ಹೊಸನಗರ: ಇಲ್ಲಿನ ಪಟ್ಟಣ ಪಂಚಾಯತಿಗೆ ಸೇರಿದ ಕಬ್ಬಿಣದ ಹಲವಾರು ರಾಡ್, ಪೈಪ್, ಪಂಪ್ ಸೆಟ್ ಮೋಟಾರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಅನುಪಯುಕ್ತ ಸಾಮಾಗ್ರಿಗಳನ್ನು ಪಟ್ಟಣ ಪಂಚಾಯತಿ ಸದಸ್ಯರ ಗಮನಕ್ಕೆ ತಾರದೆ ಅಧಿಕಾರಿಗಳು ಏಕಾಏಕೀ ಅಕ್ರಮ ವಿಲೇವಾರಿ ಮಾಡಿರುವುದಾಗಿ ಸದಸ್ಯ ಕೆ.ಕೆ.ಅಶ್ವಿನಿ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಈ ಬಗ್ಗೆ 2025ರ ಮೇ 20 ಕ್ಕೆ ಅನುಪಯುಕ್ತ ವಸ್ತುಗಳ ವಿಲೇವಾರಿಗೆ ಗುಜರಿ ವ್ಯಾಪಾರಿಗಳಿಂದ ದರಪಟ್ಟಿ ಸಲ್ಲಿಸಲು ತಿಳಿಸಲಾಗಿತ್ತು. ಸದರಿ ದರಪಟ್ಟಿಯು 2025ರ ಜೂನ್ 13ರ ಸಾಮಾನ್ಯಸಭೆಯ ವಿಷಯಸೂಚಿ 05ರಲ್ಲಿ ಈ ದರಪಟ್ಟಿ ಅನುಮೋದನೆ ಗೊಂಡಿತ್ತು.
ಇದೇ 2025ರ ಜೂನ್16ಕ್ಕೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ, 27ರ ಜೂನ್ ಟೆಂಡರ್ ಸಮಯ ಕೊನೆಗೊಂಡಿದ್ದು ಅಂದೇ ಮಧ್ಯಾಹ್ನ 3/30ಕ್ಕೆ ಟೆಂಡರ್ ತೆರೆಯಲಾಗಿತ್ತು. ಆದರೆ, ಅನುಪಯುಕ್ತ ವಸ್ತುಗಳ ಕುರಿತಂತೆ ಯಾವುದೇ ತುಲನಾತ್ಮಕ ಪಟ್ಟಿಯನ್ನು ಮಾಡಿಲ್ಲ. ದರ ಪಟ್ಟಿಗೆ ಕೌನ್ಸಿಲ್ ಬಾಡಿಯಿಂದ ಅನುಮೋದನೆಯನ್ನೇ ಪಡೆದಿಲ್ಲ. ತರಾತುರಿಯಲ್ಲಿ ಅಧಿಕಾರಿಗಳು ಏಕಾಏಕೀ ಲಕ್ಷಾಂತರ ಬೆಲೆಯ ಅನುಪಯುಕ್ತ ವಸ್ತುಗಳ ಅಕ್ರಮವಾಗಿ ಟೆಂಡರುದಾರನಿಗೆ ವಿಲೇವಾರಿ ಮಾಡಿದ್ದಾರೆ. ಈ ಮಧ್ಯ ಯಾವುದೇ ಕೌನ್ಸಿಲ್ ಸಭೆ ನಡೆದಿರುವುದಿಲ್ಲ. ಅಲ್ಲದೆ, ವಿಲೇವಾರಿಯಾದ ವಸ್ತುಗಳು ಯಾರಿಗೆ, ಎಲ್ಲಿಗೆ ವಿಲೇವಾರಿ ಆಗಿದೆ ?! ಎಂಬ ಸಂಗತಿಯನ್ನು ಸದಸ್ಯರಿಂದ ಮರೆಮಾಚಲಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿ ಅವರನ್ನು ಮೌಖಿಕವಾಗಿ ವಿಚಾರಿಸಿದಾಗ ಸಮಂಜಸ ಉತ್ತರ ನೀಡದೆ ಬರೀ ಹಾರಿಕೆಯ ಉತ್ತರವನ್ನೇ ನೀಡಿರುತ್ತಾರೆ. ಪಟ್ಟಣ ಪಂಚಾಯತಿಯ ಆಡಳಿತ ಸಮಿತಿ ಒಪ್ಪಿಗೆ ಪಡೆಯದೆ, ಏಕಾಏಕೀ ಅನುಪಯುಕ್ತ ವಸ್ತುಗಳ ವಿಲೇವಾರಿ ಕಾರ್ಯ ಕಾನೂನಿನ ಪ್ರಕಾರ ನೇರ ಅಪರಾಧವಾಗಿದೆ.
ಕಳೆದ ದಶಕಗಳ ಹಿಂದೆ ಇದೇ ಪಟ್ಟಣ ಪಂಚಾಯಿತಿಯಲ್ಲಿಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರಾಮಚಂದ್ರಪ್ಪ ಎಂಬಾತ ಲಕ್ಷಾಂತರ ರೂ ಮೌಲ್ಯದ ಅನುಪಯುಕ್ತ ವಸ್ತುಗಳನ್ನು ಚುನಾಯಿತ ಸದಸ್ಯರ ಸಭೆಗೆ ತಾರದೆ, ರಾತ್ರೋರಾತ್ರಿ ವಿಲೇವಾರಿ ಮಾಡಿ, ಸೇವೆಯಿಂದ ಅಮಾನತು ಗೊಂಡು, ನಂತರ ನಿವೃತ್ತಿ ವೇಳೆಯಲ್ಲಿ ಸೇವೆಯಿಂದ ವಜಾಗೊಂಡ ಪ್ರಕರಣ ಇನ್ನೂ ಹಚ್ಚಹಸಿರಾಗಿರುವಾಗ ಇಂತಹ ಅಕ್ರಮ ವಿಲೇವಾರಿ ಕಾರ್ಯ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಅಗ್ರಹಿಸಿದ್ದಾರೆ. ತಪ್ಪಿಸಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.