾಗಿದೆ. 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮಂಡಿಸಿ ಅನುಮೋದನೆ ನೀಡಿದ ಹಣಕಾಸನ್ನು ಯಾವುದೇ ಇಲಾಖೆಯ ಯೋಜನೆಗಳಿಗೆ ಈವರೆಗೂ ನೀಡಿರುವುದಿಲ್ಲ. ಕಾರಣ ಆರ್ಥಿಕ ಬಿಕ್ಕಟ್ಟು ತಲೆದೋರಿದ ಪರಿಣಾಮವಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರವನ್ನು ನಡೆಸಲು ಆಡಳಿತಾತ್ಮಕ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಹಾಗೂ ಕುರ್ಚಿಯ ಮುಸುಕಿನ ಗುದ್ದಾಟದಿಂದ ಸರ್ಕಾರ ನಡೆಸುವ ನೈತಿಕ ಸ್ಥೈರ್ಯಯಿಲ್ಲದೆ ಇರುವ ಕಾರಣ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆಗಳ ಹಂಚಿಕೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವ ಜಮೀರ್ ಅಹ್ಮದ್ ರವರ ವಿರುದ್ಧ ಆಪಾದನೆ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಹೊತ್ತಿರುವ ಬಿ.ಝೆಡ್ ಜಮೀರ್ ಅಹ್ಮದ್ಖಾನ್ ರವರನ್ನು ಮತ್ತು ಎಸ್.ಸಿ.ಎಸ್.ಟಿ ವಾಲ್ಮೀಕಿ ನಿಗಮದ ಅಧ್ಯಕ್ಷ ನಾಗೇಂದ್ರ ರವರನ್ನು ಸಂಪುಟದಿಂದ ವಜಾಗೊಳಿಸದೇ ಈಗಲೂ ಮುಂದುವರಿಸದಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕಾರಣದಿಂದ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ಈ ಮನವಿ ಪತ್ರ ನೀಡುವುದರ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಎಂ. ವಿ ಜಯರಾಮ್, ಟೌನ್ ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ರಾಮಣ್ಣ, ರಮಾನಂದ, ಕೃಷ್ಣಮೂರ್ತಿ ಆರ್.ಎನ್ ಮಂಜುನಾಥ್, ಕಾಯಿ ನಾಗೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.